ಸ್ವಾತಂತ್ರ್ಯ ಹೋರಾಟದಲ್ಲಿ ಅಮರರಾದ ಗೌಡರು

Update: 2018-08-15 06:34 GMT

ಮಡಿಕೇರಿ: 1887ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ ಸಂಗ್ರಾಮ ಎಂದು ಗುರುತಿಸಲಾಗಿದೆ. ಆದರೆ, ಅದಕ್ಕೂ ಮೊದಲೇ ಕೊಡಗು, ದಕ್ಷಿಣ ಕನ್ನಡ ಭಾಗದಲ್ಲಿ ಬ್ರಿಟಿಷರ ವಿರುದ್ಧ ಭಾರೀ ಹೋರಾಟ ನಡೆದಿರುವ ಬಗ್ಗೆ ಇತಿಹಾಸವಿದೆ. ಅಂದು ಹೋರಾಟ ಮಾಡಿದವರಲ್ಲಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು ಪ್ರಮುಖರೆನಿಸಿಕೊಳ್ಳುತ್ತಾರೆ. ಗುಡ್ಡೆಮನೆ ಅಪ್ಪಯ್ಯ ಗೌಡರ ಹೋರಾಟ ಬ್ರಿಟಿಷರನ್ನು ಎಷ್ಟು ಬೆಚ್ಚಿ ಬೀಳಿಸಿತ್ತೆಂದರೆ ಮಡಿಕೇರಿಯ ಕೋಟೆ ಆವರಣದಲ್ಲಿ ಅಪ್ಪಯ್ಯ ಗೌಡರನ್ನು ಗಲ್ಲಿಗೇರಿಸಿದ ಘಟನೆಯೂ ನಡೆಯಿತು.

ಸುಮಾರು 1700ನೇ ಇಸವಿಯಲ್ಲಿ ಇಕ್ಕೇರಿ ರಾಜ ಸೋಮಶೇಖರ ಸುಳ್ಯ ಭಾಗವನ್ನು ಕೊಡಗಿನ ದೊಡ್ಡವೀರ ರಾಜೇಂದ್ರನಿಗೆ ಬಹುಮಾನ ವಾಗಿ ನೀಡಿದ್ದ. ದೊಡ್ಡವೀರ ರಾಜೇಂದ್ರನ ಕಾಲವಾದ ಮೇಲೆ ಚಿಕ್ಕವೀರ ರಾಜೇಂದ್ರ ನಿಗೆ ಅಧಿಕಾರ ದೊರೆಯುತ್ತದೆ. 1834 ಎಪ್ರಿಲ್ 10ರಲ್ಲಿ ಬ್ರಿಟಿಷರು ಚಿಕ್ಕವೀರ ರಾಜೇಂದ್ರನನ್ನು ವಂಚಿಸಿ ಕೊಡಗನ್ನು ತಮ್ಮ ವಶಕ್ಕೆ ಪಡೆಯುತ್ತಾರೆ. ಆಡಳಿತಕ್ಕೆ ಅನುಕೂಲ ಆಗಲಿ ಎಂದು ಸುಳ್ಯ ಮತ್ತು ಪುತ್ತೂರನ್ನು ಮಂಗಳೂರು ವಿಭಾಗಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಈ ಸಂದರ್ಭ ಬ್ರಿಟಿಷರ ವಿರುದ್ಧ ತುಂಬಾ ಹೋರಾಟಗಳು ನಡೆಯುತ್ತವೆ. ಈ ಹೋರಾಟದಲ್ಲಿ ಮುಖ್ಯವಾಗಿ ಕೊಡಗು, ಕೆನರಾ ಬಂಡಾಯ ಅಥವಾ ಅಮರಸುಳ್ಯ ದಂಗೆ ಎಂದು ಕರೆಯಲ್ಪಡುವ ಹೋರಾಟವೇ ಪ್ರಮುಖವಾಗಿದೆ.

ಪೆರಾಜೆ, ಚೆಂಬು, ಚೊಕ್ಕಾಡಿ, ಬಳ್ಪದ ಗೌಡ ಮುಖಂಡರು ಹಾಗೂ ಕೊಡಗಿನ ಜನರನ್ನೆಲ್ಲಾ ಕೆದಂಬಾಡಿ ರಾಮಯ್ಯ ಗೌಡ ಅವರು ಒಂದು ಕಡೆ ಸೇರಿಸುವ ಪ್ರಯತ್ನ ಮಾಡುತ್ತಾರೆ. ಮಲೆ ಕುಡಿಯರು, ಹೆಗ್ಡೆ ಸಮಾಜ, ಪೆರಾಜೆಯ ವೀರಣ್ಣ ಬಂಟ, ಸುಬ್ರಾಯ ಹೆಗ್ಡೆ ಮತ್ತು ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡರ ನೇತೃತ್ವದಲ್ಲಿ ಯೋಧರ ತಂಡಗಳು ರಚನೆಯಾಗುತ್ತವೆ. ಕೂಜುಗೋಡ ದ ಕಟ್ಟೇಮನೆ ಮುಖ್ಯಸ್ಥರು ಸಹಕಾರ ನೀಡು ತ್ತಾರೆ. ಪುತ್ತೂರು ಮತ್ತು ಮಂಗಳೂರನ್ನು ವಶ ಪಡಿಸಿಕೊಳ್ಳುವುದಕ್ಕಾಗಿ ಸುಳ್ಯ ಹಾಗೂ ಕೊಡಗಿ ನಲ್ಲಿ ಏಕಕಾಲದಲ್ಲಿ ಹೋರಾಟ ನಡೆಸುವುದೇ ಈ ಗುಂಪಿನ ಉದ್ದೇಶವಾಗಿತ್ತಲ್ಲದೆ, ರಹಸ್ಯವಾಗಿಯೇ ತಂತ್ರಗಾರಿಕೆಯನ್ನು ರೂಪಿಸಲಾಯಿತು. ಕೊಡಗಿನ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ನೇತೃತ್ವದಲ್ಲಿ ಯೋಧರ ಪಡೆ ತೊಡಿಕಾನ ಮೂಲಕ ದಕ್ಷಿಣ ಕನ್ನಡಕ್ಕೆ ಪ್ರವೇಶ ಮಾಡಿತು. ನಂತರ ನಡೆದ ದಾಳಿಯಲ್ಲಿ 1837ರ ಎಪ್ರಿಲ್ 3ಕ್ಕೆ ಪುತ್ತೂರು, 4ಕ್ಕೆ ಪಾಣೆಮಂಗಳೂರನ್ನು ಈ ಹೋರಾಟಗಾರರ ತಂಡ ಬ್ರಿಟಿಷರಿಂದ ವಶಪಡಿಸಿಕೊಂಡಿತು. ಎಪ್ರಿಲ್ 6ರಂದು ಮಂಗಳೂ ರನ್ನು ಕೂಡ ಗೆಲ್ಲಲಾಯಿತು. ಸೋಲುಂಡ ಬ್ರಿಟಿಷರು ಸುಮ್ಮನೆ ಕೂರದೆ ಎಪ್ರಿಲ್ 16ಕ್ಕೆ ಕೇರಳದ ಕಣ್ಣನೂರಿಂದ ಮತ್ತೆ ತಮ್ಮ ಸೈನಿಕರನ್ನು ಕರೆಸಿಯಿಸಿಕೊಂಡು ಯುದ್ಧವನ್ನೇ ನಡೆಸಿದರು. ಆ ಹೋರಾಟದಲ್ಲಿ ಕೊಡಗು, ದಕ್ಷಿಣ ಕನ್ನಡದ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಅನೇಕ ಮಂದಿ ಹೋರಾಟಗಾರರು ಮಡಿದರು. ಈ ಸಂದರ್ಭ ಮೋಸದಿಂದ ಬ್ರಿಟಿಷರು ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬಂಧಿಸಿದರು.

1837 ಅಕ್ಟೋಬರ್ 31 ನಮ್ಮ ಹೋರಾಟಗಾರರಿಗೆ ದು:ಖದ ದಿನವಾಗಿತ್ತು. ಅಂದು ಬೆಳಗ್ಗೆ 10 ಗಂಟೆಗೆ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಬ್ರಿಟಿಷರು ಮಡಿಕೇರಿ ಕೋಟೆ ಆವರಣದಲ್ಲಿ ಸಾರ್ವಜನಿಕ ವಾಗಿ ಗಲ್ಲಿಗೆ ಏರಿಸಿದರು. ಬ್ರಿಟಿಷರು ಅಂದು ಎಷ್ಟು ಕ್ರೂರತ್ವವನ್ನು ಮೆರೆದಿದ್ದರು ಎಂದರೆ ಅಪ್ಪಯ್ಯಗೌಡರನ್ನು ಗಲ್ಲಿಗೇರಿಸುವುದನ್ನು ನೋಡಲೇಬೇಕೆಂದು ಕೊಡಗಿನ ಎಲ್ಲಾ ಪಟೇಲರು, ರೈತರನ್ನು ಬರುವಂತೆ ಆಜ್ಞೆ ಮಾಡಿದರು. ಮುಂದೆ ಯಾರೂ ಬ್ರಿಟಿಷರ ವಿರುದ್ಧ ದಂಗೆ ಏಳದಂತೆ ಭಯ ಮೂಡಿಸಿದರು.

ಇಂಥ ಕೊಡಗಿನ ವೀರ ಹೋರಾಟಗಾರನ ಸಾಹಸ ಮುಂದಿನ ಪೀಳಿಗೆಗೂ ಪ್ರೇರಣೆಯಾಗಬೇಕೆಂದು ಮಡಿಕೇರಿ ನಗರದ ಸುದರ್ಶನ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ತಮ್ಮ ಆಡಳಿತಾವಧಿಯಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಪ್ರತಿವರ್ಷ ಅಕ್ಟೋಬರ್ 31ರಂದು ಈ ಸ್ವಾತಂತ್ರ ಹೋರಾಟಗಾರನಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಪುಷ್ಪನಮನ ಸಲ್ಲಿಸಲಾಗುತ್ತದೆ. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಗಲ್ಲಿಗೇರಿಸಿದ ಕೋಟೆ ಆವರಣದ ಪ್ರದೇಶ ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಮಾತ್ರವಲ್ಲ, ಕೊಡಗಿನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನಾತ್ಮಕ ಸ್ಥಳವೂ ಇದಾಗಿದೆ.

Writer - ಲಕ್ಷ್ಮೀಶ, ಮಡಿಕೇರಿ

contributor

Editor - ಲಕ್ಷ್ಮೀಶ, ಮಡಿಕೇರಿ

contributor

Similar News