ಮತ್ತೆ ಬರಲಿದ್ದಾನೆ ಮುನ್ನಾಭಾಯಿ

Update: 2018-05-26 12:23 GMT

ಸಂಜಯ್‌ದತ್ತ್ ಬದುಕಿನ ಬಯೋಪಿಕ್ ಚಿತ್ರ ಸಂಜೂವಿನ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಾಜ್‌ಕುಮಾರ್ ಹಿರಾನಿಗೆ, ಹೋದಲ್ಲೆಲ್ಲಾ ಅವರನ್ನು ಕೇಳುತ್ತಿದ್ದ ಪ್ರಶ್ನೆಯೇನೆಂದರೆ, ‘ಮುನ್ನಾ ಭಾಯಿ ಭಾಗ 3’ ಯಾವಾಗ ಆರಂಭವಾಗಲಿದೆಯೆಂಬುದು. ‘ಮುನ್ನಾಭಾಯಿ ಎಂಬಿಬಿಎಸ್’ ಹಾಗೂ ‘ಲಗೆ ರಹೋ ಮುನ್ನಾಭಾಯಿ’ ಚಿತ್ರಗಳು ಈಗಲೂ ಭಾರತೀಯ ಪ್ರೇಕ್ಷಕರ ಮನದಂಗಳದಲ್ಲಿ ಹಸಿರಾಗಿ ಉಳಿದಿದೆ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಈ ಚಿತ್ರಗಳ ಮೂರನೆ ಭಾಗವನ್ನು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಬಹಳಷ್ಟು ವರ್ಷಗಳ ಹಿಂದೆಯೇ ಘೋಷಿಸಿದ್ದರಾದರೂ, ಕಾರಣಾಂತರಗಳಿಂದ ಅದು ಕಾರ್ಯಗತಗೊಳ್ಳಲೇ ಇಲ್ಲ.

ಆದರೆ ಇದೀಗ ಹೀರಾನಿ ಈ ಸೂಪರ್‌ಹಿಟ್ ಕಾಮಿಡಿ ಸಿನೆಮಾ ಸರಣಿಯ ಮೂರನೆ ಭಾಗವನ್ನು ನಿರ್ಮಾಣವನ್ನು ಘೋಷಿಸಿದ್ದಾರೆ. ಆದರೆ ಈ ಹಿಂದೆ ಘೋಷಿಸಿದ್ದಂತೆ ಮೂರನೇ ಭಾಗವಾದ ‘ಮುನ್ನಾ ಭಾಯಿ ಚಲೇ ಅಮೆರಿಕವನ್ನು ನಿರ್ಮಿಸುವ ಯೋಚನೆಯನ್ನು ಅವರು ಈಗ ಕೈಬಿಟ್ಟಿದ್ದಾರೆ. ಸ್ವತಃ ಹಿರಾನಿ ಹೇಳುವ ಹಾಗೆ, ಮುನ್ನಾಭಾಯಿ ಮೂರನೇ ಸರಣಿಯ ಬಗ್ಗೆ ಬಹಳಷ್ಟು ಪೂರ್ವ ತಯಾರಿ ನಡೆಸಿದ್ದರು. ಚಿತ್ರದ ಸ್ಕ್ರಿಪ್ಟ್ ಕೂಡಾ ಬರೆದಿದ್ದರು. ಆದರೆ ಈ ಚಿತ್ರಕಥೆಗೂ, ಮೊದಲ ಎರಡು ಭಾಗದ ಚಿತ್ರಕಥೆಗಳಿಗೂ ಯಾವುದೇ ಹೊಂದಿಕೆಯಾಗದ ಕಾರಣ ಆ ಪ್ರಾಜೆಕ್ಟನ್ನು ಕೈಬಿಟ್ಟಿದ್ದಾಗಿ ಹೀರಾನಿ ಸ್ಪಷ್ಟಪಡಿಸಿದ್ದಾರೆ.

 ಆದರೆ ಇದೀಗ ಈ ಪ್ರತಿಭಾವಂತ ಚಿತ್ರನಿರ್ದೇಶಕನಿಗೆ ಮುನ್ನಾಭಾಯಿ ಸರಣಿಗೆ ಹೇಳಿ ಮಾಡಿಸಿದಂತಹ ಚಿತ್ರಕಥೆಯೊಂದು ದೊರೆತಿದೆಯಂತೆ. ಅದರೂ ಅದಕ್ಕೆ ಒಂದಿಷ್ಟು ಮಾರ್ಪಾಡುಗಳನ್ನು ಮಾಡಬೇಕಾಗಿದ್ದು, ಅದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆಯಂತೆ. ಮುನ್ನಾಭಾಯಿ ಭಾಗ-3ರಲ್ಲಿ ನಟಿಸಲು ಸಂಜಯ್‌ದತ್ತ್ ತೀವ್ರ ಆಸಕ್ತಿ ಹೊಂದಿದ್ದಾರಂತೆ. ಅವರಿಗೆ ಜೊತೆಯಾಗಿ ‘ಸರ್ಕಿಟ್ ’ ಅರ್ಶದ್ ವಾರ್ಸಿ ಕೂಡಾ ಇರಲಿದ್ದಾರೆ.

ಅದೇನೇ ಇದ್ದರೂ, ಹೀರಾನಿ ತನ್ನ ಸಂಜೂ ಚಿತ್ರದ ಬಿಡುಗಡೆಯ ಬಳಿಕವೇ ಮುನ್ನಾಭಾಯಿ-3ರ ಬಗ್ಗೆ ಗಮನಹರಿಸಲಿದ್ದಾರಂತೆ. ಅಂತೂ ಮುನ್ನಾಭಾಯಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಮತ್ತೊಮ್ಮೆ ಬೆಳ್ಳಿತೆರೆಗೆ ಬರಲಿರುವುದು ಖಚಿತವಾದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News