ಕರುಣಾನಿಧಿಗೆ ಭಾರತರತ್ನ ನೀಡಲು ಡಿಎಂಕೆ ಒತ್ತಾಯ
ಹೊಸದಿಲ್ಲಿ, ಆ.10: ಡಿಎಂಕೆಯ ಮುಖಂಡ ದಿ ಕರುಣಾನಿಧಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಭಾರತರತ್ನ ಪುರಸ್ಕಾರವನ್ನು ನೀಡಬೇಕೆಂದು ಪಕ್ಷ ಒತ್ತಾಯಿಸಿದೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿ 19 ವರ್ಷ ಕಾರ್ಯನಿರ್ವಹಿಸಿದ್ದ ಕರುಣಾನಿಧಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪುರಸ್ಕಾರವನ್ನು ನೀಡಬೇಕು. ದೇಶದ ಅತ್ಯುನ್ನತ ಮುಖಂಡ ಹಾಗೂ ಪ್ರಭಾವೀ ದ್ರಾವಿಡ ಮುಖಂಡರಾಗಿರುವ ಕರುಣಾನಿಧಿಯವರಿಗೆ ಈ ಪುರಸ್ಕಾರ ಸಲ್ಲಬೇಕಿದೆ ಎಂದು ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಡಿಎಂಕೆ ಸದಸ್ಯ ತಿರುಚಿ ಶಿವ ಒತ್ತಾಯಿಸಿದರು.
ಓರ್ವ ಅತ್ಯುತ್ತಮ ವಾಗ್ಮಿ, ಲೇಖ, ಕಾದಂಬರಿಕಾರ, ಸಾಹಿತಿ, ತತ್ವಜ್ಞಾನಿ, ಕಲಾವಿದ, ನಟ, ಚಿತ್ರಕಥೆ, ಸಂಭಾಷಣೆ ಬರಹಗಾರ, ಲೋಕ ಹಿತೈಷಿಯಾಗಿರುವ ಕರುಣಾನಿಧಿಯವರ ಕೊಡುಗೆಯನ್ನು ಪದಗಳಲ್ಲಿ ಬಣ್ಣಿಸಲು ಆಗದು. ತನ್ನ ಕೊನೆಯುಸಿರು ಇರುವವರೆಗೂ ಸಾಮಾಜಿಕ ನ್ಯಾಯ, ರಾಜ್ಯದ ಸ್ವಾಯತ್ತತೆ ಹಾಗೂ ಆತ್ಮಗೌರವಕ್ಕಾಗಿ ಅವರು ಹೋರಾಡಿದವರು ಎಂದು ತಿರುಚಿ ಶಿವ ಬಣ್ಣಿಸಿದ್ದಾರೆ.