ಬಿಜೆಪಿ ಸಂಸದನ ಪುತ್ರನಿಂದ ಪತ್ರಕರ್ತನ ಮೇಲೆ ಹಲ್ಲೆ

Update: 2018-06-27 17:25 GMT

ರಾಯಪುರ, ಜೂ.27: ಸರಕಾರಿ ಯೋಜನೆಯೊಂದರಲ್ಲಿ ನಡೆದಿದ್ದ ಅಕ್ರಮಗಳನ್ನು ವರದಿ ಮಾಡಿದ್ದ ಪತ್ರಕರ್ತ ಹಾಗೂ ಅವರ ಹೆತ್ತವರಿಗೆ ಸಂಸದನ ಪುತ್ರ ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಹಲ್ಲೆಗೈದ ಘಟನೆ ಛತ್ತೀಸಗಡದ ಸರ್ಗುಜಾ ಜಿಲ್ಲೆಯ ಜಮಗಲಾ ಗ್ರಾಮದಲ್ಲಿ ನಡೆದಿದೆ.

ಪತ್ರಕರ್ತ ರಾಜೇಶ್ ಪ್ರಸಾದ್ ಗುಪ್ತಾರ ದೂರಿನ ಮೇರೆಗೆ ಸರ್ಗುಜಾದ ಬಿಜೆಪಿ ಸಂಸದ ಕಮಲಭಾನ್ ಸಿಂಗ್ ಮಾರಾವಿ ಅವರ ಪುತ್ರ ದೇವೇಂದ್ರ ಸಿಂಗ್ ಮಾರಾವಿ ಮತ್ತು ಆತನ ಸ್ನೇಹಿತ ಶಿವವ್ರತ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಗುಪ್ತಾ ಮತ್ತು ದೇವೇಂದ್ರ ಜಮಗಲಾ ಗ್ರಾಮದ ನಿವಾಸಿಗಳಾಗಿದ್ದಾರೆ. ರಾಯಪುರದಿಂದ ಪ್ರಕಟಗೊಳ್ಳುತ್ತಿರುವ ‘ಹರಿಭೂಮಿ’ವೃತ್ತಪತ್ರಿಕೆಗಾಗಿ ಕೆಲಸ ಮಾಡುತ್ತಿರುವ ಗುಪ್ತಾ ಗ್ರಾಮದಲ್ಲಿ ‘ನಲ್-ಜಲ್’ ಯೋಜನೆಯಲ್ಲಿನ ಅಕ್ರಮಗಳನ್ನು ವರದಿ ಮಾಡಿದ್ದರು. ಮಂಗಳವಾರ ಗುಪ್ತಾರ ಮನೆಗೆ ತೆರಳಿದ್ದ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮಧ್ಯ ಪ್ರವೇಶಿಸಿದ್ದ ಅವರ ಹೆತ್ತವರನ್ನೂ ಥಳಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News