×
Ad

ಪದ್ಮ ಭೂಷಣ ಸ್ವೀಕರಿಸಲು ಧೋನಿ ಹೇಗೆ ಬಂದರು ನೋಡಿ…

Update: 2018-04-02 20:51 IST

ಹೊಸದಿಲ್ಲಿ, ಎ.2: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಹಲವು ಬಾರಿ ವಿಶ್ವ ಚಾಂಪಿಯನ್‌ಪಟ್ಟಕ್ಕೇರಿರುವ ಬಿಲಿಯರ್ಡ್ಸ್ ಪಟು ಪಂಕಜ್ ಅಡ್ವಾಣಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮ ಭೂಷಣ’ವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರಿಂದ ಸ್ವೀಕರಿಸಿದ್ದಾರೆ.

 ಧೋನಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಜಯಿಸಿ ಏಳು ವರ್ಷ ಪೂರೈಸಿದ ದಿನವೇ ಪ್ರತಿಷ್ಠಿತ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಸ್ವೀಕರಿಸಿದ್ದು ಪ್ರಾಸಂಗಿಕವಾಗಿತ್ತು. ಧೋನಿ 2011ರ ಎ.2 ರಂದು ಮುಂಬೈನಲ್ಲಿ ವಿಶ್ವಕಪ್‌ನ್ನು ಜಯಿಸಿದ್ದರು. ಈ ಮೂಲಕ ಭಾರತದ 28 ವರ್ಷಗಳ ವಿಶ್ವಕಪ್ ಕನಸು ಈಡೇರಿಸಿದ್ದರು.

ಗೌರವ ಲೆಫ್ಟಿನೆಂಟ್ ಕರ್ನಲ್ ಸಮವಸ್ತ್ರದಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಧೋನಿ ತನ್ನ ಹೆಸರು ಕರೆದಾಗ ಯೋಧನಂತೆಯೇ ನಡೆದುಕೊಂಡು ಹೋಗಿ ಪ್ರಶಸ್ತಿ ಸ್ವೀಕರಿಸಿದರು.

 ಭಾರತೀಯ ಭೂ ಸೇನೆ 2011ರ ನವೆಂಬರ್ 1 ರಂದು ಧೋನಿಗೆ ಲೆಫ್ಟಿನೆಂಟ್ ಕರ್ನಲ್ ಗೌರವ ರ್ಯಾಂಕ್ ನೀಡಿ ಗೌರವಿಸಿತ್ತು. ಭಾರತ ಎರಡನೇ ಬಾರಿ ವಿಶ್ವಕಪ್ ಜಯಿಸಿದ ಕೆಲವೇ ತಿಂಗಳ ಬಳಿಕ ಧೋನಿಗೆ ಈ ಗೌರವ ಲಭಿಸಿತ್ತು.

37ರ ಹರೆಯದ ಧೋನಿ ಅವರು ಕಪಿಲ್‌ದೇವ್ ಬಳಿಕ ಈ ಗೌರವಕ್ಕೆ ಪಾತ್ರರಾಗಿರುವ ಭಾರತದ ಎರಡನೇ ಕ್ರಿಕೆಟಿಗನಾಗಿದ್ದಾರೆ.

 ಧೋನಿ ಈತನಕ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2008 ಹಾಗೂ 2009ರಲ್ಲಿ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ(ಎರಡು ಬಾರಿ ಈ ಗೌರವಕ್ಕೆ ಪಾತ್ರವಾದ ಮೊದಲ ಆಟಗಾರ)ಪ್ರಶಸ್ತಿಯನ್ನು ಪಡೆದಿದ್ದರು. 2007ರಲ್ಲಿ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಹಾಗೂ 2009ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ಶ್ರೀ ಪ್ರಶಸ್ತಿಯನ್ನು ಜಯಿಸಿದ್ದರು.

 ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ 2006ರಲ್ಲಿ ದೋಹಾ ಹಾಗೂ 2010ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದಾರೆ. ಈ ನಡುವೆ ಹಲವು ಬಾರಿ ವಿಶ್ವ ಚಾಂಪಿಯನ್ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಪುರುಷರ ಸಿಂಗಲ್ಸ್ ಶಟ್ಲರ್ ಕಿಡಂಬಿ ಶ್ರೀಕಾಂತ್, ಮಾಜಿ ಟೆನಿಸ್ ಆಟಗಾರ ಸೋಮ್‌ದೇವ್ ದೇವ್‌ವರ್ಮನ್, 2017ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್(48ಕೆಜಿ ವಿಭಾಗ)ಸೈಖೋಮ್ ಮಿರಾಬಾಯ್ ಚಾನು ಹಾಗೂ ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಮುರಳೀಕಾಂತ್ ಪೇಟ್ಕರ್ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಶ್ರೀ ಅವಾರ್ಡ್‌ಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News