ವಾರಣಾಸಿಯ ಈ ವಿಶಿಷ್ಟ ಮಂದಿರದಲ್ಲಿದೆ ಅವಿಭಜಿತ ಭಾರತದ ಅಮೃತಶಿಲೆಯ ನಕ್ಷೆ

Update: 2018-07-31 14:46 GMT

ವಾರಣಾಸಿ(ಉ.ಪ್ರ),ಜು.31: ವಿಶ್ವಾದ್ಯಂತ ಯಾತ್ರಿಕರನ್ನು ಸೆಳೆಯುತ್ತಿರುವ ಪ್ರಾಚೀನ ನಗರಿ ವಾರಣಾಸಿಯಲ್ಲಿ ವಿಶಿಷ್ಟವಾದ ‘ಭಾರತ ಮಾತಾ ಮಂದಿರ’ ವಿದ್ದು,ಅಲ್ಲಿರುವ ಅವಿಭಜಿತ ಭಾರತದ ಅಮೃತಶಿಲೆಯ ನಕ್ಷೆ ಆಕರ್ಷಣೆಯ ಕೇಂದ್ರವಾಗಿದೆ.

ಕೆಲವೊಮ್ಮೆ ಯಾತ್ರಿಕರು ಈ ಮಂದಿರದ ಭೇಟಿಯಿಂದ ವಂಚಿತರಾಗುತ್ತಾರಾದರೂ ಇದು ನಗರಕ್ಕೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುವ ವಿದೇಶಿ ಪ್ರವಾಸಿಗಳ ನೆಚ್ಚಿನ ತಾಣವಾಗಿದೆ.

ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ಆವರಣದಲ್ಲಿರುವ ಈ ಮಂದಿರವನ್ನು 1918 ಮತ್ತು 1924ರ ನಡುವೆ ಬಾಬು ಶಿವಪ್ರಸಾದ ಗುಪ್ತಾ ಅವರು ನಿರ್ಮಿಸಿದ್ದು, 11936,ಅ.25ರಂದು ಮಹಾತ್ಮಾ ಗಾಂಧಿಯವರು ಉದ್ಘಾಟಿಸಿದ್ದರು.

ಕಟ್ಟಡದ ಮಧ್ಯಭಾಗದಲ್ಲಿ ಅಮೃತಶಿಲೆಯ ಮೇಲಿರುವ ಅವಿಭಜಿತ ಭಾರತದ ನಕ್ಷೆಯು ಅಫಘಾನಿಸ್ತಾನ,ಬಲೂಚಿಸ್ತಾನ,ಪಾಕಿಸ್ತಾನ,ಬಾಂಗ್ಲಾದೇಶ,ಬರ್ಮಾ (ಈಗಿನ ಮ್ಯಾನ್ಮಾರ್) ಮತ್ತು ಸಿಲೋನ್(ಈಗಿನ ಶ್ರೀಲಂಕಾ)ಗಳನ್ನು ಒಳಗೊಂಡಿದೆ.

450 ಪರ್ವತಶ್ರೇಣಿಗಳು ಮತ್ತು ಶಿಖರಗಳು,ಬಯಲು ಪ್ರದೇಶಗಳು,ಜಲ ಮೂಲಗಳು, ನದಿಗಳು,ಮಹಾಸಾಗರಗಳು ಮತ್ತು ಪ್ರಸ್ತಭೂಮಿಗಳು ಮತ್ತು ಇತರ ಭೌಗೋಳಿಕ ಗುರುತುಗಳು,ಅವುಗಳ ಅಳತೆ ಮತ್ತು ಆಳಗಳನ್ನು ವಿವರವಾಗಿ ದಾಖಲಿಸಿರುವುದು ಈ ನಕ್ಷೆಯಲ್ಲಿನ ಆಸಕ್ತಿಕರ ಅಂಶವಾಗಿದೆ.

ಗಣರಾಜ್ಯ ದಿನ ಮತ್ತು ಸ್ವಾತಂತ್ರ್ಯ ದಿನಗಳಂದು ನಕ್ಷೆಯಲ್ಲಿನ ಜಲಮೂಲಗಳನ್ನು ನೀರಿನಿಂದ ತುಂಬಲಾಗುತ್ತದೆ ಮತ್ತು ಭೂಪ್ರದೇಶಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ ಎಂದು ಮಂದಿರದ ಮೇಲ್ವಿಚಾರಕ ರಾಜು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಮಂದಿರವು ದುಗಾಪ್ರಸಾದ ಖತ್ರಿಯವರ ಮಾರ್ಗದರ್ಶನದಲ್ಲಿ 55 ಕಾರ್ಮಿಕರ ಶ್ರಮದಿಂದ ನಿರ್ಮಾಣಗೊಂಡಿದ್ದು,ಕಟ್ಟಡದ ಒಂದು ಮೂಲೆಯಲ್ಲಿರುವ ಫಲಕದಲ್ಲಿ ಅವರೆಲ್ಲರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ನಕ್ಷೆಯಲ್ಲಿನ ಒಂದು ಇಂಚು 6.40 ಮೈಲು ಭೂಪ್ರದೇಶವನ್ನು ಸೂಚಿಸುತ್ತದೆ ಮತ್ತು ತಳಅಂತಸ್ತಿನಲ್ಲಿ ಅಳವಡಿಸಲಾಗಿರುವ ಕಿಟಕಿಯ ಮೂಲಕ ವಿವಿಧ ಶಿಖರಗಳ ಎತ್ತರಗಳ ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News