ಬೀದಿನಾಯಿಗೆ ಕಲ್ಲೆಸೆದ ಯುವಕನ ಇರಿದು ಕೊಲೆ

Update: 2018-04-04 03:58 GMT

ಗುರ್‌ಗಾಂವ್, ಎ.4: ಬೀದಿ ನಾಯಿಗೆ ಕಲ್ಲು ಹೊಡೆದದ್ದೇ ಯುವಕನೊಬ್ಬನ ಸಾವಿಗೆ ಕಾರಣವಾದ ಘಟನೆ ಇಲ್ಲಿನ ಸೆಕ್ಟರ್ 46 ಎಂಬಲ್ಲಿ ಸಂಭವಿಸಿದೆ.

ಬಿಹಾರದ ಮೋತಿಹರಿ ಜಿಲ್ಲೆಯ ಮೂಲದ ವಿನೋದ್ ಯಾದವ್(26) ಮೃತ ಯುವಕ. ಬೀದಿನಾಯಿಗೆ ಕಲ್ಲು ಹೊಡೆದ ಘಟನೆಗೆ ಸಂಬಂಧಿಸಿ ಇಬ್ಬರ ನಡುವೆ ವಾಗ್ವಾದ ನಡೆದು ವಿನೋದ್ ನನ್ನು ಇರಿದು ಸಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಆರೋಪಿಗಳನ್ನು ಭೋಲು ಮತ್ತು ಚೇತನ್ ಎಂದು ಗುರುತಿಸಲಾಗಿದೆ. ಇಬ್ಬರೂ ಸೆಕ್ಟರ್ 39ರ ಝಾರ್ಸಾ ಗ್ರಾಮದ ನಿವಾಸಿಗಳು. ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರ ಮಧ್ಯರಾತ್ರಿ 1 ಗಂಟೆಗೆ ಈ ಘಟನೆ ನಡೆದಿದೆ. ವಿನೋದ್ ಯಾದವ್ ಹಾಗೂ ಮೂವರು ಸಹೋದ್ಯೋಗಿಗಳು ಕೆಲಸ ಮುಗಿಸಿ ತಮ್ಮ ಮನೆಗೆ ಹಿಂದಿರುಗುತ್ತಿದ್ದರು. ಪೆಟ್ರೋಲ್‌ ಪಂಪ್ ಬಳಿ ಬಂದಾಗ ಬೀದಿನಾಯಿ ಇವರತ್ತ ನೋಡಿ ಬೊಗಳಲು ಆರಂಭಿಸಿತು. ಅದನ್ನು ಓಡಿಸಲು ನಾಯಿಯತ್ತ ಕಲ್ಲು ಎಸೆದರು. ಆಗ ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಭೋಲು, ವಿನೋದ್ ಹಾಗೂ ಸ್ನೇಹಿತರ ಜತೆ ಜಗಳಕ್ಕಿಳಿದ ಎಂದು ತನಿಖಾಧಿಕಾರಿ ಮಂಗಲ್ ಶರ್ಮಾ ವಿವರಿಸಿದರು.

ನಾಯಿ ನಮಗೆ ಸೇರಿದ್ದು ಎಂದು ಜಗಳ ತೆಗೆದ ಭೋಲು ಹಾಗೂ ವಿನೋದ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಚೇತನ್ ಎಂಬ ಭೋಲುವಿನ ಸ್ನೇಹಿತ ಕೂಡಾ ಸೇರಿಕೊಂಡು ವಿನೋದ್ ಯಾದವರಿಗೆ ಚಾಕುವಿನಿಂದ ಹೊಟ್ಟೆಗೆ ಇರಿದನೆನ್ನಲಾಗಿದೆ. ತೀವ್ರ ಗಾಯಗೊಂಡ ವಿನೋದ್ ಅವರನ್ನು ಸ್ನೇಹಿತರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಆತ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದರು. ಈ ಸಂಬಂಧ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಪರಾರಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News