ನೀರಜ್ ಪಾಂಡೆಯ ಹೊಸ ಚಿತ್ರದಲ್ಲಿ ಈ ಖ್ಯಾತ ನಟ ಆಗಲಿದ್ದಾರೆ ಚಾಣಕ್ಯ

Update: 2018-07-13 16:25 GMT

ಅಜಯ್ ದೇವಗನ್ ಕಳೆದ ಎರಡು ದಶಕಗಳಿಂದ ತೆರೆ ಮೇಲೆ ವಿಭಿನ್ನ ಪಾತ್ರಗಳ ಮೂಲಕ ನಮ್ಮನ್ನು ರಂಜಿಸುತ್ತಿದ್ದಾರೆ. ಹದಿಹರೆಯದ ಪ್ರೇಮಿಯಿಂದ ಹಿಡಿದು ಆ್ಯಕ್ಷನ್ ಹೀರೊತನಕ ಯಾವ ಪಾತ್ರವೇ ಆಗಲಿ, ಪಾತ್ರದ ಆಳಕ್ಕಿಳಿದು ಪರಿಪೂರ್ಣ ಪ್ರದರ್ಶನ ನೀಡುವುದು ಅವರ ವೈಶಿಷ್ಠ್ಯ. 'ರೈಡ್' ಚಿತ್ರದಲ್ಲಿ ಆದಾಯ ತೆರಿಗೆ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ ಬಳಿಕ 'ಸ್ಪೆಷಲ್ 26', 'ವೆಡ್‍ನಸ್‍ಡೇ' ಮತ್ತು 'ಬೇಬಿ'ಯಂಥ ಚಿತ್ರಗಳಲ್ಲಿ ಗಮನ ಸೆಳೆದಿದ್ದಾರೆ.

ವಿಷ್ಣುಗುಪ್ತ ಅಥವಾ ಕೌಟಿಲ್ಯ ಎಂದೂ ಕರೆಯಲ್ಪಡುವ ಚಾಣಕ್ಯನನ್ನು ಭಾರತದ ಅಪೂರ್ವ ಶಿಕ್ಷಕ, ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ, ನ್ಯಾಯತಜ್ಞ ಹಾಗೂ ಚಕ್ರವರ್ತಿಯ ಸಲಹೆಗಾರ ಎಂದೂ ಗುರುತಿಸಲಾಗುತ್ತದೆ. ಚಂದ್ರಗುಪ್ತ ಮೌರ್ಯನ ಯಶಸ್ಸಿನಲ್ಲಿ ಚಾಣಕ್ಯನ ಕೊಡುಗೆ ಅಪಾರ. ಮೌರ್ಯಸಾಮ್ರಾಜ್ಯ ವಿಸ್ತರಣೆಗೆ ಚಾಣಕ್ಯನ ಸಲಹೆಗಳೇ ಮೂಲ ಕಾರಣ ಎನ್ನಲಾಗುತ್ತಿದೆ. ಪ್ರಾಚೀನ ಭಾರತದ ರಾಜನೀತಿ ಶಾಸ್ತ್ರದ ಪಿತಾಮಹ ಎಂದೂ ಚಾಣಕ್ಯನನ್ನು ಗುರುತಿಸಲಾಗುತ್ತದೆ.

ಇದೀಗ ಚಾಣಕ್ಯನ ಜೀವನ- ಬೋಧನೆಗಳ ಕುರಿತಾದ ಚಿತ್ರ ಬೆಳ್ಳಿತೆರೆಯ ಮೇಲೆ ಬರಲಿದೆ. ಚಿತ್ರದ ಬಗ್ಗೆ ಮಾತನಾಡಿದ ದೇವಗನ್, "ಚಾಣಕ್ಯನ ಪಾತ್ರ ನಿರ್ವಹಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ನೀರಜ್ ಪಾಂಡೆಯವರ ಕೃತಿಯನ್ನು ತೀರಾ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇನೆ. ಈ ಕಥೆಯನ್ನು ನೀರಜ್ ಹೆಚ್ಚು ಸ್ಪಷ್ಟ ಹಾಗೂ ಪ್ರೀತಿಯಿಂದ ಬಣ್ಣಿಸುತ್ತಾರೆ. ಅದನ್ನು ಹಾಗೆಯೇ ಹೇಳಬೇಕು ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ" ಎಂದು ಹೇಳಿದರು.

ಚಿತ್ರದ ನಿರ್ದೇಶಕ ನೀರಜ್ ಪಾಂಡೆ ಈ ಬಗ್ಗೆ ಕೇಳಿಕೆ ನೀಡಿ, "ಚಾಣಕ್ಯನ ಕುರಿತ ಚಿತ್ರ ನಿರ್ಮಿಸುವಲ್ಲಿ ಶ್ರಮ ವಹಿಸಿದ್ದೇನೆ. ಇದು ಅದ್ಭುತ ಚಿತ್ರವಾಗಲಿದ್ದು, ಅಜಯ್ ಪಾತ್ರವನ್ನು ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾರೆ.

ರಿಲಯನ್ಸ್ ಎಂಟರ್‍ಟೈನ್‍ಮೆಂಟ್ ಈ ಚಿತ್ರ ನಿರ್ಮಿಸುತ್ತಿದೆ. ಇತರ ಪಾತ್ರಗಳ ಹೆಸರು ಬಹಿರಂಗವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News