ಕೇಜ್ರಿವಾಲ್ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣ ಕೈಬಿಟ್ಟ ದಿಲ್ಲಿ ನ್ಯಾಯಾಲಯ
Update: 2018-04-03 17:31 GMT
ಹೊಸದಿಲ್ಲಿ, ಎ. 3: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಷಮೆ ಯಾಚಿಸಿದ ಬಳಿಕ ಕೇಂದ್ರ ಸಚಿವ ಅರುಣ್ ಜೇಟ್ಲಿ ದಾಖಲಿಸಿದ 10 ಕೋ. ರೂ. ಮಾನನಷ್ಟ ಮೊಕದ್ದಮೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಕೈಬಿಟ್ಟಿದೆ.
ಆಪ್ ವರಿಷ್ಠ ಹಾಗೂ ಇತರ ಐವರು ಪದಾಧಿಕಾರಿಗಳ ವಿರುದ್ಧ ದಾಖಲಿಸಲಾದ ಮೂಲ ಮಾನನಷ್ಟ ಮೊಕದ್ದಮೆ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಕೇಜ್ರಿವಾಲ್ ಅವರ ಮಾಜಿ ವಕೀಲ ರಾಮ್ ಜೇಠ್ಮಲಾನಿ ನಿಂದಿಸಿದ ಬಳಿಕ ಜೇಟ್ಲಿ ಎರಡನೇ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕೇಜ್ರಿವಾಲ್ ಹಾಗೂ ಜೇಟ್ಲಿ ಸಲ್ಲಿಸಿದ ಜಂಟಿ ಇತ್ಯರ್ಥ ಮನವಿಯನ್ನು ನ್ಯಾಯಮೂರ್ತಿ ಮನಮೋಹನ್ ಪರಿಗಣಿಸಿದ್ದರು ಹಾಗೂ ಆಪ್ ವರಿಷ್ಠ ರ ಕ್ಷಮೆ ಯಾಚನೆಯನ್ನು ಬಿಜೆಪಿ ವರಿಷ್ಠ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮೊಕದ್ದಮೆ ವಿಲೇವಾರಿ ಮಾಡಿದರು. ಇಬ್ಬರೂ ನಾಯಕರ ಲಿಖಿತ ಆಶ್ವಾಸನೆ ಹಾಗೂ ಹೇಳಿಕೆಯನ್ನು ನ್ಯಾಯಾಲಯ ಸ್ವೀಕರಿಸಿತು ಹಾಗೂ ಮಾನನಷ್ಟ ಪ್ರಕರಣವನ್ನು ಕೈಬಿಟ್ಟಿತು.