ವ್ಯಾಪಾರಿಗಳು, ಸಾಮಾನ್ಯ ಜನರಿಗೆ ಜಿಎಸ್ಟಿ ಕೆಟ್ಟ ಶಬ್ಧ: ಚಿದಂಬರಂ
ಹೊಸದಿಲ್ಲಿ, ಜು. 1: ಜಿಎಸ್ಟಿ ಪರಿಚಯಿಸಿದ ಮೊದಲ ವರ್ಷಾಚರಣೆ ದಿನವಾದ ರವಿವಾರ ಕಾಂಗ್ರೆಸ್ ಜಿಎಸ್ಟಿ ಕುರಿತಂತೆ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಜಿಎಸ್ಟಿ ಸಾಮಾನ್ಯ ಜನರ ತೆರಿಗೆ ಹೊರೆ ಹೆಚ್ಚಿಸಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
‘‘ಜಿಎಸ್ಟಿ ಅನುಷ್ಠಾನ, ವಿನ್ಯಾಸ, ಚೌಕಟ್ಟು ದೋಷಪೂರಿತ. ಉದ್ಯಮಿಗಳು, ವ್ಯಾಪಾರಿಗಳು, ರಫ್ತುದಾರರು ಹಾಗೂ ಸಾಮಾನ್ಯ ನಾಗರಿಕರಿಗೆ ಜಿಎಸ್ಟಿ ಕೆಟ್ಟ ಶಬ್ಧ’’ ಎಂದು ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿದಂಬರಂ ಹೇಳಿದ್ದಾರೆ.
ಜಿಎಸ್ಟಿ ‘ಗರಿಷ್ಠ ಭೀತಿಯ ತೆರಿಗೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ವ್ಯಾಖ್ಯಾನಿಸಿದ ಒಂದು ದಿನದ ಬಳಿಕ ಚಿದಂಬರಂ ಅವರ ಈ ಹೇಳಿಕೆ ಹೊರಬಿದ್ದಿದೆ. ‘‘ಜಿಎಸ್ಟಿ ಒಂದು ವರ್ಷ ಪೂರ್ಣಗೊಳಿಸಿದೆ. ಇದು ಲಕ್ಷಾಂತರ ವ್ಯಾಪಾರಿಗಳು, ಅಂಗಡಿ ಮಾಲಿಕರು ಹಾಗೂ ಉದ್ಯಮಿಗಳಿಗೆ ಗರಿಷ್ಠ ಭೀತಿಯ ತೆರಿಗೆಯಾಗಿದೆ’’ ಎಂದು ಸುರ್ಜೇವಾಲ ಶನಿವಾರ ಸಂಜೆ ಟ್ವೀಟ್ ಮಾಡಿದ್ದರು.