ಸಾರಿ...ನನಗೆ ಹುಡುಗಿ ಹಿಡಿಸಿಲ್ಲ....!

Update: 2018-05-19 18:29 GMT

‘‘ಸರ್ ನಿಮ್ಮ ಮದುವೆಯಾಯಿತಂತೆ...ಹೌದೇ?’’ ಪತ್ರಕರ್ತ ಕಾಸಿ ಮದುಮಗ ವೇಷದಲ್ಲಿರುವ ಯಡಿಯೂರಪ್ಪರಲ್ಲಿ ಕೇಳಿದ.
‘‘ಈ ಹಿಂದೆ ನಾನು ಘೋಷಿಸಿದ ಮುಹೂರ್ತದಲ್ಲೇ ಮದುವೆ ಮಾಡಿಕೊಂಡಿದ್ದೇನೆ....ಏನೀವಾಗ?’’ ಯಡಿಯೂರಪ್ಪ ಅವರು ಮೀಸೆ ಮುಟ್ಟಿ ಗುರಾಯಿಸಿದಾಗ ಕಾಸಿ ಸಣ್ಣಗೆ ನಡುಗಿದ.

‘‘ಹಾಗಲ್ಲ ಸಾರ್...ಮದುಮಗಳೇ ಇಲ್ಲದೆ ಮದುವೆಯಾಗಿದ್ದೀರಲ್ಲ ಸಾರ್...’’ ಕಾಸಿ ಮತ್ತೆ ಕೇಳಿದ. ‘‘ಮದುಮಗಳನ್ನು ತರಲು ಈಗಾಗಲೇ ಜನರನ್ನು ಕಳುಹಿಸಲಾಗಿದೆ....ಮದುಮಗಳಿಗೆ ಕಾದರೆ ಮುಹೂರ್ತ ನಿಲ್ಲುತ್ತದಾ? ಅದಕ್ಕೆ ಮದುಮಗಳು ಬರುವ ಮೊದಲೇ ಮದುವೆ ಕಾರ್ಯಮುಗಿಸಿ ಬಿಟ್ಟೆವು....’’ ಯಡಿಯೂರಪ್ಪ ಹೇಳಿದರು.

‘‘ಅದಿರಲಿ...ಮದುಮಗಳು ಎಲ್ಲಿದ್ದಾಳೆ ಸಾರ್?’’ ‘‘ಯಾರಿಗ್ಗೊತ್ತು? ಯಾರದಾದರೂ ಹಸಮಣೆಯಲ್ಲಿ ಕುಳಿತಿರುವ ಮದುಮಗಳನ್ನು ಎತ್ತಿಕೊಂಡು ಬನ್ನಿ ಎಂದು ಆದೇಶ ನೀಡಿದ್ದೇನೆ...ಈಗಾಗಲೇ ಮದುವೆಯ ಉತ್ಸಾಹದಲ್ಲಿ ಹಸೆಮಣೆಯಲ್ಲಿ ಕುಳಿತಿರುವ ಹಲವು ಮದುಮಕ್ಕಳನ್ನು ಸಂಪರ್ಕಿಸಲಾಗಿದೆ...ಅವರಿಗೆ ಬೇಕಾದ ವಧುದಕ್ಷಿಣೆಯ ವ್ಯವಸ್ಥೆಯನ್ನೂ ಮಾಡಲಾಗಿದೆ.....’’
‘‘ಪ್ರಸ್ಥ ಯಾವಾಗ ಇಟ್ಟುಕೊಂಡಿದ್ದೀರಿ....?’’
‘‘ಸುಪ್ರೀಂಕೋರ್ಟ್ ಶನಿವಾರ ಸಂಜೆ ನಾಲ್ಕು ಗಂಟೆಗೆ ಇಟ್ಟುಕೊಳ್ಳಿ ಎಂದು ಹೇಳಿದೆ...ಅಂತೆಯೇ ಮೊದಲ ದಿನಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ....’’
‘‘ಅಂದರೆ...’’
 ‘‘ಅದೇರಿ...ಮಂಚವನ್ನು ಶೃಂಗರಿಸಿದ್ದೇವೆ...ಹಾಲು ಹಣ್ಣು ಎಲ್ಲ ತಂದಿಟ್ಟಿದ್ದೇವೆ....’’
‘‘ಸಾರ್, ಮಂಚಕ್ಕಿರುವುದು ಮೂರೇ ಕಾಲು ಎಂದು ಜನರು ಆಡಿಕೊಳ್ಳುತ್ತಿದ್ದಾರೆ...ಮೊದಲ ರಾತ್ರಿ ಸಮಸ್ಯೆಯಾಗಲಿಕ್ಕಿಲ್ಲವಾ?’’ ಕಾಸಿ ಅನುಮಾನದಿಂದ ಕೇಳಿದ.
‘‘ನೋಡ್ರೀ...ಮಂಚ ಹಳೆಯದು. ಮೂರು ಕಾಲು ಗಟ್ಟಿಯಿದೆ. ಇನ್ನೊಂದು ಕಾಲಿಲ್ಲ ನಿಜ. ಆದರೆ ರಾಜ್ಯಪಾಲರು ನಾಲ್ಕನೇ ಕಾಲಿನ ಪಾತ್ರವಹಿಸಲಿದ್ದಾರೆ...’’
‘‘ಅಂದರೆ...’’
‘‘ಅಂದರೆ ಪ್ರಸ್ಥ ಮುಗಿಯುವವರೆಗೆ ಅವರು ಮಂಚವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ...’’
‘‘ಅಂದರೆ ಪ್ರಥಮ ರಾತ್ರಿ ಕೋಣೆಯಲ್ಲಿ ಗಂಡ-ಹೆಂಡತಿಯ ಜೊತೆಗೆ ರಾಜ್ಯಪಾಲರೂ ಇರುತ್ತಾರೆ ಅಂತಾಯಿತು...’’
‘‘ಅವರಿಲ್ಲದೇ ಇದ್ದರೆ ಮಂಚ ಬೀಳುವುದಿಲ್ಲವೇನ್ರೀ...?’’ ಯಡಿಯೂರಪ್ಪ ಮರು ಪ್ರಶ್ನೆ ಹಾಕಿದರು.
‘‘ಅದಿರಲಿ ಸಾರ್...ಮದುವೆಯೇನೋ ನಡೆಯಿತು. ಮದುವೆ ಪೂರ್ತಿಯಾಗಬೇಕಾದರೆ ತಾಳಿ ಕಟ್ಟಬೇಡವೆ? ತಾಳಿ ಯಾರಿಗೆ ಕಟ್ಟಿದ್ರೀ?’’

ಇದೀಗ ಯಡಿಯೂರಪ್ಪ ನಾಚಿ ಕಾಲಿನ ಹೆಬ್ಬರಳಲ್ಲಿ ಉಂಗುರ ಬರೆಯತೊಡಗಿದರು. ‘‘ಸಾರ್...ಪ್ಲೀಸ್ ಸಾರ್...ಹೇಳಿ ಸಾರ್... ತಾಳಿ ಯಾರಿಗೆ ಕಟ್ಟಿದ್ರಿ?’’

‘‘ಸಾಂಕೇತಿಕವಾಗಿ ಜನಾರ್ದನ ರೆಡ್ಡಿಯವರ ಕೊರಳಿಗೆ ತಾಳಿ ಕಟ್ಟಿದ್ದೇನೆ...ಅಮಿತ್ ಶಾ ಅವರು ಮದುವೆಯ ಪೌರೋಹಿತ್ಯ ವಹಿಸಿದ್ದರು. ಮದುಮಗಳನ್ನು ಬಳ್ಳಾರಿಯ ರೆಡ್ಡಿ ಸಹೋದರರು ಹುಡುಕುವುದಕ್ಕೆ ಹೊರಟಿದ್ದಾರೆ....ಮದುಮಗಳನ್ನು ಹಿಡಿದು ತಂದಾಕ್ಷಣ ರೆಡ್ಡಿಯವರ ಕುತ್ತಿಗೆಯಲ್ಲಿದ್ದ ತಾಳಿಯನ್ನು ಗಿಚ್ಚಿ ಮದುಮಗಳಿಗೆ ಕಟ್ಟಲಿದ್ದೇವೆ....’’ ಯಡಿಯೂರಪ್ಪ ಮದುವೆಯ ರಹಸ್ಯವನ್ನು ಬಹಿರಂಗ ಪಡಿಸಿದರು. ‘‘ಸರ್...ಮದುಮಗಳು ಸಿಗದೇ ಇದ್ದರೆ ರೆಡ್ಡಿ ಜೊತೆಗೆ ಮೊದಲ ರಾತ್ರಿ ಮಾಡಕ್ಕಾಗತ್ತ?’’ ಕಾಸಿ ಅನುಮಾನದಿಂದ ಕೇಳಿದ.
‘‘ಅದನ್ನು ರಾಜ್ಯಪಾಲರಲ್ಲಿ ಕೇಳಬೇಕು. ಅವರು ಅನುಮತಿ ನೀಡಿದರೆ... ಕಾರ್ಯಕ್ರಮ ಮುಂದುವರಿಸಬಹುದು....’’ ಯಡಿಯೂರಪ್ಪ ಹೇಳಿದರು.
‘‘ಆದರೆ ಸುಪ್ರೀಂಕೋರ್ಟ್ ಇದಕ್ಕೆ ಅವಕಾಶ ನೀಡುವುದಿಲ್ಲವಲ್ಲ ಸಾರ್?’’ ಕಾಸಿ ಕೇಳಿದ.
‘‘ಅದೇ ಸಮಸ್ಯೆ. ಸುಪ್ರೀಂಕೋರ್ಟ್ ಸಂವಿಧಾನಬದ್ಧವಾಗಿ ನಡೆದ ಒಂದು ಮದುವೆಯನ್ನು ಮುರಿಯುವುದಕ್ಕೆ ನೋಡುತ್ತಿದೆ....’’
‘‘ಸಾರ್...ಈ ಮದುವೆಯಲ್ಲಿ ಮಗು ಆಗತ್ತಾ ?’’
‘‘ನಾನು ಮೊದಲ ರಾತ್ರಿಯ ಚಿಂತೆಯಲ್ಲಿದ್ದರೆ ನಿಮಗೆ ಮಗುವಿನ ಚಿಂತೆ?’’ ಸಿಟ್ಟಿನಿಂದ ಯಡಿಯೂರಪ್ಪ ಯಾರಿಗೋ ಫೋನಾಯಿಸಿ ‘‘ಹಲೋ....’’ ಎಂದರು.
ಆ ಕಡೆಯಿಂದ ‘‘ಹಲೋ...’’ ಕೇಳಿಸಿತು.
‘‘ಸಿಗ್ಲಿಲ್ವಾ? ನೋಡ್ರೀ...ಸಂಜೆ ನಾಲ್ಕು ಗಂಟೆಗೆ ಎಲ್ಲ ಮುಗಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಷ್ಟರಲ್ಲಿ ಸಿಕ್ಕದೇ ಇದ್ದರೆ ಏನು ಅರ್ಥ? ಅಲ್ಲಿ ನೋಡಿದರೆ ನಮ್ಮ ಕೋಣೆಯನ್ನು ಸಿಂಗರಿಸಿ ಮಂಚ ಬೀಳದಂತೆ ರಾಜ್ಯಪಾಲರು ಹಿಡಿದು ಕಾಯುತ್ತಿದ್ದಾರೆ...ಇಲ್ಲಿ ನೋಡಿದರೆ ನೀವು ಮದುಮಗಳು ಸಿಕ್ಕೇ ಇಲ್ಲ ಎಂದು ಹೇಳುತ್ತಿದ್ದೀರಿ. ನಾನೇನು ಮಾಡ್ಲಿ ಹೇಳಿ?’’ ಎನ್ನುತ್ತಾ ಕಟ್ ಮಾಡಿದರು.
ಮತ್ತೆ ಇನ್ನಾರಿಗೋ ಪೋನಾಯಿಸತೊಡಗಿದರು. ಅತ್ತ ಕಡೆಯಿಂದ ಪೋನ್ ರಿಂಗ್ ಆಗುವ ಸದ್ದು. ತುಸು ಹೊತ್ತಲ್ಲೇ ಯಾರೋ ಫೋನೆತ್ತಿದರು.
‘‘ಏನ್ರೀ...ಏನಾಯಿತು...ಬೊಗಳಿ ಬೇಗ....’’ ಯಡಿಯೂರಪ್ಪ ಅಬ್ಬರಿಸಿದರು.
‘‘ಸಾರಿ ಸಾರ್...ಅಬಾರ್ಷನ್ ಸಾರ್....ನಾವೆಲ್ಲ ಸಾಕಷ್ಟು ಪ್ರಯತ್ನ ಪಟ್ಟೆವು....ಆದರೆ...’’ ಆ ಕಡೆಯಿಂದ ಧ್ವನಿ.
‘‘ಏನ್ರೀ ಇದು? ನಾನಿನ್ನು ಮದುವೆಯಾಗಿ 55 ಗಂಟೆ ಆಗಿಲ್ಲ. ಮದುಮಗಳು ಇನ್ನೂ ಸಿಕ್ಕಿಲ್ಲ. ಅಷ್ಟರಲ್ಲೇ ಅಬಾರ್ಷನ್ ಎಂದು ಹೇಳುತ್ತೀರಲ್ಲ.....ಬುದ್ಧಿಯಿದೆಯೇನ್ರಿ ನಿಮಗೆ?’’ ಯಡಿಯೂರಪ್ಪ ಅಬ್ಬರಿಸಿದರು.
‘‘ನಾನು ಸಾರ್....ಡಾಕ್ಟರ್ ಡಿ.ಕೆ. ಶಿವಕುಮಾರ್....’’ ಅತ್ತಕಡೆಯಿಂದ ಯಾರದೋ ಧ್ವನಿ.
‘‘ರಾಂಗ್ ನಂಬರ್’’ ಎಂದವರೇ ಫೋನ್ ಕಟ್ ಮಾಡಿದರು.
‘‘ಏನಾಯಿತು ಸಾರ್?’’ ಕಾಸಿ ಆತಂಕದಿಂದ ಕೇಳಿದ.
‘‘ಇಲ್ಲಿ ಮದುಮಗಳೇ ಸಿಕ್ಕಿಲ್ಲ....ಅಲ್ಲಿ ನೋಡಿದರೆ ಅಬಾರ್ಷನ್ ಆಗಿದೆಯಂತೆ....’’ ಯಡಿಯೂರಪ್ಪ ಸಿಟ್ಟಿನಿಂದ ಒದರಿದರು.
‘‘ಸಾರ್ ಮದುಮಗಳ ಕತೆಯೇನಾಯಿತು?’’ ಕಾಸಿ ಕೇಳಿದ.
‘‘ನನಗೆ ಹುಡುಗಿ ಹಿಡಿಸಿಲ್ಲ. ನಾನು ಆಕೆಗೆ ವಿಚ್ಛೇದನ ನೀಡಿದ್ದೇನೆ....’’ ಎಂದವರೇ ಯಡಿಯೂರಪ್ಪ ರಾಜೀನಾಮೆ ಪತ್ರ ಹಿಡಿದು ರಾಜ್ಯಪಾಲರ ಮನೆಗೆ ನಡೆದರು.

Writer - - ಚೇಳಯ್ಯ chelayya@gmail.com

contributor

Editor - - ಚೇಳಯ್ಯ chelayya@gmail.com

contributor

Similar News