ದಿಲ್ಲಿ ದರ್ಬಾರ್

Update: 2018-04-21 19:08 GMT

ಸದ್ಯಕ್ಕೆ ಯೆಚೂರಿಗೆ ಗೆಲುವು!

ಪಕ್ಷದ ಒಳಗೆಯೇ ಹಲವು ತಿಂಗಳ ಹೈಡ್ರಾಮಾ ಬಳಿಕ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ತನ್ನ ಹೈದರಾಬಾದ್ ಅಧಿವೇಶನದಲ್ಲಿ ತನ್ನ ರಾಜಕೀಯ ರಣತಂತ್ರವನ್ನು ಅಂತಿಮಪಡಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರ ಪ್ರತಿಪಾದನೆಗೆ ಅನುಗುಣವಾಗಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆಯ ಅವಕಾಶವನ್ನು ಮುಕ್ತವಾಗಿಡಲು ನಿರ್ಧರಿಸಿದೆ. ಆದರೆ ಈ ರಾಜಕೀಯ ನಿರ್ಣಯ ವಿಚಾರದಲ್ಲಿ ಯೆಚೂರಿ ಹಾಗೂ ಕಾರಟ್ ಬಣಗಳ ನಡುವೆ ವ್ಯಾಪಕ ಭಿನ್ನಾಭಿಪ್ರಾಯ ಕಂಡುಬಂತು. ಕಾಂಗ್ರೆಸ್ ಜತೆಗೆ ಯಾವುದೇ ಬಗೆಯ ಒಡಂಬಡಿಕೆಯನ್ನು ಕಾರಟ್ ಬಲವಾಗಿ ವಿರೋಧಿಸಿದ್ದರು. ಯೆಚೂರಿ ಕಳೆದ ಜನವರಿಯಲ್ಲಿ ಈ ವಿಚಾರದಲ್ಲಿ ಸೋತ ಬಳಿಕ ನಿರ್ಣಾಯಕ ಹೋರಾಟಕ್ಕೆ ತಾಲೀಮು ನಡೆಸಿದ್ದರು. ಈ ಬಾರಿಯೂ ಸೋಲು ಉಂಟಾದರೆ ಯೆಚೂರಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿಯೂ ಹಬ್ಬಿತ್ತು. ಕಾರಟ್, ಕೇರಳದ ಹೊರಗೆ ಪಕ್ಷಕ್ಕೆ ಕಠಿಣ ಪರಿಸ್ಥಿತಿ ತಂದೊಡ್ಡಿದ್ದಾರೆ ಎಂಬುದಾಗಿ ಯೆಚೂರಿ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರು. ಬಹುಶಃ ಪಶ್ಚಿಮ ಬಂಗಾಳದ ಮುಖಂಡರಿಂದ ಯೆಚೂರಿ ಬೆಂಬಲ ಪಡೆದಂತಿದೆ. ಕಾರಟ್ ಅವರ ಮುಂದಿನ ನಡೆ ಏನು ಎಂದು ಕಾದು ನೋಡಬೇಕಾಗಿದೆ.

ಹೂಡಾ ಬಲ

ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ರ್ಯಾಲಿ ಹರ್ಯಾಣ ಕಾಂಗ್ರೆಸ್‌ನ ಭೂಪಿಂದರ್ ಸಿಂಗ್ ಹೂಡಾ ಮತ್ತು ಅಶೋಕ್ ತನ್ವರ್ ಬಣಗಳ ನಡುವಿನ ರಣಾಂಗಣವಾಗಿ ಮಾರ್ಪಟ್ಟಿತು. 2016ರಲ್ಲಿ ದಿಲ್ಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ತನ್ವರ್ ಮೇಲೆ ದೈಹಿಕ ಹಲ್ಲೆಯೂ ನಡೆದಿತ್ತು. ಈ ಹಲ್ಲೆ ಘಟನೆಯ ಸತ್ಯಾಸತ್ಯತೆ ಅರಿಯಲು ಪಕ್ಷ ಸುಶೀಲ್ ಕುಮಾರ್ ಶಿಂಧೆಯವರನ್ನು ನೇಮಕ ಮಾಡಿತ್ತು. ಉಭಯ ಬಣಗಳ ಶಕ್ತಿ ಪ್ರದರ್ಶನಕ್ಕೆ ರ್ಯಾಲಿಗಳು ವೇದಿಕೆಯಾಗುತ್ತಿವೆ. ತಿಳಿಗುಲಾಬಿ ಹಾಗೂ ಕೆಂಪು ರುಮಾಲುಗಳೊಂದಿಗೆ ಉಭಯ ಬಣಗಳ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಣ್ಣದ ರುಮಾಲುಗಳನ್ನು ಮತ್ತು ನಾಯಕರ ಜತೆ ಗುರುತಿಸಿಕೊಳ್ಳುವ ಸಂಪ್ರದಾಯಕ್ಕೆ ತಿಲಾಂಜಲಿ ನೀಡಬೇಕು ಎನ್ನುವ ಸಂದೇಶವನ್ನು ಪಕ್ಷದ ಮುಖಂಡರು ನೀಡಿದ್ದಾರೆ. ತನ್ವರ್ ಇದಕ್ಕೆ ತಲೆಬಾಗಬಹುದು. ಆದರೆ ಹೂಡಾ ಕಬ್ಬಿಣದ ಕಡಲೆಯಾಗುತ್ತಿದ್ದಾರೆ. ತಮ್ಮ ಬಣದ ಬೆಂಬಲಿಗರನ್ನು ಗುರುತಿಸಲು ಮತ್ತು ಶಕ್ತಿ ಪ್ರದರ್ಶನಕ್ಕೆ ಹೊಸ ವಿಧಾನಗಳನ್ನು ಕಂಡುಕೊಳ್ಳಬಹುದು. ಆದರೆ ಈ ಸಂಘರ್ಷ ಬೀದಿ ಜಗಳವಾಗಬಾರದು ಎಂಬ ಆಶಯ ಪಕ್ಷದ ಹೈಕಮಾಂಡ್‌ನದ್ದು.

ಶಿವರಾಜ್ ರೆಕ್ಕೆಗೆ ಕತ್ತರಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿಯ ಅವಕೃಪೆ, ಬಿಜೆಪಿ ಮುಖಂಡರಿಗೆ ಭೀತಿ ಹುಟ್ಟಿಸುವ ವಿಚಾರ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ಶಿಷ್ಟಾಚಾರಕ್ಕೆ, ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಅವಧಿಯಲ್ಲಿ ಹಲವು ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಹಲವು ಮುಚ್ಚಿಹಾಕಿದ ಅಂಕಿ ಅಂಶಗಳನ್ನು ಸಂಘ ಪರಿವಾರದ ಮುತ್ಸದ್ದಿಗಳು ಚೌಹಾಣ್ ಮುಂದೆ ತೆರೆದಿಟ್ಟರು. ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ ಎಂದು ಆಪಾದಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ವೇಳೆ ಕುಖ್ಯಾತ ಚಂಬಲ್ ಪ್ರದೇಶದಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದ್ದು, ಹಿಂದೆಂದೂ ಇಂಥ ಘಟನೆಗಳು ನಡೆದಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಇದರಿಂದ ಅಧೀರರಾದ ಚೌಹಾಣ್ ಭೋಪಾಲ್‌ಗೆ ಹಿಂದಿರುಗಿದ ತಕ್ಷಣ, ರಾಜ್ಯದ ಹಿರಿಯ ಅಧಿಕಾರಿಗಳಿಗೆ ಕಚೇರಿ ಸಮನ್ಸ್ ನೀಡುವವರೆಗೂ ಕಾಯಲಿಲ್ಲ. ವಿಮಾನ ನಿಲ್ದಾಣದ ಬಳಿಯೇ ಐದು ಗಂಟೆಗಳ ಸುದೀರ್ಘ ಸಭೆ ನಡೆಯಿತು. ಸಿಎಂ ತನ್ನ ಫೇವರಿಟ್ ಬಾಬೂಗಳನ್ನು ಕೂಡಾ ಬಿಡದೇ ತರಾಟೆಗೆ ತೆಗೆದುಕೊಂಡರು. ಬಂದ್ ವೇಳೆ ಒಂಬತ್ತು ಮಂದಿ ಹತ್ಯೆಯಾದ ಬಗ್ಗೆ ಅಸಮಾಧಾನ ತೋಡಿಕೊಂಡರು. ಪ್ರಕರಣ ಭೇದಿಸಿ; ಇಲ್ಲದಿದ್ದರೆ ನಾನು ಸಂಕಷ್ಟಕ್ಕೆ ಸಿಲುಕುತ್ತೇನೆ ಎನ್ನುವುದು ಹಿರಿಯ ಅಧಿಕಾರಿಗಳಿಗೆ ಅವರು ನೀಡಿದ ಸ್ಪಷ್ಟ ಸಂದೇಶ.

ಎಲ್ಲರಿಗೂ ಸಲ್ಲುವವರು..

ಪಿಯೂಷ್ ಗೋಯಲ್ ಬಿಜೆಪಿಯ ಮುಂದಿನ ಅಪೇಕ್ಷಿತ ವ್ಯಕ್ತಿ. ಅರುಣ್ ಜೇಟ್ಲಿಯವರಂತೆ ಗೋಯಲ್ ಕೂಡಾ ಎಲ್ಲರಿಗೂ ಸಲ್ಲುವ ವ್ಯಕ್ತಿಯಾಗಿ ರೂಪುಗೊಳ್ಳುತ್ತಿದ್ದಾರೆ. ಇದರಿಂದಾಗಿ ಗೋಯಲ್ ಪಕ್ಷದ ಆಂತರಿಕ ಮುಖಂಡರ ರಾಯಭಾರಿಯಾಗುತ್ತಿದ್ದಾರೆ. ರೈಲ್ವೆ ಹಾಗೂ ಕಲ್ಲಿದ್ದಲು ಹೀಗೆ ಎರಡು ಪ್ರಮುಖ ಖಾತೆಗಳನ್ನು ಹೊಂದಿರುವುದು ಮಾತ್ರವಲ್ಲದೆ, ಇತರ ಸಚಿವರಿಗೆ ಯಶಸ್ಸಿನ ಹಾದಿಯನ್ನು ತೋರಿಸಿಕೊಡಲೂ ಅವರನ್ನು ನಿಯೋಜಿಸಲಾಗುತ್ತದೆ. ಪ್ರಧಾನಿ ಚಾಲಿತ ಆಂತರಿಕ ಯೋಚನೆಗಳ ವಿನಿಮಯದಲ್ಲಿ ಗೋಯಲ್ ಪ್ರಧಾನ ಭಾಗವಾಗುತ್ತಿದ್ದಾರೆ. ಇತ್ತೀಚಿನ ಘಟನೆಯೊಂದರಲ್ಲಿ ಗೋಯಲ್ ಲಕ್ಷ್ಮಣರೇಖೆ ದಾಟಿದಂತಿದೆ. ಇದು ಅವರ ವಿರೋಧಿಗಳನ್ನು ನಿರಾಳವಾಗಿಸಿದೆ. ರಾಧಾಮೋಹನ್ ಸಿಂಗ್ ನೇತೃತ್ವದ ಕೃಷಿ ಸಚಿವಾಲಯದಲ್ಲಿ, ಗೋಯಲ್ ಅವಮಾನಿತರಾದರು. ಕೃಷಿ ವಿಜ್ಞಾನ ಕೇಂದ್ರಗಳ ವಿಚಾರದಲ್ಲಿ ಅವರಿಗೆ ವಿವರ ನೀಡಬೇಕಿತ್ತು. ಕೇಂದ್ರಗಳ ಕಾರ್ಯದ ಬಗ್ಗೆ ಸಹಜವಾಗಿಯೇ ಗೋಯಲ್ ಅವರಿಗೆ ಕಲ್ಪನೆ ಇರಲಿಲ್ಲ. ಹಾಗೆಂದ ಮಾತ್ರಕ್ಕೆ ಗೋಯಲ್ ಮಹತ್ವ ಕಡಿಮೆಯಾಗಿದೆ ಎಂಬ ಅರ್ಥವಲ್ಲ. ಪ್ರಮುಖ ಸಂದರ್ಭಗಳಲ್ಲೆಲ್ಲ ಗೋಯಲ್ ಮಿಂಚಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ಉಸ್ತುವಾರಿ ವಹಿಸಿದ್ದರು. ಬಿಎಸ್ಪಿ ಅಭ್ಯರ್ಥಿ ಭೀಮರಾವ್ ಅಂಬೇಡ್ಕರ್ ಅವರನ್ನು ಸೋಲಿಸಿ ಬಿಜೆಪಿ ಒಂದು ಹೆಚ್ಚುವರಿ ಸ್ಥಾನ ಗೆದ್ದಿತ್ತು.

ಮೋದಿ ಮೋಡಿ ಕ್ಷೀಣ?

ಮೋದಿ ಮ್ಯಾಜಿಕ್ ಕ್ಷೀಣಿಸುತ್ತಿದೆಯೇ? ಬಹುಶಃ ಬಿಜೆಪಿಯೊಳಗೇ, ಅಸಂತುಷ್ಟ ನಾಯಕರ ಸಂಖ್ಯೆ ಬೆಳೆಯುತ್ತಿದೆ. ಆದರೆ ಪಕ್ಷದ ಒಳಗಿರುವವರು ಮತ್ತು ಹಿತೈಷಿಗಳಿಂದ ಮೋದಿಗೆ ನಿರಂತರವಾಗಿ ಬರುತ್ತಿರುವ ಪತ್ರಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಮೇಲ್ನೋಟಕ್ಕೆ ಈ ಪತ್ರಗಳು ಸಲಹೆಗಳನ್ನು ಒಳಗೊಂಡಿದ್ದು, ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರಗಳನ್ನೂ ಹೊಂದಿರುತ್ತವೆ. ಆದರೆ ಇದರ ಆಂತರ್ಯವನ್ನು ನೋಡಿದರೆ, ಪಕ್ಷದಲ್ಲಿ ಅಸಮಾಧಾನ ಹೆಚ್ಚುತ್ತಿರುವುದರ ಪ್ರತಿಬಿಂಬ ಇದು. ಮೋದಿ ಆಡಳಿತ ಯುಗ ಕೊನೆಯ ಹಂತ ಪ್ರವೇಶಿಸುತ್ತಿದ್ದು, ಈ ಪೈಕಿ ಬಹುತೇಕ ಮಂದಿ ಸರಕಾರಿ ಹುದ್ದೆಯ ಆಕಾಂಕ್ಷೆಯನ್ನೇ ಬಿಟ್ಟುಬಿಟ್ಟಿದ್ದಾರೆ. ಪತ್ರಗಳು ಈ ಬಗ್ಗೆ ಗಮನ ಸೆಳೆಯುತ್ತವೆ. ಆಕಾಂಕ್ಷಿಗಳ ಈ ಎಚ್ಚರಿಕೆಯ ಸುಳಿವನ್ನು ಅರಿತೇ, ಇದೀಗ ನಿಷ್ಕ್ರಿಯ ವಾಗಿರುವ ಮಾರ್ಗದರ್ಶಕ ಮಂಡಳಿಯಲ್ಲಿ ಹೊಸ ಅತೃಪ್ತರನ್ನು ಸೇರಿಸುವ ಹೊಸ ಯೋಚನೆ ಮಾಡಿದಂತಿದೆ.

Writer - ಪತ್ರಕರ್ತ

contributor

Editor - ಪತ್ರಕರ್ತ

contributor

Similar News