ಮಹಾಭಾರತ ಕಾಲದಲ್ಲೇ ಪೇಯ್ಡ್ ನ್ಯೂಸ್ ಇತ್ತು!

Update: 2018-06-02 18:20 GMT

ರಾಮಾಯಣ ಕಾಲದಲ್ಲಿ ವಿಮಾನ ಇತ್ತು, ಸೀತೆ ಟೆಸ್ಟ್ ಟ್ಯೂಬ್ ಬೇಬಿ, ಮಹಾಭಾರತ ಕಾಲದಲ್ಲಿ ಇಂಟರ್ನೆಟ್ ಇತ್ತು, ನಾರದ ಮೊದಲ ಪತ್ರಕರ್ತ ಇತ್ಯಾದಿ ಇತ್ಯಾದಿ ಸಂಶೋಧನೆಗಳು ಬಿಜೆಪಿಯ ಮುಖಂಡರಿಂದ ಪುಂಖಾನು ಪುಂಖವಾಗಿ ಹೊರ ಬರುತ್ತಿರುವುದು ನೋಡಿ, ಪತ್ರಕರ್ತ ಎಂಜಲು ಕಾಸಿ ರೋಮಾಂಚಗೊಂಡ. ಮಹಾಭಾರತ ಕಾಲದಲ್ಲಿ ಕರ್ಣ, ದುರ್ಯೋಧನ, ಅರ್ಜುನ ಮೊದಲಾದವರೆಲ್ಲ ವಾಟ್ಸ್‌ಆ್ಯಪ್ ಕಳುಹಿಸುವುದು, ವಾಟ್ಸ್‌ಆ್ಯಪ್‌ನಲ್ಲಿ ಕೌರವೇಶ್ವರನ ಗುಂಪು, ಪಾಂಡವರ ಗುಂಪುಗಳಿರುವುದು, ಅವರು ಯುದ್ಧದ ಬಗ್ಗೆ ಕಮೆಂಟ್‌ಗಳನ್ನು ಹಾಕುವುದು, ಪರಸ್ಪರ ಟೀಕಿಸುವುದು ಇವೆಲ್ಲ ನಡೆದಿರಲೇಬೇಕು. ಈ ನಿಟ್ಟಿನಲ್ಲಿ ಇಡೀ ಮಹಾಭಾರತವನ್ನು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ತಿದ್ದುವುದು ಅಗತ್ಯ ಎಂದು ಅನ್ನಿಸಿತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ಎಂಜಲು ಕಾಸಿ, ಮಹಾಭಾರತದ ಒಂದು ಅಧ್ಯಾಯವನ್ನು ಬರೆಯುವ ಪ್ರಯತ್ನ ಮಾಡಿದ್ದು ಆ ಭಾಗ ಇಲ್ಲಿದೆ.

***

ಯುದ್ಧದಲ್ಲಿ ಸೋತ ದುರ್ಯೋಧನನಿಗೆ ಇದ್ದಕ್ಕಿದ್ದಂತೆಯೇ ಸಂಶಯ ಬಂದು ಬಿಟ್ಟಿತು. ನಮ್ಮದು 11 ಅಕ್ಷೋಹಿಣಿ ಸೈನ್ಯ. ಪಾಂಡವರದ್ದು ಬರೇ ಏಳು ಅಕ್ಷೋಹಿಣಿ ಸೈನ್ಯ. ಅದಲ್ಲದೆ ಯುದ್ಧದಲ್ಲಿ ಅತ್ಯಾಧುನಿಕ ಕ್ಷಿಪಣಿಗಳನ್ನೂ ನಾವು ಬಳಸಿದ್ದೇವೆ. ಆದರೂ ಯುದ್ಧದಲ್ಲಿ ಸೋತದ್ದು ಹೇಗೆ? ತಕ್ಷಣ ಆತನಿಗೆ ಇವಿಎಂನ ನೆನಪಾಯಿತು. ಪಾಂಡವರು ಇವಿಎಂ ಹ್ಯಾಕ್ ಮಾಡಿದ್ದಾರೆ. ಆದುದರಿಂದಲೇ ನನಗೆ ಸೋಲಾಗಿದೆ. ಸರಿ, ದುರ್ಯೋಧನ ತಕ್ಷಣ ಪತ್ರಿಕಾಗೋಷ್ಠಿ ಕರೆದ. ಬಹುತೇಕ ಸೋದರರೆಲ್ಲ ಯುದ್ಧದಲ್ಲಿ ಹತರಾಗಿರುವುದರಿಂದ, ಪಕ್ಕದಲ್ಲಿ ಅಶ್ವತ್ಥಾಮ, ಶಲ್ಯ, ಕೃಪ ಮೊದಲಾದವರಷ್ಟೇ ಇದ್ದರು. ಖ್ಯಾತ ಪತ್ರಕರ್ತರಾದ ನಾರದ, ಲೇಖಕರಾದ ವ್ಯಾಸ ಮೊದಲಾದವರು ಅಲ್ಲಿ ಸೇರಿದ್ದರು.
‘‘ನೋಡಿ...ಇವಿಎಂನ್ನು ಹ್ಯಾಕ್ ಮಾಡಿರುವುದರಿಂದಲೇ ಯುದ್ಧದಲ್ಲಿ ಪಾಂಡವರಿಗೆ ಜಯವಾಗಿದೆ. ನಾನು ಗೆಲ್ಲುವ ಸಾಧ್ಯತೆಗಳಿತ್ತು ಎನ್ನುವುದು ಯುದ್ಧ ಪೂರ್ವ ಸಮೀಕ್ಷೆಯಲ್ಲಿ ವಿವಿಧ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ಫಲಿತಾಂಶ ಉಲ್ಟಾ ಆಗಿದೆ....’’ ದುರ್ಯೋಧನ ಆರೋಪಿಸಿದೆ.

‘‘ಆದರೆ ಚುನಾವಣಾ ಆಯೋಗದ ಮುಖ್ಯಸ್ಥರಾದ ವಿಧುರ ಅವರು ಅಂತಹದೇನೂ ನಡೆದಿಲ್ಲ. ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರಲ್ಲ?’’ ಪತ್ರಕರ್ತ ನಾರದರು ಕೇಳಿದರು.
ಪತ್ರಕರ್ತ ನಾರದರ ಪತ್ರಿಕೆ ಪೂರ್ಣವಾಗಿ ಪಾಂಡವರ ಪೇಯ್ಡಿ ನ್ಯೂಸ್ ಹಾಕುತ್ತಿತ್ತು, ಯುದ್ಧದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿತ್ತು ಎನ್ನುವುದು ದುರ್ಯೋಧನನಿಗೆ ಗೊತ್ತಿತ್ತು. ಆದರೂ ಆತ ತಾಳ್ಮೆಯನ್ನು ಪಾಲಿಸಿದ ‘‘ನೋಡಿ, ಚುನಾವಣಾಯುಕ್ತರಾಗಿರುವ ವಿಧುರನಿಗೆ ಪಾಂಡವರ ಮೇಲೆ ಬಹಳ ಪ್ರೀತಿಯಿದೆ. ಚುನಾವಣಾಯುಕ್ತರಾಗಿ ವಿಧುರನನ್ನು ನೇಮಿಸಿದಾಗಲೇ ನನಗೆ ಅನುಮಾನವಿತ್ತು. ಯುದ್ಧದಲ್ಲಿ ಭಾರೀ ಮೋಸ ನಡೆದಿದೆ. ಸಾಮಾಜಿಕ ತಾಣಗಳಲ್ಲಿ ನನ್ನ ಕುರಿತಂತೆ ತಪ್ಪು ವದಂತಿಗಳನ್ನು ಹರಡಲಾಗಿದೆ....’’

‘‘ನೀವು ಸಾಮಾಜಿಕ ತಾಣಗಳ ಮುಖ್ಯಸ್ಥರಲ್ಲಿ ಕಂಪ್ಲೇಟ್ ನೀಡಬೇಕಾಗಿತ್ತು....ಅದರ ಮುಖ್ಯಸ್ಥರಲ್ಲಿ ಒಬ್ಬ ನಿಮ್ಮದೇ ಪಿತಾಶ್ರಿಯವರ ಆಪ್ತ ಸಂಜಯ ಕೂಡ ಇದ್ದರಲ್ಲ....ಯುದ್ಧದ ವರದಿಗಳನ್ನು ವಿವಿಧೆಡೆಗೆ ತಲುಪಿಸಲು ವಿಶೇಷ ಪೇಜ್ ಒಂದನ್ನು ಅವರು ಮಾಡಿದ್ದರು...’’’ ನಾರದ ಮತ್ತೊಮ್ಮೆ ಹೇಳಿದರು. ‘‘ಕೆಲವು ಪತ್ರಕರ್ತರೂ ವದಂತಿಗಳನ್ನು ಹಬ್ಬಿಸಿದ್ದಾರೆ. ಪೇಯ್ಡಾ ನ್ಯೂಸ್‌ಗಳನ್ನು ಹಾಕಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಈ ಬಗ್ಗೆಯೂ ನಾನು ಚುನಾವಣಾ ಆಯುಕ್ತರಿಗೆ ದೂರುಗಳನ್ನು ನೀಡಲಿದ್ದಾನೆ....’’ ದುರ್ಯೋಧನ ಈಗ ನೇರವಾಗಿ ನಾರದರಿಗೆ ಬಾಣ ಬಿಟ್ಟ. ನಾರದರು ಪ್ರಶ್ನೆ ಕೇಳುವುದನ್ನು ಅಲ್ಲಿಗೆ ನಿಲ್ಲಿಸಿದರು.

‘‘ಆದರೆ ಪಾಂಡವರ ಜೊತೆಗೆ ಜೂಜಾಟದ ಸಂದರ್ಭದಲ್ಲಿ ನೀವು ಕೂಡ ಇವಿಎಂನ್ನು ತಿರುಚಿದ್ದೀರಿ ಎಂಬ ಆರೋಪಗಳಿವೆ. ಆದುದರಿಂದಲೇ ಪಾಂಡವರು ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು...ಎಂದು ಪಾಂಡವರು ಹೇಳುತ್ತಿದ್ದಾರೆ....’’ ಇದೀಗ ಇನ್ನೋರ್ವ ವಾರ ಪತ್ರಿಕೆಯ ಪತ್ರಕರ್ತ ಕೇಳಿದ.

‘‘ಜೂಜಾಟ ಬಹಿರಂಗವಾಗಿ, ಮುಕ್ತವಾಗಿ ನಡೆದಿತ್ತು. ಅಷ್ಟೇ ಅಲ್ಲ, ಒಮ್ಮೆ ಸೋತ ಪಾಂಡವರಿಗೆ ಇನ್ನೊಮ್ಮೆ ಅವಕಾಶವನ್ನು ನೀಡಲಾಯಿತು. ಒಂದು ವೇಳೆ ಇವಿಎಂನ ಮೇಲೆ ಅನುಮಾನ ಇದ್ದಿದ್ದರೆ ಅವರು ಅದನ್ನು ಮೊದಲೇ ಹೇಳಬೇಕಾಗಿತ್ತು. ಜೂಜಾಟದ ಫಲಿತಾಂಶ ಹೊರ ಬಿದ್ದ ಮೇಲೆ ಆರೋಪ ಮಾಡುವುದು ಎಷ್ಟು ಸರಿ?’’ ದುರ್ಯೋಧನ ಈಗ ಮರು ಪ್ರಶ್ನೆ ಹಾಕಿದ. ‘‘ಯುದ್ಧಗಳಲ್ಲಿ ನೀವು ಅಣ್ವಸ್ತ್ರಗಳನ್ನು ಬಳಸಿದ್ದೀರಿ ಎಂದು ಆರೋಪಗಳಿವೆಯಲ್ಲ? ರಾಸಾಯನಿಕ ಅಸ್ತ್ರಗಳ ಬಳಕೆಯಾಗಿದೆ ಎಂದು ಈಗಾಗಲೇ ಬ್ರಹ್ಮ, ವಿಷ್ಣು ಆದಿಗಳಿಗೆ ವರದಿ ಹೋಗಿದೆ. ಈ ಕುರಿತಂತೆ ತನಿಖೆಯಾಗಬೇಕು ಎಂದು ವ್ಯಾಪಕ ಆಗ್ರಹಗಳಿವೆ....’’ ಇದೀಗ ಹಿರಿಯ ಲೇಖಕರು, ಅಂಕಣಗಾರರೂ ಆಗಿರುವ ವ್ಯಾಸ ಮಹರ್ಷಿಗಳು ಬಾಯಿ ತೆರೆದರು. ‘‘ನೋಡಿ...ಅರ್ಜುನನ ಕೈಯಲ್ಲಿರುವ ಮಾರಕಾಸ್ತ್ರದಿಂದಲೇ ಕರ್ಣ ಸತ್ತ....ಆತನನ್ನು ವಂಚನೆಯಿಂದ ಸೋಲಿಸಲಾಯಿತು. ರಥದ ಚಕ್ರವನ್ನು ಕಂಪ್ಯೂಟರ್ ಮೂಲಕ ಹ್ಯಾಕ್ ಮಾಡಿ ಉರುಳಿಸಲಾಯಿತು. ಹಾಗೆಯೇ ಯುದ್ಧದ ಆರಂಭದಲ್ಲಿ ಸೂಟ್‌ಕೇಸ್ ಮೂಲಕ ಹಲವು ಸೈನಿಕರನ್ನುಪಾಂಡವರು ಕೊಂಡು ಕೊಂಡಿದ್ದಾರೆ....’’ ದುರ್ಯೋಧನ ಅದಕ್ಕೆ ಪ್ರತಿಯಾಗಿ ಉತ್ತರಿಸಿದ. ‘‘ನಿಮ್ಮ ಸೋಲಿನಲ್ಲಿ ನಿಮ್ಮವರದೇ ಕೈವಾಡಗಳಿವೆ ಎಂಬ ಆರೋಪ ಇದೆಯಲ್ಲ....’’ ವೆಬ್‌ಸೈಟ್ ಸಂಪಾದಕರೊಬ್ಬರು ಕೇಳಿದರು.

‘‘ಅದರ ಕುರಿತಂತೆ ತನಿಖೆ ನಡೆಯುತ್ತಿದೆ. ಕೆಲವು ಹಿರಿಯರು ನಮ್ಮ ಉಪ್ಪು ತಿಂದು ಪಾಂಡವರ ಪರವಾಗಿ ಕೆಲಸ ಮಾಡಿರುವ ವಿವರಗಳು ದೊರಕಿವೆ. ಪಕ್ಷದೊಳಗಿದ್ದುಕೊಂಡೇ ಅವರು ನನ್ನ ವಿರುದ್ಧ ಕೆಲಸ ಮಾಡಿದ್ದಾರೆ....’’ ದುರ್ಯೋಧನ ವಿಷಾದದಿಂದ ಉತ್ತರಿಸಿದ.

‘‘ಇವಿಎಂ ಬದಲಿಸಬೇಕು ಎನ್ನುವುದು ನಿಮ್ಮ ಇಂಗಿತವೇ?’’ ನಾರದರು ಈಗ ಬಾಯಿ ತೆರೆದರು.

‘‘ಹೌದು. ಅಷ್ಟೇ ಅಲ್ಲ, ಈಗ ಇರುವ ಯುದ್ಧದ ಫಲಿತಾಂಶವನ್ನು ರದ್ದು ಪಡಿಸಬೇಕು. ಹೊಸದಾಗಿ ನನಗೆ ಯುದ್ಧ ಮಾಡಲು ಅವಕಾಶ ನೀಡಬೇಕು....ನನಗಾದ ನಾಶ ನಷ್ಟಕ್ಕೆ ಪರಿಹಾರ ನೀಡಬೇಕು. ಇಷ್ಟೇ ಅಲ್ಲದೆ ಭೀಮನ ಹೊಡೆತದಿಂದ ನನ್ನ ತೊಡೆಯ ಮೂಳೆ ಸಂಪೂರ್ಣ ಮುರಿದಿದೆ. ಇದನ್ನು ಕಸಿ ಮಾಡುವುದಕ್ಕೆ ಆಧುನಿಕ ತಂತ್ರಜ್ಞಾನ ಬಳಸಬೇಕಾಗಿದೆ. ಯುದ್ಧದಿಂದ ನನ್ನ ಖಜಾನೆ ಬರಿದಾಗಿದೆ. ಆದುದರಿಂದ ಶಸ್ತ್ರಕ್ರಿಯೆಗೆ ಬೇಕಾದ ಹಣವನ್ನು ಪಾಂಡವರಿಂದ ಒದಗಿಸಿ ಕೊಡಬೇಕು....ಹಾಗೆಯೇ ಸಾಮಾಜಿಕ ತಾಣಗಳಲ್ಲಿ ಸುಮ್ಮ ಸುಮ್ಮನೆ ‘ಅಶ್ವತ್ಥಾಮ ಹತಃ....’ ಎಂಬ ವದಂತಿಯನ್ನು ಹರಿಯ ಬಿಟ್ಟ ಪಾಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದನ್ನು ದ್ರೋಣರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿಕೊಟ್ಟ ರೋಸ್ಟ್ ಕಾರ್ಡ್ ವೆಬ್ ಸೈಟ್ ನ ಮೇಲೆ ಕ್ರಮ ಕೈಗೊಳ್ಳಬೇಕು...’’ ದುರ್ಯೋಧನ ಬೇಡಿಕೆಯ ಪಟ್ಟಿಗಳನ್ನೇ ಇಟ್ಟ. ‘‘ಆದರೆ ಇದನ್ನು ಪಾಂಡವರು ಒಪ್ಪಬೇಕಲ್ಲ....’’

‘‘ಪಾಂಡವರು ಒಪ್ಪದೇ ಇದ್ದರೆ ನಾನು ಜನರ ಬಳಿಗೆ ಹೋಗುತ್ತೇನೆ.....’’

‘‘ಆದರೆ ಜನರೆಲ್ಲ ಯುದ್ಧದಲ್ಲಿ ಸತ್ತು ಹೋಗಿದ್ದಾರಲ್ಲ....’’ ಪತ್ರಕರ್ತನೊಬ್ಬ ಇನ್ನೊಂದು ಅನುಮಾನವಿಟ್ಟ.

‘‘ಹಾಗಾದರೆ ನಾನು ಫೇಸ್‌ಬುಕ್ ಝುಕರ್ ಬರ್ಗ್‌ಗೆ ಕಂಪ್ಲೇಂಟ್ ಮಾಡುವೆ....’’ ದುರ್ಯೋಧನ ಹೇಳುತ್ತಿದ್ದಂತೆಯೇ ‘‘ಇದು ಕಲಿಯುಗವಲ್ಲ...ದ್ವಾಪರ ಯುಗ’’ ಎಂದು ದುರ್ಯೋಧನನನ್ನು ನಾರದ ತಟ್ಟಿ ಎಚ್ಚರಿಸಿದ.

 ಯಾರೋ ತಟ್ಟಿದಂತಾಗಿ ಎದ್ದುಕೂತರೆ ಎದುರಿನಲ್ಲಿ ಪತ್ನಿ ಸೂಸಿ ನಿಂತಿದ್ದಾಳೆ. ನಾನು ಕಲಿಯುಗದಲ್ಲಿದ್ದೇನೆಯೋ, ದ್ವಾಪರಯುಗದಲ್ಲಿದ್ದೇವೆಯೋ ಎಂದು ಪತ್ರಕರ್ತ ಕಾಸಿ ಗೊಂದಲದಲ್ಲಿರುವಾಗ ಟಿವಿಯಲ್ಲಿ ಬಿಜೆಪಿ ಸಂಸದನೊಬ್ಬ ಒದರುತ್ತಿದ್ದ ‘‘ಸೀತೆ ಟೆಸ್ಟ್ ಟ್ಯೂಬ್ ಬೇಬಿ....’’

Writer - -ಚೇಳಯ್ಯ chelayya@gmail.com

contributor

Editor - -ಚೇಳಯ್ಯ chelayya@gmail.com

contributor

Similar News