ಐಎಎಫ್ ಹೆಲಿಕಾಪ್ಟರ್ ಪತನ
ಕೇದಾರನಾಥ್, ಎ. 3: ಭಾರತೀಯ ವಾಯು ಪಡೆಗೆ ಸೇರಿದ ಸಾಗಾಟ ಹೆಲಿಕಾಪ್ಟರ್ ಉತ್ತರಾಖಂಡದ ಕೇದಾರನಾಥ್ ದೇವಾಲಯದ ಸಮೀಪ ಇರುವ ಹೆಲಿಪ್ಯಾಡ್ನಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಕಬ್ಬಿಣದ ಗಿರ್ಡರ್ಗೆ ಢಿಕ್ಕಿಯಾಗಿ ಪತನಗೊಂಡಿದೆ. ಘಟನೆಯಲ್ಲಿ ಭಾರತೀಯ ವಾಯು ಪಡೆಯ ನಾಲ್ವರು ಪೈಲೆಟ್ಗಳು ಗಾಯಗೊಂಡಿದ್ದಾರೆ. ಆದರೆ, ಅಪಾಯದಿಂದ ಪಾರಾಗಿದ್ದಾರೆ. ಹೆಲಿಕಾಪ್ಟರ್ ಆರು ಮಂದಿ ಪ್ರಯಾಣಿಕರು, ಓರ್ವ ಪೈಲೆಟ್ ಹಾಗೂ ಇನ್ನೋರ್ವ ಸಹ ಪೈಲೆಟ್ ಅನ್ನು ಹೊಂದಿತ್ತು.
ಕಬ್ಬಿಣದ ಗಿರ್ಡರ್ಗೆ ಢಿಕ್ಕಿಯಾದ ಪರಿಣಾಮ ಭಾರತೀಯ ವಾಯು ಪಡೆಯ ರಶ್ಯನ್ ಮೂಲದ ಸಾಗಾಟ ಹೆಲಿಕಾಪ್ಟರ್ ಎಂಐ-17 ವಿ5ಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ನಿಯಂತ್ರಿಸಲಾಗಿದೆ. ಆದಾಗ್ಯೂ, ಹೆಲಿಕಾಪ್ಟರ್ ಎಂಜಿನ್ ಕಂಪಾರ್ಟ್ಮೆಂಟ್ನಿಂದ ನಿರಂತರ ಹೊಗೆ ಸೂಸುತ್ತಿರುವುದು ಮುಂದುವರಿದಿದೆ. ವಿಮಾನ ಕೆಳಗಿಳಿಯುವ ಸಂದರ್ಭ ಪತನಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ವಾಯು ಪಡೆ ತನಿಖೆ ಆರಂಭಿಸಿದೆ. ‘‘ಎಂಐ-17 ವಿ5 ಹೆಲಿಕಾಪ್ಟರ್ ಉತ್ತರಖಂಡದ ಕೇದಾರ್ನಾಥ್ ಸಮೀಪ ಇಂದು ಬೆಳಗ್ಗೆ ಪತನಗೊಂಡಿದೆ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಅಪಘಾತ ಕಾರಣ ಏನು ಎಂಬುದರ ಬಗ್ಗೆ ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ’’ ಎಂದು ಭಾರತೀಯ ವಾಯು ಪಡೆಯ ಹೇಳಿಕೆ ತಿಳಿಸಿದೆ.