ತನ್ನ ಎಲ್ಲ ಹಣವನ್ನು ಸಂಜಯ್ ದತ್ ಗೆ ಉಯಿಲು ಬರೆದು ಹೋದ ಅಭಿಮಾನಿ, ಆದರೆ...

Update: 2018-03-07 15:32 GMT

ಹೊಸದಿಲ್ಲಿ, ಮಾ.7: ಜನವರಿ 29ರಂದು ಪೊಲೀಸರಿಂದ ಕರೆ ಬರುವವರೆಗೂ ಬಾಲಿವುಡ್ ನಟ ಸಂಜಯ್ ದತ್ ರಿಗೆ ನಿಶಿ ತ್ರಿಪಾಠಿ ಯಾರೆಂದೇ ಗೊತ್ತಿರಲಿಲ್ಲ. ಅಂದು ಕರೆ ಮಾಡಿದ್ದ ಪೊಲೀಸರು, “ನಿಮ್ಮ ಅಭಿಮಾನಿಯೊಬ್ಬರು ಮೃತಪಟ್ಟಿದ್ದಾರೆ ಹಾಗು ಅವರು ನಿಮ್ಮ ಹೆಸರಿಗೆ ಉಯಿಲು ಬರೆದಿದ್ದಾರೆ” ಎಂದಿದ್ದರು. ಇದನ್ನು ಕೇಳಿದ್ದ ಸಂಜಯ್ ದತ್ ಗೆ ಒಂದು ಕ್ಷಣ ಆಶ್ಚರ್ಯವೂ, ಆಘಾತವೂ ಆಗಿತ್ತು.

ಮಲಬಾರ್ ಹಿಲ್ ನಿವಾಸಿಯಾಗಿದ್ದ ನಿಶಿ ತ್ರಿಪಾಠಿ ಸಂಜಯ್ ದತ್ ಅವರ ಅಭಿಮಾನಿಯಾಗಿದ್ದರು. 62ನೆ ವಯಸ್ಸಿಗೆ ನಿಶಿ ಅಸೌಖ್ಯದಿಂದ ಮೃತಪಟ್ಟರು. ಆ ಸಂದರ್ಭ ನಿಶಿಯವರ ಉಯಿಲು ಪರೀಕ್ಷಿಸಿದ ಕುಟುಂಬಸ್ಥರಿಗೆ ಆಘಾತ ಕಾದಿತ್ತು. ತನ್ನಲ್ಲಿದ್ದ ಎಲ್ಲಾ ಹಣವನ್ನು ನಿಶಿ ಸಂಜಯ್ ದತ್ ಹೆಸರಿಗೆ ಬರೆದಿಟ್ಟಿದ್ದರು. ಈ ಬಗ್ಗೆ ಅವರು ಬ್ಯಾಂಕ್ ಗೂ ಹಲವು ಪತ್ರಗಳನ್ನು ಬರೆದಿದ್ದರು.

ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಲಾಕರನ್ನು ಇನ್ನೂ ತೆರೆದಿಲ್ಲ. ನಿಶಿಯವರ ಹಣ ಅಥವಾ ಆಸ್ತಿಯಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಸಂಜಯ್ ದತ್ ಈಗಾಗಲೇ ತಮ್ಮ ವಕೀಲರ ಮೂಲಕ ಸ್ಪಷ್ಟಪಡಿಸಿದ್ದು, ಅವೆಲ್ಲವೂ ನಿಶಿಯವರ ಕುಟುಂಬಕ್ಕೆ ಸೇರಬೇಕು ಎಂದಿದ್ದಾರೆ.

80 ವರ್ಷದ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ನಿಶಿ ಅನಾರೋಗ್ಯದಿಂದ ಬಳಲುತ್ತಿದ್ದರು. ಮಲಬಾರ್ ಹಿಲ್ಸ್ ನ ತ್ರಿವೇಣಿ ಅಪಾರ್ಟ್ ಮೆಂಟ್ ನಲ್ಲಿ ಅವರು ವಾಸವಾಗಿದ್ದರು.

“ನಮ್ಮ ಹೆಸರುಗಳನ್ನು ಅವರ ಮಕ್ಕಳಿಗೆ ಇಡುವ ಅಭಿಮಾನಿಗಳನ್ನು, ಬೀದಿಯಲ್ಲಿ ನಮ್ಮನ್ನು ಹಿಂಬಾಲಿಸಿ ಉಡುಗೊರೆಗಳನ್ನು ನೀಡುವ ಅಭಿಮಾನಿಗಳನ್ನು ನಾನು ನೋಡಿದ್ದೆ. ಆದರೆ ಇದನ್ನು ಕೇಳಿ ನಾನೊಮ್ಮೆ ಆಘಾತಕ್ಕೊಳಗಾಗಿದ್ದೆ. ನಾನು ಏನನ್ನೂ ತೆಗೆದುಕೊಳ್ಳುವುದಿಲ್ಲ” ಎಂದು ಸಂಜಯ್ ದತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News