ಹಂಸಲೇಖಾಗೆ ನಿರ್ದೇಶಕನ ಪಟ್ಟ

Update: 2018-05-26 12:51 GMT

ಪ್ರೇಮಲೋಕ,ರಣಧೀರ, ಚೈತ್ರದ ಪ್ರೇಮಾಂಜಲಿ ಸೇರಿದಂತೆ ಹಲವಾರು ಚಿತ್ರಗಳ ಸುಮಧುರ ಹಾಡುಗಳಿಂದ ಕನ್ನಡ ಸಿನೆಮಾ ಪ್ರೇಕ್ಷಕರ ಮನತಣಿಸಿರುವ ಸಂಗೀತನಿರ್ದೇಶಕ ಹಂಸಲೇಖಾ ಶೀಘ್ರದಲ್ಲೇ ನಿರ್ದೇಶಕನ ಪಟ್ಟ ಅಲಂಕರಿಸಲಿದ್ದಾರೆ. ಸ್ಯಾಂಡಲ್‌ವುಡ್‌ನ ನಾದಬ್ರಹ್ಮ ಹಂಸಲೇಖಾ ಅವರು ಶಕುಂತಲಾ ಎಂಬ ಐತಿಹಾಸಿಕ ಹಿನ್ನೆಲೆಯ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣ ಗೊಳ್ಳಲಿರುವ ಈ ಚಿತ್ರವು ಬಿ.ಎಲ್.ವೇಣು ಅವರ ಕಾದಂಬರಿಯನ್ನು ಆಧರಿಸಿದೆ. ಈ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಸಂಗೀತವನ್ನೂ ಅವರೇ ನೀಡಲಿದ್ದಾರೆ. ಜೂನ್ 23ರಂದು ತನ್ನ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಹಂಸಲೇಖಾ ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಿದ್ದಾರಂತೆ. ಈ ಮೊದಲು ಹಂಸಲೇಖಾ ಗಂಡುಗಲಿ ಮದಕರಿ ನಾಯಕ ಅಥವಾ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಕುರಿತ ಚಿತ್ರ ವೊಂದನ್ನು ನಿರ್ದೇಶಿಸಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದರು. ಸಂಗೀತ ನಿರ್ದೇಶಕನಾಗಿ ಕನ್ನಡ ಸಿನೆಮಾ ರಸಿಕರ ಮನಗೆದ್ದ ಹಂಸಲೇಖಾ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News