ಭಾರತದಲ್ಲಿ ಹೆಣ್ಣಾಗಿ ಹುಟ್ಟುವುದು ತಪ್ಪೇ?

Update: 2018-05-28 08:30 GMT

ಹೆಣ್ಣು ಭ್ರೂಣಗಳನ್ನು ಗರ್ಭಪಾತಕ್ಕೊಳಪಡಿಸುವುದು ದೇಶದಲ್ಲಿ ಹೆಣ್ಮಕ್ಕಳ ಸಂಖ್ಯೆ ಕಡಿಮೆಯಾಗುವಂತೆ ಮಾಡುತ್ತಿದೆ. ಹೆಣ್ಮಕ್ಕಳ ಭ್ರೂಣಹತ್ಯೆ ಮತ್ತು ನಿರ್ಲಕ್ಷದಿಂದಾಗಿ ಅವಧಿಗೂ ಮುನ್ನ ಸಾವಿನಿಂದಾಗಿ ಅಂದಾಜು 63 ಮಿಲಿಯನ್ ಹೆಣ್ಮಕ್ಕಳು ನಮ್ಮ ಜನಸಂಖ್ಯೆಯಿಂದ ಕಳೆದು ಹೋದಂತಾಗಿದೆ.

ಭಾರತದಲ್ಲಿ ಗಂಡು ಮಕ್ಕಳಿಗೆ ಇರುವ ಆದ್ಯತೆ ಹೆಣ್ಮಕ್ಕಳ ಜನನವನ್ನು ತಡೆಯುತ್ತಿರುವುದು ಮಾತ್ರವಲ್ಲ ಜನಿಸಿದ ಹೆಣ್ಮಕ್ಕಳು ಜೀವಿತಾವಧಿಯನ್ನೂ ಕಡಿಮೆಗೊಳಿಸುತ್ತಿದೆ. ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಇತ್ತೀಚೆಗೆ ಬಿಡುಗಡೆ ಮಾಡಿದ ಅಧ್ಯಯನದ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಸರಾಸರಿ 2,39,000 ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಹೆಣ್ಮಕ್ಕಳು ತಮ್ಮ ಲಿಂಗದ ಕಾರಣದಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಮುಖ್ಯವಾಗಿ ಬಯಸದ ಮಗು ಪಡೆದ ಕಾರಣದಿಂದ ನಿರ್ಲಕ್ಷಕ್ಕೊಳಗಾಗಿ. ಹೆಣ್ಣು ಭ್ರೂಣಗಳನ್ನು ಗರ್ಭಪಾತಕ್ಕೊಳಪಡಿಸುವುದು ದೇಶದಲ್ಲಿ ಹೆಣ್ಮಕ್ಕಳ ಸಂಖ್ಯೆ ಕಡಿಮೆಯಾಗುವಂತೆ ಮಾಡುತ್ತಿದೆ. ಹೆಣ್ಮಕ್ಕಳ ಭ್ರೂಣಹತ್ಯೆ ಮತ್ತು ನಿರ್ಲಕ್ಷದಿಂದಾಗಿ ಅವಧಿಗೂ ಮುನ್ನ ಸಾವಿನಿಂದಾಗಿ ಅಂದಾಜು 63 ಮಿಲಿಯನ್ ಹೆಣ್ಮಕ್ಕಳು ನಮ್ಮ ಜನಸಂಖ್ಯೆಯಿಂದ ಕಳೆದು ಹೋದಂತಾಗಿದೆ. ಭಾರತದಲ್ಲಿ ಲಿಂಗ ತಾರತಮ್ಯದ ಕುರಿತು ನಡೆಸಲಾದ ಬಹುತೇಕ ಅಧ್ಯಯನಗಳು ಪ್ರಸವಪೂರ್ವ ಸಾವುಗಳ ಮೇಲೆ ಬೆಳಕು ಚೆಲ್ಲಿದರೆ ಆನ್ವಯಿಕ ವ್ಯವಸ್ಥೆಗಳ ಪರಿಶೀಲನೆಯ (ಅಪ್ಲೈಡ್ ಸಿಸ್ಟಮ್ಸ್ ಅ್ಯನಾಲಿಸಿಸ್)ಅಂತರ್‌ರಾಷ್ಟ್ರೀಯ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಮಕ್ಕಳ ಸಾವಿನ ಪ್ರಮಾಣದ ಬಗ್ಗೆ ಮೊತ್ತಮೊದಲ ಬಾರಿಗೆ ಬೆಳಕು ಚೆಲ್ಲಲಾಗಿದೆ. ಹೆಣ್ಮಕ್ಕಳ ಅತಿಯಾದ ಸಾವು, 1,000 ಜನನಕ್ಕೆ 42 ಸಾವುಗಳು ಎಂಬ ಭಾರತದ ಸಹಸ್ರಮಾನ ಅಭಿವೃದ್ಧಿ ಗುರಿಯನ್ನು ಸಾಧಿಸಲು ತಡೆಯಾಗಬಹುದು. ಹೆಣ್ಮಕ್ಕಳ ಹೆಚ್ಚಿನ ಸಾವುಗಳು ಉತ್ತರ ಭಾರತದ ನಾಲ್ಕು ರಾಜ್ಯಗಳಿಗೆ ಬಹುತೇಕವಾಗಿ ಸೀಮಿತವಾಗಿದೆ ಎಂದು ಅಧ್ಯಯನದ ವರದಿಯಿಂದ ತಿಳಿದುಬರುತ್ತದೆ. ದೇಶದಲ್ಲಿ ಸಂಭವಿಸುತ್ತಿರುವ ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಹೆಣ್ಮಕ್ಕಳ ಸಾವಿನ ಪ್ರಮಾಣದ ಮೂರನೇ ಎರಡು ಭಾಗ ಅಂದರೆ ಶೇ. 66.7 ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಸಂಭವಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಶೇ.30.5, ಬಿಹಾರದಲ್ಲಿ ಶೇ.28.5, ರಾಜಸ್ಥಾನದಲ್ಲಿ ಶೇ.25.4 ಮತ್ತು ಮಧ್ಯಪ್ರದೇಶದಲ್ಲಿ ಶೇ.22.1. ಈ ರೀತಿಯಲ್ಲಿ ಅತಿಯಾದ ಹೆಣ್ಮಕ್ಕಳ ಸಾವಿಗೆ ಈ ನಾಲ್ಕು ರಾಜ್ಯಗಳು ತಮ್ಮ ಕಾಣಿಕೆಯನ್ನು ನೀಡಿವೆ. ಗ್ರಾಮೀಣ, ಕಡಿಮೆ ಶಿಕ್ಷಣ ಮಟ್ಟ ಹೊಂದಿರುವ ಕೃಷಿ ಆಧಾರಿತ ಪ್ರದೇಶಗಳು, ಜನಸಂಖ್ಯೆ ಸಾಂದ್ರತೆ ಹೆಚ್ಚಿರುವ ಪ್ರದೇಶಗಳು, ಕಡಿಮೆ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಹೊಂದಿರುವ ಮತ್ತು ಅಧಿಕ ಫಲವತ್ತತೆಯಿರುವ ಸಮುದಾಯಗಳಲ್ಲಿ ಹೆಣ್ಣು ಶಿಶುಗಳ ಹತ್ಯೆ ವ್ಯಾಪಕವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಠ ಒಂದು ಜಿಲ್ಲೆಯಲ್ಲಾದರೂ ಹೆಣ್ಮಕ್ಕಳ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಹೆಣ್ಮಕ್ಕಳ ಮರಣ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಬಹಳ ಕಡಿಮೆಯಿದೆ. ಲ್ಯಾನ್ಸೆಟ್ ಅಧ್ಯಯನವು, ಪಂಜಾಬ್, ಹರ್ಯಾಣ, ಗುಜರಾತ್, ಮಹಾರಾಷ್ಟ್ರ ಮುಂತಾದ ಜನನ ಅನುಪಾತದಲ್ಲಿ ಬಹಳ ವ್ಯತ್ಯಾಸವಿರುವ ರಾಜ್ಯಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುವುದಿಲ್ಲ. ಇತ್ತೀಚೆಗೆ ನೀತಿ ಆಯೋಗ ಬಿಡುಗಡೆ ಮಾಡಿದ ವರದಿಯಲ್ಲಿ, ಗುಜರಾತ್‌ನಲ್ಲಿ 2012-14ರಲ್ಲಿ ಸಾವಿರ ಪುರುಷರಿಗೆ 907 ಇದ್ದ ಮಹಿಳೆಯರ ಸಂಖ್ಯೆ 2013-15ರ ಹೊತ್ತಿಗೆ 854ಕ್ಕೆ ತಲುಪಿತ್ತು. ಆದರೆ ಲ್ಯಾನ್ಸೆಟ್ ಅಧ್ಯಯನದಲ್ಲಿ ಹರ್ಯಾಣವನ್ನು ಹೊರತುಪಡಿಸಿ ಮೇಲೆ ತಿಳಿಸಲಾದ ಇತರ ರಾಜ್ಯಗಳಲ್ಲಿ ಹೆಚ್ಚಿನ ಹೆಣ್ಮಕ್ಕಳ ಮರಣಗಳ ಬಗ್ಗೆ ಉಲ್ಲೇಖವಿರಲಿಲ್ಲ. ಲಿಂಗ ಆಯ್ಕೆಯ ಗರ್ಭಪಾತಗಳು ಮತ್ತು ಹೆಣ್ಮಕ್ಕಳ ಹೆಚ್ಚಿನ ಮರಣ ಪ್ರಮಾಣವು ಹೆಣ್ಮಕ್ಕಳ ವಿರುದ್ಧ ನಡೆಯುವ ಲಿಂಗ ತಾರತಮ್ಯದಿಂದ ನಡೆಯುತ್ತಿವೆಯಾದರೂ ಇದು ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ಭಾರತದಲ್ಲಿ ನಡೆಯುವ ಹೆಣ್ಮಕ್ಕಳ ಹೆಚ್ಚಿನ ಮರಣದ ಮೇಲಾಗುವ ಪರಿಣಾಮವನ್ನು ತಿಳಿಯಲು ಸಂಶೋಧಕರು 46 ದೇಶಗಳಿಂದ ಹೆಣ್ಮಕ್ಕಳ ಮರಣ ಪ್ರಮಾಣದ ಬಗ್ಗೆ ಅಂಕಿಅಂಶಗಳನ್ನು ಕಲೆಹಾಕಿದ್ದು ಅಲ್ಲಿ ಲಿಂಗ ತಾರತಮ್ಯದ ಯಾವುದೇ ಸುಳಿವು ಸಿಕ್ಕಿಲ್ಲ. ಈ ಅಧ್ಯಯನದ ವೇಳೆ ಭಾರತದಲ್ಲಿ 2000ದಿಂದ 2005ರ ಮಧ್ಯೆ ಜನಿಸಿದ ಹದಿಮೂರು ಮಿಲಿಯನ್ ಹೆಣ್ಮಕ್ಕಳ ಪೈಕಿ 1,78,100 ಹೆಣ್ಮಕ್ಕಳು ಪ್ರಸವಪೂರ್ವ ಲಿಂಗ ತಾರತಮ್ಯದ ಪರಿಣಾಮವಾಗಿ ಸಾವನ್ನಪ್ಪಿವೆ ಎಂಬುದು ತಿಳಿದುಬಂದಿದೆ. ಈ ತಾರತಮ್ಯಗಳ ಪೈಕಿ ಅಗತ್ಯ ಆರೋಗ್ಯ ಸಂಬಂಧಿ ಚಿಕಿತ್ಸೆಗಳನ್ನು ನೀಡದಿರುವುದು ಮತ್ತು ಆಹಾರವನ್ನು ನೀಡದಿರುವುದು ಸೇರಿದೆ ಎಂದು ಅಧ್ಯಯನದ ವರದಿ ತಿಳಿಸುತ್ತದೆ. ಐಐಎಎಸ್‌ಎಯಲ್ಲಿ ಸಂಶೋಧಕಿಯಾಗಿರುವ ನಂದಿತಾ ಸೈಕಿಯಾ ಹೇಳುವಂತೆ, 2000-2005ರ ಅವಧಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಬಹುತೇಕ ಸಮಾನವಾದ ಅಂಕಿಅಂಶಗಳು ಲಭ್ಯವಾಗಿದ್ದ ಕಾರಣ ಅಧ್ಯಯನದ ಲೇಖಕರು ಈ ಅವಧಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಈ ಅಧ್ಯಯನದ ವರದಿಯು ಲಿಂಗ ತಾರತಮ್ಯದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯದ ಮತ್ತು ಅದರ ಲಾಭವು ಭಾರತೀಯ ಮಹಿಳೆಯರಿಗೆ ಸಿಗುವಂತಾಗಲು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕೆಂಬುದನ್ನು ಎತ್ತಿ ತೋರಿಸುತ್ತದೆ ಎಂದು ಸೈಕಿಯಾ ತಿಳಿಸುತ್ತಾರೆ. ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಹೆಣ್ಮಕ್ಕಳ ಹೆಚ್ಚಿನ ಮರಣ ಮತ್ತು ಅಭಿವೃದ್ಧಿಹೀನತೆ ಮತ್ತು ಕೃಷಿ ಹಾಗೂ ಮನೆಗೆಲಸಗಳ ಮೇಲೆ ಅವಲಂಬನೆ ಮುಂತಾದ ಸಾಮಾಜಿಕ ಆರ್ಥಿಕ ಭಿನ್ನತೆಗಳ ಮಧ್ಯೆ ಸಮೀಪದ ಸಂಬಂಧವಿದೆ ಎಂಬುದು ಅಂಕಿಅಂಶಗಳ ಮತ್ತು ಮ್ಯಾಪಿಂಗ್ ವಿಶ್ಲೇಷಣೆಗಳಿಂದ ತಿಳಿದುಬರುತ್ತದೆ. ಸಂಶೋಧಕರ ಪ್ರಕಾರ, ಮುಸ್ಲಿಮರು ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಲ್ಲಿ ಲಿಂಗ ತಾರತಮ್ಯ ಕಡಿಮೆಯಿರುವುದಾಗಿ ತಿಳಿಸುತ್ತಾರೆ. ಭಾರತದ 640 ಜಿಲ್ಲೆಗಳಲ್ಲಿ ಹಿಂದೂಗಳಲ್ಲಿ ಐದಕ್ಕಿಂತ ಕಡಿಮೆ ಪ್ರಾಯದ ಹೆಣ್ಮಕ್ಕಳ ಮರಣ ಪ್ರಮಾಣ ಅತೀ ಹೆಚ್ಚಾಗಿದೆ. ಈ ಬಗ್ಗೆ ಅನೂಪ್ ಸದಾನಂದನ್ ಈ ರೀತಿಯಾಗಿ ಬರೆಯುತ್ತಾರೆ. ಹಿಂದೂ ಬಾಹುಳ್ಯವಿರುವ ರಾಜ್ಯಗಳಲ್ಲಿ ಗಂಡು ಮಗುವಿಗೆ ಆದ್ಯತೆ ನೀಡುವವರು ಹೆಚ್ಚು. ಆದರೆ ಹಿಂದೂಯೇತರರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಈ ಸಮಸ್ಯೆ ಕಡಿಮೆಯಾಗಿದೆ. ಲಿಂಗ ತಾರತಮ್ಯದ ಅನುಪಾತ ದೇಶಾದ್ಯಂತದ ಸಮಸ್ಯೆಯಲ್ಲ, ಇದು ಪ್ರಮುಖವಾಗಿ ಹಿಂದೂಗಳ ಸಮಸ್ಯೆಯಾಗಿದೆ. ಸಹಲೇಖಕ ಕ್ರಿಸ್ಟೊಫಿ ಗಿಲಿಮೊಟೊ ಪ್ರಕಾರ, ಲಿಂಗ ತಾರತಮ್ಯವು ಶಿಕ್ಷಣದ ಹಕ್ಕು, ಉದ್ಯೋಗ ಮತ್ತು ರಾಜಕೀಯ ಪ್ರತಿನಿಧಿತ್ವಕ್ಕೆ ಸೀಮಿತವಾಗಿಲ್ಲ. ಅದು ಹೆಣ್ಮಕ್ಕಳ ಕಾಳಜಿ, ಲಸಿಕೆ ಹಾಗೂ ಪೌಷ್ಟಿಕಾಂಶ ಮತ್ತು ಅಂತಿಮವಾಗಿ ಜೀವನದ ಜೊತೆಯೂ ಸಂಬಂಧ ಹೊಂದಿದೆ.

Similar News