ಆರು ವರ್ಷದ ಮಗಳನ್ನು ಕೊಂದ ದಂಪತಿ

Update: 2018-08-07 14:47 GMT

ಲಕ್ನೊ, ಆ.7: ಅಪೌಷ್ಟಿಕತೆಯಿಂದ ಬಳಲುತ್ತಿರುವ ಪುತ್ರಿಯನ್ನು ಕೊಂದರೆ ಮುಂದೆ ಹುಟ್ಟುವ ಮಗು ಆರೋಗ್ಯವಂತವಾಗಿರುತ್ತದೆ ಎಂದು ಮಂತ್ರವಾದಿಯೊಬ್ಬ ಹೇಳಿದ ಮಾತಿನಂತೆ ದಂಪತಿ ತಮ್ಮ ಮಗಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ.

ಮೊರಾದಾಬಾದ್ ಜಿಲ್ಲೆಯ ಚೌಧರ್‌ಪುರ ಗ್ರಾಮದ ನಿವಾಸಿಯಾಗಿರುವ ಈ ದಂಪತಿಯ ಪುತ್ರಿ ಆರು ವರ್ಷದ ತಾರಾ ಬಾಲಗ್ರಹ(ಮೆದುಮೂಳೆ ರೋಗ)ದಿಂದ ಬಳಲುತ್ತಿದ್ದು ನಿತ್ರಾಣವಾಗಿದ್ದಳು. ಮಗಳು ದಿನೇ ದಿನೇ ಕೃಶಕಾಯಳಾಗುತ್ತಿದ್ದರಿಂದ ಆತಂಕಗೊಂಡ ದಂಪತಿ ಮಂತ್ರವಾದಿಯೊಬ್ಬನ ಬಳಿ ಹೋಗಿದ್ದಾರೆ. ಆಕೆಯನ್ನು ಕೊಂದರೆ ಮುಂದೆ ಹುಟ್ಟುವ ಮಗು ಆರೋಗ್ಯಯುತವಾಗಿರುತ್ತದೆ ಎಂದು ಆತ ಸಲಹೆ ನೀಡಿದ್ದಾನೆ. ಇದರಂತೆ ಮಗುವನ್ನು ಕೊಂದು ಬಳಿಕ ಮನೆಯಲ್ಲಿ ಹೂತಿಡಲಾಗಿದೆ. ಈ ಬಗ್ಗೆ ನೆರೆಮನೆಯವರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯೊಳಗೆ ಅಗೆದು ನೋಡಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಐದು ದಿನ ನೀರನ್ನೂ ಕೊಡದೆ ಉಪವಾಸ ಕೆಡವಿದ ಕಾರಣ ಉಸಿರುಗಟ್ಟಿ ಮಗು ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ. ದಂಪತಿ ಪರಾರಿಯಾಗಿದ್ದು ಮನೆಯಲ್ಲಿದ್ದ ಅಜ್ಜಿ ಘಟನೆಯ ಬಗ್ಗೆ ಪೊಲೀಸರಿಗೆ ವಿವರಿಸಿದ್ದಾಳೆ. ದಂಪತಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News