ವದಂತಿಗೆ ಬಲಿಯಾದ ಭಿಕ್ಷುಕಿ
ಅಹ್ಮದಾಬಾದ್, ಜೂ.26: ಮಕ್ಕಳ ಕಳ್ಳಿ ಎಂಬ ಶಂಕೆಯಲ್ಲಿ ಸುಮಾರು 1,000 ಮಂದಿ ಭಿಕ್ಷುಕಿಯನ್ನು ಥಳಿಸಿ ಹತ್ಯೆಗೈದ ಘಟನೆ ಗುಜರಾತ್ನ ವದಜ್ ಪ್ರದೇಶದಲ್ಲಿ ನಡೆದಿದೆ.
ಸರ್ದಾರ್ನಗರ ಪ್ರದೇಶದ ನಿವಾಸಿಯಾಗಿರುವ ಶಾಂತಾದೇವಿ ನಾಥ್ ಎಂಬ ಮಹಿಳೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಇತರ ಮೂವರು ಮಹಿಳೆಯರೊಡನೆ ವದಜ್ ಪ್ರದೇಶಕ್ಕೆ ಭಿಕ್ಷೆ ಬೇಡಲು ತೆರಳಿದಾಗ ಇವರನ್ನು ಮಕ್ಕಳ ಕಳ್ಳರೆಂದು ಶಂಕಿಸಿದ ಸ್ಥಳೀಯರು ದೊಣ್ಣೆಯಿಂದ ಇವರನ್ನು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆ ವೇಳೆಗೆ ಭಿಕ್ಷೆ ಬೇಡುತ್ತಿದ್ದ ಮೂವರು ಮಹಿಳೆಯರನ್ನು ಗುಂಪೊಂದು ಪ್ರಶ್ನಿಸಿದೆ.
ಈ ಪ್ರದೇಶದಲ್ಲಿ ಮಕ್ಕಳ ಅಪಹರಣಾಕಾರರು ಇದ್ದಾರೆಂಬ ಶಂಕೆಯಲ್ಲಿ ಭಿಕ್ಷುಕರನ್ನು ಗದರಿದಾಗ ಅವರು ರಿಕ್ಷಾದಲ್ಲಿ ಪರಾರಿಯಾಗಲು ಯತ್ನಿಸಿದರು. ಆಗ ಇನ್ನಷ್ಟು ಜನ ಸೇರಿ ಅವರನ್ನು ದೊಣ್ಣೆಯಿಂದ ಥಳಿಸಿದೆ. ತೀವ್ರವಾಗಿ ಗಾಯಗೊಂಡ ಶಾಂತಾದೇವಿ ನಾಥ್ ಮೃತಳಾಗಿದ್ದಾಳೆ. ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.