ಮೊಹಾಲಿಯ ಗುರುದ್ವಾರದಲ್ಲಿ ಮೂವರಿಗೆ ಇರಿದ ವ್ಯಕ್ತಿ

Update: 2018-02-19 14:12 GMT

ಮೊಹಾಲಿ, ಫೆ.19: ಮೊಹಾಲಿಯ ಗುರುದ್ವಾರವೊಂದರಲ್ಲಿ ವ್ಯಕ್ತಿಯೊಬ್ಬ ರಂಪಾಟ ನಡೆಸಿ ಹರಿತವಾದ ಆಯುಧದಿಂದ ಮೂವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ರವಿವಾರ ನಡೆದಿದೆ.

30ರ ಹರೆಯದ ಆರೋಪಿಯನ್ನು ಬಲ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು ಈತ ಚಂಡೀಗಡ ಜಿಲ್ಲಾ ನ್ಯಾಯಾಲಯದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ವರದಿಯಾಗಿದೆ. ರವಿವಾರ ಸಂಜೆ ವೇಳೆ ಮೊಹಾಲಿಯ ಸೆಕ್ಟರ್ 62ರಲ್ಲಿರುವ ಗುರುದ್ವಾರ ಧನ ಭಗತ್ ಸಿಂಗ್‌ಜಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಜನ ಸೇರಿದ್ದರು. ಆಗ ಏಕಾಏಕಿ ರಂಪಾಟ ಆರಂಭಿಸಿದ ಬಲ್ವಿಂದರ್ ವಿನಾಕಾರಣ ಮಂಜಿತ್ ಸಿಂಗ್ ಎಂಬವರ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾನೆ. ಮಂಜಿತ್ ಎಡಗೈಗೆ ಗಾಯವಾಗಿದೆ. ಅವರನ್ನು ರಕ್ಷಿಸಲು ಧಾವಿಸಿದ ಭೂಪಿಂದರ್ ಸಿಂಗ್ ಹಾಗೂ ಜೋಗಿಂದರ್ ಸಿಂಗ್ ಅವರಿಗೂ ಗಾಯವಾಗಿದೆ. ಬಳಿಕ ಅಲ್ಲಿ ಸೇರಿದ್ದವರು ಬಲ್ವಿಂದರ್‌ನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದರು.

 ಮಂಜಿತ್‌ರನ್ನು ಮೊಹಾಲಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಇಬ್ಬರು ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗೆಗೊಳಿಸಲಾಗಿದೆ. ಬಲ್ವಿಂದರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News