ಮತ್ತೊಮ್ಮೆ ರಿಚ್ಚಿಯಾಗಲಿರುವ ರಕ್ಷಿತ್

Update: 2018-05-05 12:03 GMT

‘ಉಳಿದವರು ಕಂಡಂತೆ’ ಚಿತ್ರವನ್ನು ಕಂಡವರಿಗೆ ರಿಚ್ಚಿಯಾಗಿ ರಕ್ಷಿತ್ ಶೆಟ್ಟಿ ಅಭಿನಯ ಖಂಡಿತವಾಗಿಯೂ ಅವರ ನೆನಪಿನಿಂದ ಮಾಸಿಹೋಗದು. ‘ಶೂಟ್‌ಮಾಡ್ಲಾ’ ಎನ್ನುವ ಅವರ ಪಂಚಿಂಗ್ ಡೈಲಾಗ್ ಹಾಗೂ ಹುಲಿವೇಷದ ನೃತ್ಯವನ್ನು ಚಿತ್ರಪ್ರೇಮಿಗಳು ಈಗ ಕೂಡಾ ನೆನಪಿಸಿಕೊಳ್ಳುತ್ತಾರೆ. ಉಳಿದವರು ಕಂಡಂತೆ ಅಷ್ಟೇನೂ ಯಶಸ್ವಿಯಾಗದಿದ್ದರೂ, ಚಿತ್ರ ಪರಭಾಷಾ ನಿರ್ಮಾಪಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕೆಲವು ತಿಂಗಳುಗಳ ಹಿಂದೆಯಷ್ಟೇ ಉಳಿದವರು ಕಂಡಂತೆ ಚಿತ್ರದ ತಮಿಳು ರಿಮೇಕ್ ಬಿಡುಗಡೆಯಾಗಿದ್ದು, ನಿವಿನ್ ಪೌಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ರಕ್ಷಿತ್ ಉಳಿದವರು ಕಂಡಂತೆ ಚಿತ್ರದ ಮುಂದುವರಿದ ಭಾಗವನ್ನು ನಿರ್ಮಿಸಲು ರೆಡಿಯಾಗುತ್ತಿದ್ದಾರೆ. ಉಳಿದವರು ಕಂಡಂತೆ ಚಿತ್ರದ ರಿಚ್ಚಿ ಪಾತ್ರ ಇಲ್ಲೂ ಮುಂದುವರಿಯಲಿದ್ದು, ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಲಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಹೆಚ್ಚು ಕಮ್ಮಿ ಉಳಿದವರು ಕಂಡಂತೆ ಚಿತ್ರದ ತಾರಾಗಣವೇ ಮುಂದುವರಿಯಲಿದೆ. ಆದರೆ ಉಳಿದವರು ಕಂಡಂತೆ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಿದ್ದರು. ಆದರೆ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ ಹೊಣೆ ಹೊರದೆ, ಕೇವಲ ಅಭಿನಯಿಸಲಿದ್ದಾರೆ. ಬದಲಿಗೆ ನಿರ್ದೇಶನದ ಹೊಣೆಯನ್ನು ಅವರು ಕಿರಿಕ್ ಪಾರ್ಟಿಖ್ಯಾತಿಯ ರಿಷಭ್ ಶೆಟ್ಟಿಗೆ ವಹಿಸಿದ್ದಾರೆ. ಉಳಿದವರು ಕಂಡಂತೆ ಚಿತ್ರದಲ್ಲಿ ರಿಷಬ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

  2018 ಹಾಗೂ 2019ನೇ ಇಸವಿ, ರಕ್ಷಿತ್ ಪಾಲಿಗೆ ಅತ್ಯಂತ ಬಿಡುವಿಲ್ಲದ ವರ್ಷವಾಗಲಿದೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದ ಚಿತ್ರದಲ್ಲಿಯೂ ರಕ್ಷಿತ್ ನಟಿಸಲಿದ್ದು, ಇದಕ್ಕೂ ಪುಷ್ಕರ್ ಅವರೇ ಹಣ ಹೂಡಲಿದ್ದಾರೆ. ಸ್ವಾತಂತ್ರ ಪೂರ್ವ ಹಿನ್ನೆಲೆಯ ಕಥಾವಸ್ತುವನ್ನು ಹೊಂದಿರುವ ಈ ಚಿತ್ರಕ್ಕಾಗಿ ಒಂದಿಷ್ಟು ಸಂಶೋಧನೆಯ ಅಗತ್ಯವೂ ಇದೆಯಂತೆ. ಸ್ಕ್ರಿಪ್ಟ್ ತಯಾರಿ ನಡೆಯುತಿದ್ದು, ಸದ್ಯದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ಪುಷ್ಕರ್ ನಿರ್ಮಿಸಲಿರುವ ಇನ್ನೊಂದು ಚಿತ್ರಕ್ಕೂ ರಕ್ಷಿತ್ ಬಣ್ಣ ಹಚ್ಚಲಿದ್ದಾರೆ. ಇಲ್ಲಿ ವಿಶೇಷವೆಂದರೆ ಸ್ವತಃ ರಕ್ಷಿತ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ. ಚಿತ್ರದ ಕಥೆಯ ಎಳೆಯೊಂದು ಅವರ ಮನಸ್ಸಿನಲ್ಲಿದ್ದು, ಅದನ್ನು ಇನ್ನೂ ಸ್ವಲ್ಪ ಇಂಪ್ರೂವ್ ಮಾಡಬೇಕಾಗಿದ್ದು, ಚಿತ್ರಕಥೆ ಫೈನಲ್ ಹಂತಕ್ಕೆ ಬಂದಾಗ ಎಲ್ಲಾ ವಿವರಗಳನ್ನು ನೀಡುವುದಾಗಿ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಪ್ರಸ್ತುತ ರಕ್ಷಿತ್ ಚಾರ್ಲಿ 777, ಅವನೇ ಶ್ರೀಮನ್ನಾರಾಯಣ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದು, ಈ ಎರಡು ಚಿತ್ರಗಳು ಪೂರ್ಣಗೊಂಡ ಬಳಿಕವಷ್ಟೇ ಈ ಮೂರು ಚಿತ್ರಗಳ ಶೂಟಿಂಗ್ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News