ನನ್ನ ಪುತ್ರ ಬಲಿಯಾಗಿದ್ದರೂ ಉಳಿದವರು ಸೇನೆಗೆ ಮಕ್ಕಳನ್ನು ಸೇರಿಸಿ : ಹುತಾತ್ಮ ಯೋಧ ಔರಂಗಝೇಬ್ ನ ತಂದೆ ಹನೀಫ್
ಮೆಂಧರ್,ಜೂ.16 : "ನನ್ನ ಪುತ್ರ ಇನ್ನಿಲ್ಲ, ಆದರೆ ಎಲ್ಲಾ ಜನರು ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸುವುದನ್ನು ನಿಲ್ಲಿಸಿದರೆ ಆಗ ದೇಶಕ್ಕಾಗಿ ಯಾರು ಹೋರಾಡುತ್ತಾರೆ?,'' ಎಂದು ಸಲಾನಿ ಗ್ರಾಮದ ಮೆಂಧರ್-ಪೂಂಚ್ ರಸ್ತೆ ಸಮೀಪದ ತಮ್ಮ ಒಂದು ಮಹಡಿಯ ಮನೆಯ ಪಕ್ಕದ ಮರದ ನೆರಳಿನಲ್ಲಿ ನಿಂತುಕೊಂಡು ಗುರುವಾರ ಉಗ್ರವಾದಿಗಳಿಂದ ಅಪಹರಣಕ್ಕೊಳಗಾಗಿ ಹತ್ಯೆಗೈಯ್ಯಲ್ಪಟ್ಟ ತನ್ನ 24 ವರ್ಷದ ಪುತ್ರ, 44 ರಾಷ್ಟ್ರೀಯ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೈನಿಕ ಔರಂಗಝೇಬ್ ನ ಮೃತದೇಹದ ಆಗಮನಕ್ಕಾಗಿ ಕಾಯುತ್ತಿದ್ದ ಮುಹಮ್ಮದ್ ಹನೀಫ್ ಹೇಳುತ್ತಾರೆ.
ಈದ್ ಹಬ್ಬಕ್ಕಾಗಿ 'ಜೇಬಿ' ಮನೆಯ ಹಾದಿಯಲ್ಲಿದ್ದ, ಆತನ ತಂದೆ ವಸ್ತುಶಃ ಅಧೀರರಾಗಿದಾರೆ. ಆದರೂ 55 ವರ್ಷದ ಮಾಜಿ ಸೈನಿಕರಾಗಿರುವ ಅವರು ತಾವೇನೂ ಅಧೀರರಾಗಿಲ್ಲ ಎಂದು ಹೇಳಲು ಪ್ರಯತ್ನಿಸುತ್ತಾರೆ. "ಸಾವು ಒಂದಲ್ಲಾ ಒಂದು ದಿನ ಬರಲೇಬೇಕು. ದೇಶ ಸೇವೆಗೈಯ್ಯಲು ಅವನನ್ನು ಸೇನೆಗೆ ಸೇರಿಸಿದ್ದೆ. ಸೈನಿಕನೊಬ್ಬನ ಕೆಲಸ ವೈರಿಯನ್ನು ಕೊಲ್ಲುವುದು ಅಥವಾ ವೈರಿಯಿಂದ ಕೊಲ್ಲಲ್ಪಡುವುದಾಗಿದೆ,'' ಎಂದು ಅವರು ಹೇಳುತ್ತಾರೆ.
ಹನೀಫ್ ಮತ್ತು ರಾಜ್ ಬೇಗಮ್ ದಂಪತಿಯ ನಾಲ್ಕು ಮಂದಿ ಪುತ್ರಿಯರೂ ಸೇರಿದಂತೆ ಹತ್ತು ಮಂದಿ ಮಕ್ಕಳಲ್ಲಿ ಔರಂಗಝೇಬ್ ನಾಲ್ಕನೆಯವನಾಗಿದ್ದ. ಹನೀಫ್ ಅವರ ಹಿರಿಯ ಪುತ್ರ ಮುಹಮ್ಮದ್ ಖಾಸಿಂ ಸೇನೆಯಲ್ಲಿದ್ದು ಆತನ ಇಬ್ಬರು ಕಿರಿಯ ಪುತ್ರರಾದ ಮೊಹಮ್ಮದ್ ತಾರೀಖ್ ಹಾಗೂ ಮೊಹಮ್ಮದ್ ಶಬೀರ್ ಕೂಡ ಸೇನೆ ಸೇರಲು ಸಿದ್ಧರಾಗಿದ್ದಾರೆ. ತಾರಿಖ್ ಈಗಾಗಲೇ ಲಿಖಿತ ಹಾಗೂ ದೈಹಿಕ ಪರೀಕ್ಷೆ ತೇರ್ಗಡೆಯಾಗಿದ್ದರೆ, ಶಬೀರ್ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಜುಲೈ 27ರಂದು ನಡೆಯುವ ಲಿಖಿತ ಪರೀಕ್ಷೆಗೆ ಸಿದ್ಧನಾಗುತ್ತಿದ್ದಾನೆ.
"ನಮ್ಮದು ಒಂದು ಸೈನಿಕರ ಕುಟುಂಬ,'' ಎಂದು ಹನೀಪ್ ಹೇಳುತ್ತಾರೆ. ಆದರೆ ಮನೆಯೊಳಗಡೆ ಔರಂಗಝೇಬ್ ತಾಯಿ ರಾಜ್ ಬೇಗಂ ಅವರು ಕಣ್ಣೀರ ಕೋಡಿಯಾಗಿದ್ದಾರೆ. ಸ್ಥಳದಲ್ಲಿ ನಿಯೋಜಿಸಲ್ಪಟ್ಟಿದ್ದ ಸೇನಾ ಘಟಕವೊಂದರ ಮುಖಾಂತರ ಗುರುವಾರ ಸಂಜೆ 4.30ರ ಸುಮಾರಿಗೆ ತಮ್ಮ ಪುತ್ರನ ಅಪಹರಣದ ಸುದ್ದಿ ತಿಳಿದು ಬಂದಿತ್ತು ಎಂದು ಹನೀಫ್ ಹೇಳುತ್ತಾರೆ. "ನನ್ನ ಪತ್ನಿ ಮತ್ತು ನಾನು ಹತ್ತಿರದ ಕಸ್ಬಲರಿ ಗ್ರಾಮಕ್ಕೆ ಹೋಗಿದ್ದಾಗ ನನ್ನ ಮೊಬೈಲ್ ಫೋನಿಗೆ ಕರೆಯೊಂದು ಬಂದಿತ್ತು. ಉರ್ದು ಭಾಷೆಯಲ್ಲಿ ಅತ್ತ ಕಡೆಯಿಂದ ವ್ಯಕ್ತಿಯೊಬ್ಬ ನನ್ನನ್ನು ಕೇಳಿದರೂ ಆಕೆ ಫೋನ್ ಡಿಸ್ ಕನೆಕ್ಟ್ ಮಾಡಿದ್ದಳು. ಮತ್ತೆ ಅದೇ ನಂಬರಿಗೆ ಕರೆ ಮಾಡಿದಾಗ ರಾಷ್ಟ್ರೀಯ ರೈಫಲ್ಸ್ ಕರೆ ಅದಾಗಿತ್ತು. ಔರಂಗಝೇಬ್ ಅಪಹರಣ ಸುದ್ದಿಯನ್ನು ನಮಗೆ ತಿಳಿಸಲಾಯಿತು. ನನ್ನ ಪತ್ನಿ ಬಳಿ ನಾನು ಜೆಬಿ ನೊ ಮಿಲಿಟೆಂಟ್ ಲೇ ಗಯೇ (ಔರಂಗಜೇಬನನ್ನು ಉಗ್ರವಾದಿಗಳು ತೆಗೆದುಕೊಂಡು ಹೋಗಿದ್ದಾರೆ) ಎಂದು ಹೇಳಿದೆ. ಆತನ ಹತ್ಯೆಯ ಸುದ್ದಿಯನ್ನು ಸೇನೆ ಮಧ್ಯರಾತ್ರಿ ಸುಮಾರಿಗೆ ತಿಳಿಸಿತು. ಆದರೆ ಬೆಳಿಗ್ಗೆ ಸಂಬಂಧಿಗಳು ಮನೆಗೆ ಬರಲಾರಂಭಿಸಿದಾಗಲಷ್ಟೇ ನನ್ನ ಪತ್ನಿಗೆ ಈ ವಿಚಾರ ತಿಳಿಯಿತು,'' ಎಂದು ಹನೀಫ್ ಹೇಳುತ್ತಾರೆ.
ಎರಡು ತಿಂಗಳು ರಜೆಯ ನಂತರ ಔರಂಗಝೇಬ್ ಮೇ ತಿಂಗಳಲ್ಲಿ ತನ್ನ ಯುನಿಟ್ ಗೆ ಹಿಂದಿರುಗಿದ್ದ ಎಂದು ರಾಜ್ ಸೋದರ ಮುಹಮ್ಮದ್ ಅಕ್ರಮ್ ಹೇಳುತ್ತಾರೆ. "ಸೋದರ ಸಂಬಂಧಿಯೊಬ್ಬನ ವಿವಾಹಕ್ಕೆಂದು ಆತ ಹೊಸ ಶೂ ಖರೀದಿಸಿದ್ದ, ಮದುವೆಯ ನಂತರ ತಡ ರಾತ್ರಿ ತನಕ ಕುಣಿದಿದ್ದ, ಔರಂಗಝೇಬ್ ಕಾಶ್ಮಿರದಿಂದ ಹಿಂದಕ್ಕೆ ಬರುತ್ತಿದ್ದರೆ ಆತನ ಹಿರಿಯ ಸೋದರ ಪುಣೆಯಿಂದ ಈದ್ ಆಚರನೆಗೆ ಬರುತ್ತಿದ್ದ,'' ಎಂದು ಅವರು ಹೇಳುತ್ತಾರೆ.
ಕಳೆದ ತಿಂಗಳು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಮೀರ ಟೈಗರ್ ನನ್ನು ಕೊಂದ ಸೇನೆಯ ತಂಡದ ಭಾಗವಾಗಿ ಔರಂಗಝೇಬ್ ಇದ್ದ ಎಂದು ಹನೀಫ್ ನೆರೆಹೊರೆಯವರು ತಿಳಿಸುತ್ತಾರೆ. "ಹಲವಾರು ಉಗ್ರರ ಹತ್ಯೆಯಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದರಿಂದ ಆತ ಉಗ್ರರ ಹಿಟ್ ಲಿಸ್ಟ್ ನಲ್ಲಿದ್ದ. ಕಳೆದ ವರ್ಷ ಆತ ರಜೆ ಮೇಲೆ ಬಂದಿದ್ದಾಗ ಫೇಸ್ ಬುಕ್ ನಲ್ಲಿ ಉಗ್ರರಿಂದ ಬೆದರಿಕೆ ಬಂದಿತ್ತು. ಆತ ಹಿಂದಿರುಗುವಾಗ ನಾನೂ ಬಾಡಿಗೆ ಟ್ಯಾಕ್ಸಿಯಲ್ಲಿ ಇನ್ನೊಬ್ಬ ಮಗನ ಜತೆ ಆತನನ್ನು ಬಿಟ್ಟು ಬಂದಿದ್ದೆ. ಸಾದಾ ಉಡುಪಿನಲ್ಲಿ ಶೋಪಿಯನ್ ಗೆ ತೆರಳಲು ಬಿಡಬೇಡಿ ಎಂದು ಆತನ ಕಂಪೆನಿ ಕಮಾಂಡರ್ ಗೆ ವಿನಂತಿಸಿದ್ದೆ'' ಎಂದು ಆತನ ತಂದೆ ಹೇಳುತ್ತಾರೆ.
"ಗುರುವಾರ ಔರಂಗಝೇಬ್ ತನ್ನ ಕಿರಿಯ ಸೋದರ ಮೊಹಮ್ಮದ್ ಶಬೀರ್ ಗೆ ಬೆಳಿಗ್ಗೆ ಸುಮಾರು 9.30ರ ಹೊತ್ತಿಗೆ ಕರೆ ಮಾಡಿ ಆತನಿಗೆ ಶೋಪಿಯನ್ ಗೆ ಬರ ಹೇಳಿದ್ದನಲ್ಲದೆ ಆತ ಅಲ್ಲಿಂದ ಇನ್ವರ್ಟರ್ ಒಂದನ್ನು ಖರೀದಿಸುವುದಾಗಿಯೂ ಹೇಳಿದ್ದ. ಐದು ನಿಮಿಷದ ನಂತರ ತಾಯಿಗೆ ಕರೆ ಮಾಡಿ ಮನೆಗೆ ಬರುವುದಾಗಿ ತಿಳಿಸಿದ್ದ. ನಂತರ ಝಫರ್ ಇಕ್ಬಾಲ್ ಗೆ ಕರೆ ಮಾಡಿ ಈದ್ ಗೆ ಕೆಲ ಖರೀದಿಗಳನ್ನು ಮಾಡುವುದಾಗಿ ಹೇಳಿದ್ದ. ಮುಂದೆ ಮಾತನಾಡುವಷ್ಟರ ಹೊತ್ತಿಗೆ ಆತ ಚಾಲಕನಿಗೆ "ವಾಹನ ನಿಲ್ಲಿಸಿ'' ಎಂದು ಹೇಳುತ್ತಿರುವುದು ಕೇಳಿಸಿತ್ತು. ನಂತರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು,'' ಎಂದು ಹನೀಫ್ ವಿವರಿಸುತ್ತಾರೆ.
ಸರಕಾರ ಈಗಲಾದರೂ ಕ್ರಮ ಕೈಗೊಳ್ಳಬೇಕು. ಅದು ದೃಢತೆ ತೋರಿಸಿದರೂ ಪರಿಸ್ಥಿತಿಯ ಲಾಭ ಪಡೆಯುವ ರಾಜಕಾರಣಿಗಳ ಒತ್ತಡದಿಂದಾಗಿ ಹಿಂದೆ ಸರಿಯುತ್ತದೆ. ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸುವ ಧೈರ್ಯ ತೋರದು, ಆದರೆ ಈ ಪರೋಕ್ಷ ಯುದ್ಧ ವಿನಾಶದ ತನಕ ಮುಂದುವರಿಯುವುದು. ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ತನಕ ಭಾರತ ಕ್ರಮಕೈಗೊಳ್ಳುವುದನ್ನು ನಿಲ್ಲಿಸಬಾರದು,'' ಎಂದು ಹನೀಫ್ ಹೇಳುತ್ತಾರೆ.
ಪೊಲೀಸ್ ಮೂಲಗಳ ಪ್ರಕಾರ ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿ ಪುಲ್ವಾಮಾದ ಶಾದಿಮಾರ್ಗ್ ಎಂಬಲ್ಲಿ ಶೋಪಿಯನ್ ಗೆ ಹೊರಟಿದ್ದ ನಾಗರಿಕರೊಬ್ಬರ ಕಾರು ನಿಲ್ಲಿಸಿ ಔರಂಗಝೇಬ್ ಗೆ ಅಲ್ಲಿ ತನಕ ಡ್ರಾಪ್ ನೀಡುವಂತೆ ಹೇಳಿದ್ದರು. ಆದರೆ ಕಾರು ಕಾಲಂಪೊರ ಗ್ರಾಮ ತಲುಪುತ್ತಿದ್ದಂತೆ ಉಗ್ರರು ಅದನ್ನು ತಡೆದಿದ್ದರು. ಪೊಲೀಸರು ನಂತರ ಗುಂಡಿನಿಂದ ಛಿದ್ರಗೊಂಡಿದ್ದ ಔರಂಗ್ಜೇಬ್ ಮೃತದೇಹವನ್ನು ಫುಲ್ವಾಮದ ಗೊಸ್ಸು ಗ್ರಾಮದಲ್ಲಿ ಪತ್ತೆ ಹಚ್ಚಿದ್ದರು.
ಔರಂಗಝೇಬ್ ಶಾಲೆಯಲ್ಲಿರುವಾಗ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದುದನ್ನು ಹಾಗೂ ದೊಡ್ಡ ಕಲ್ಲುಗಳನ್ನು ಎತ್ತಿ ತನ್ನ ಸಾಹಸ ಪ್ರದರ್ಶಿಸುತ್ತಿದ್ದುನ್ನು ಆತನ ಶಾಲಾ ಶಿಕ್ಷಕ ಮುಹಮ್ಮದ್ ಇಲ್ಯಾಸ್ ಸ್ಮರಿಸುತ್ತಾರೆ.