ಸ್ಟ್ರೆಚರ್ ನೀಡಲು ನಿರಾಕರಣೆ: ತಾಯಿಯನ್ನು ಹೆಗಲ ಮೇಲೆ ಹೊತ್ತೊಯ್ದ ಪುತ್ರ

Update: 2018-04-07 17:22 GMT

ಪಾಟ್ನಾ, ಎ. 7: ಆಸ್ಪತ್ರೆಯಲ್ಲಿ ಸ್ಟ್ರೆಚರ್ ನಿರಾಕರಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಅನಾರೋಗ್ಯಕ್ಕೀಡಾದ ತನ್ನ ತಾಯಿಯನ್ನು ಹೆಗಲಿನ ಮೇಲೆ ಹೊತ್ತು ನಡೆದ ಘಟನೆ ಬಕ್ಸಾರ್‌ನಲ್ಲಿ ನಡೆದಿದೆ.

ಬಕ್ಸಾರ್‌ನ ಸೊಹಾನಿ ಪಟ್ಟಿ ನಿವಾಸಿ 35ರ ಹರೆಯದ ವಿಜಯ ಕುಮಾರ್ ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದ ತನ್ನ ವೃದ್ಧೆ ತಾಯಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದರು. ಹೊರರೋಗಿ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೈದ್ಯ, ಪರಿಶೀಲನೆಗಾಗಿ ತಾಯಿಯನ್ನು ಮಹಡಿಯಲ್ಲಿರುವ ಚೇಂಬರ್‌ಗೆ ಕರೆದುಕೊಂಡು ಬರುವಂತೆ ವಿಜಯ ಕುಮಾರ್‌ಗೆ ಸೂಚಿಸಿದ್ದರು. ಆದರೆ, ಸ್ಟ್ರೆಚರ್ ಒದಗಿಸುವಂತೆ ಮತ್ತೆ ಮತ್ತೆ ವಿನಂತಿಸಿದಾರೂ ಆಸ್ಪತ್ರೆಯ ಸಿಬ್ಬಂದಿ ಕಿವುಡರಂತೆ ವರ್ತಿಸಿದರು ಎಂದು ವಿಜಯ್ ಆರೋಪಿಸಿದ್ದಾರೆ. ‘‘ನನ್ನ ತಾಯಿಯ ಸ್ಥಿತಿ ಹದಗೆಟ್ಟಿತ್ತು. ನಾನು ಆತಂಕಗೊಂಡಿದ್ದೆ. ನಾನು ನನ್ನ ತಾಯಿಯನ್ನು ಹೆಗಲ ಮೇಲೆ ಹೊತ್ತು ವೈದ್ಯರ ಚೇಂಬರ್‌ಗೆ ಓಡಿದೆ’’ ಎಂದು ವಿಜಯ್ ಕುಮಾರ್ ಹೇಳಿದ್ದಾರೆ. ಮಹಿಳೆಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಕೊಂಡೊಯ್ಯುವಂತೆ ವೈದ್ಯ ಶಿಫಾರಸು ಮಾಡಿದ್ದರು. ಅನಂತರ ವಿಜಯ್ ಕುಮಾರ್ 102 ಆ್ಯಬುಲೆನ್ಸ್‌ಗೆ ಮತ್ತೆ ಮತ್ತೆ ಕರೆ ಮಾಡಿದರು. ಆದರೆ, ಯಾವುದೇ ಸ್ಪಂದನೆ ದೊರಕಲಿಲ್ಲ.

‘‘ನನಗೆ ತಿಳಿದಿರುವ ಸಾಮಾಜಿಕ ಹೋರಾಟಗಾರ ರಾಮ್‌ಜಿ ಯಾದವ್ ಅವರಿಗೆ ಕರೆ ಮಾಡಿದೆ. ಅವರು ಆಗಮಿಸಿ ಸ್ಥಳೀಯ ಮಾಧ್ಯಮಗಳಿಗೆ ಕರೆ ನೀಡಿದ ಬಳಿಕ ಆಸ್ಪತ್ರೆಯ ಆಡಳಿತ ತನ್ನ ತಾಯಿಯನ್ನು ಕೊಂಡೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿತು’’ ಎಂದು ಅವರು ಹೇಳಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಬಕ್ಸಾರ್‌ನ ಡಿಎಂ ಅರವಿಂದ್ ಕುಮಾರ್ ವರ್ಮಾ ಜಿಲ್ಲಾ ಸಿವಿಲ್ ಸರ್ಜನ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ‘‘ನಿರ್ಲಕ್ಷ್ಯಕ್ಕೆ ಹೊಣೆಗಾರರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಕರ್ತವ್ಯ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ’’ ಎಂದು ವರ್ಮಾ ಹೇಳಿದ್ದಾರೆ. ಈ ಬಗ್ಗೆ ಸಿವಿಲ್ ಸರ್ಜನ್ ಡಾ. ಡಿ.ಎನ್. ಠಾಕೂರ್ ಅವರನ್ನು ಸಂಪರ್ಕಿಸಲಾಯಿತು. ಅವರು, ‘‘ಆಸ್ಪತ್ರೆ ಉಪ ಅಧೀಕ್ಷಕರಿಂದ ವರದಿ ಕೋರಲಾಗಿತ್ತು. ವರದಿಯಲ್ಲಿ, ವಿಜಯ್ ಕುಮಾರ್‌ಗೆ ಸ್ಟ್ರೆಚರ್ ಸಿಗುವ ಸ್ಥಳದ ಬಗ್ಗೆ ತಿಳಿಸಲಾಗಿತ್ತು, ಆದರೆ, ಅವರು ತುರ್ತಿನಲ್ಲಿದ್ದರು ಹಾಗೂ ತನ್ನ ತಾಯಿಯನ್ನು ಹೆಗಲ ಮೇಲೆ ಹೊತ್ತೊಯ್ಯಲು ಆದ್ಯತೆ ನೀಡಿದರು’’ ಎಂದು ಹೇಳಲಾಗಿದೆ ಎಂದಿದ್ದಾರೆ. ಅಲ್ಲದೆ ಅವರಿಗೆ ಕೂಡಲೇ ಆ್ಯಂಬುಲೆನ್ಸ್ ಒದಗಿಸಲಾಗಿದೆ ಎಂದು ಡಾ. ಠಾಕೂರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News