ಬಿಜೆಪಿ, ಆರೆಸ್ಸೆಸ್ ಪ್ರಮುಖರಿಗೆ ಔತಣಕೂಟ ಏರ್ಪಡಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ, ಜೂ. 16: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬಿಜೆಪಿ ಮತ್ತು ಆರೆಸ್ಸೆಸ್ಸಿನ ಪ್ರಮುಖ ನಾಯಕರಿಗೆ ತಮ್ಮ ಅಧಿಕೃತ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು.
ಔತಣಕೂಟದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಂಘದ ಕಾರ್ಯಕಾರಿ ಮುಖ್ಯಸ್ಥ ಸುರೇಶ್ ಭಯ್ಯಿಜಿ ಜೋಷಿ ಸಹಿತ ಹಲವು ನಾಯಕರು ಭಾಗವಹಿಸಿದ್ದರು. ಹರ್ಯಾಣದ ಸೂರಜಕುಂಡ್ ನಲ್ಲಿ ನಡೆಯುತ್ತಿರುವ ಮೂರು ದಿನಗಳ ಬಿಜೆಪಿ, ಆರೆಸ್ಸೆಸ್ ನಾಯಕರ ಸಭೆಯ ಹಿನ್ನೆಲೆಯಲ್ಲಿ ಈ ಔತಣಕೂಟ ನಡೆಸಲಾಗಿದೆ. ಪಕ್ಷದ ಹಾಗೂ ಸಂಘದ ಮುಂದಿನ ಕಾರ್ಯತಂತ್ರ ಹಾಗೂ ವಿವಿಧ ಕೇಸರಿ ಸಂಘಟನೆಗಳ ಸಮನ್ವಯತೆ ವಿಚಾರ ಸಭೆ ಚರ್ಚಿಸಲಿದೆ. ಈ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳು ಹಾಗೂ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.
ಸೂರಜಕುಂಡ್ ಸಭೆ ಗುರುವಾರ ಆರಂಭಗೊಂಡು ಇಂದು ಮುಕ್ತಾಯಗೊಳ್ಳಲಿದ್ದು ಬಿಜೆಪಿಯ ಎಲ್ಲಾ ಸಂಘಟನಾ ಕಾರ್ಯದರ್ಶಿಗಳು, ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಜೋಷಿ ಹಾಗೂ ಇಬ್ಬರು ಜಂಟಿ ಕಾರ್ಯದರ್ಶಿಗಳಾದ ದತ್ತಾತ್ರೇಯ ಹೊಸಬಾಳೆ ಹಾಗೂ ಕೃಷ್ಣ ಗೋಪಾಲ್ ಅದರಲ್ಲಿ ಭಾಗವಹಿಸುತ್ತಿದ್ದಾರೆ.