ಸಿಂಬಾಗೆ ಸೈಫ್ ಪುತ್ರಿ ನಾಯಕಿ

Update: 2018-02-24 12:18 GMT

ಸೈಫ್ ಅಲಿ ಖಾನ್ ಹಾಗೂ ಅವರ ಪರಿತ್ಯಕ್ತ ಪತ್ನಿ ಅಮೃತಾಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್, ‘ಕೇದಾರ್‌ನಾಥ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಬೇಕಾಗಿತ್ತು. ಅಭಿಷೇಕ್ ಕಪೂರ್ ನಿರ್ದೇಶನದ ಈ ಚಿತ್ರಕ್ಕೆ ಸುಶಾಂತ್‌ಸಿಂಗ್ ರಜಪೂತ್ ನಾಯಕನಾಗಿದ್ದರು. ಆದರೆ ಚಿತ್ರದ ನಿರ್ಮಾಪಕರಾದ ಕ್ರಿಆರ್ಜ್ ಎಂಟರ್‌ಟೈನ್‌ಮೆಂಟ್‌ನ ನಿರ್ಮಾಪಕ ಪ್ರೇರಣಾ ಆರೋರಾ ಅವರು, ನಿರ್ದೇಶಕರ ವಿರುದ್ಧ ಕಾನೂನುಸಮರ ಸಾರಿರುವುದೇ ಕೇದಾರ್‌ನಾಥ್ ಚಿತ್ರ ಸ್ಥಗಿತಗೊಳ್ಳಲು ಕಾರಣವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕೇದಾರ್‌ನಾಥ್‌ನ ಶೂಟಿಂಗ್ ಕೇವಲ ನಾಲ್ಕು ತಿಂಗಳಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ ನಿರ್ದೇಶಕ ಅಭಿಷೇಕ್ ಕಪೂರ್‌ರ ವೃತ್ತಿಪರವಲ್ಲದ ನಡವಳಿಕೆ ಹಾಗೂ ಕೆಟ್ಟ ನಿರ್ವಹಣೆಯು ಚಿತ್ರದ ಶೂಟಿಂಗ್ ಆಮೆಗತಿಯಲ್ಲಿ ಸಾಗುವಂತೆ ಮಾಡಿದೆ ಹಾಗೂ ಹಲವಾರು ಬಾರಿ ಸ್ಥಗಿತಗೊಳಿಸಿದೆಯೆಂದು ನಿರ್ಮಾಪಕಿ ಪ್ರೇರಣಾರ ಆರೋಪವಾಗಿದೆ. ಹೀಗೆ ತನ್ನ ಚೊಚ್ಚಲ ಚಿತ್ರ ವಿವಾದದಲ್ಲಿ ಮುಳುಗಿರುವುದರಿಂದ, ಸಾರಾ ಈಗ ರಣವೀರ್‌ಸಿಂಗ್ ಅಭಿನಯದ ‘ಸಿಂಬಾ’ದ ಮೂಲಕ ಬಾಲಿವುಡ್ ರಂಗಪ್ರವೇಶಕ್ಕೆ ಸಿದ್ಧರಾಗುತ್ತಿದ್ದಾರೆ. ‘ಸಿಂಗಂ’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಗೋಲ್‌ಮಾಲ್ ಎಗೇನ್’ನಂತಹ ಸೂಪರ್‌ಡ್ಯೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ರೋಹಿತ್ ಶೆಟ್ಟಿ ನಿರ್ದೇಶಿಸಿರುವ ‘ಸಿಂಬಾ’ ಡಿಸೆಂಬರ್ 28ರಂದು ರಿಲೀಸ್ ಆಗಲಿದೆ. ‘ಸಿಂಗಂ’ ಸಿನೆಮಾ ಮಾದರಿಯ ಸೂಪರ್‌ಕಾಪ್ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ರಣವೀರ್‌ಸಿಂಗ್, ಸಂಗ್ರಾಮ್ ಭಲೆರಾವ್ ಯಾನೆ ಸಿಂಬಾ ಎಂಬ ದಿಟ್ಟ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.

ಈ ನಡುವೆ ಕಳೆದ ವರ್ಷದ ಸೂಪರ್‌ಹಿಟ್ ಚಿತ್ರ ಹಿಂದಿ ಮೀಡಿಯಂನ ಮುಂದುವರಿದ ಭಾಗದಲ್ಲಿ ಸಾರಾ ನಟಿಸಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಆ ಚಿತ್ರದಲ್ಲಿ ಸಾರಾ ಅವರು ಇರ್ಫಾನ್ ಖಾನ್‌ರ ಹದಿಹರೆಯದ ಪುತ್ರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಒಟ್ಟಿನಲ್ಲಿ ತನ್ನ ಮೊದಲ ಚಿತ್ರದ ನಿರ್ಮಾಣ ಮುಗ್ಗರಿಸಿದರೂ, ಬೇಡಿಕೆಗಳು ಅರಸಿಬರುತ್ತಿರುವುದು ಸಾರಾಗೆ ಸಂತಸ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News