ಏಕಕಾಲಕ್ಕೆ ಚುನಾವಣೆಗೆ ಶಿಫಾರಸು! ಯಾಕೆ ಮತ್ತು ಹೇಗೆ?

Update: 2018-08-15 18:44 GMT

ಕು. ಸ. ಮಧುಸೂದನ, ರಂಗೇನಹಳ್ಳಿ

ಅಂತೂ ವಿವಿಧ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಪಂಡಿತರ ವಿರೋಧಗಳ ನಡುವೆಯೂ ದೇಶದಲ್ಲಿ ಲೋಕಸಭೆ ಮತ್ತು ಎಲ್ಲರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ತನ್ನ ನಿಲುವಿಗೆ ಬದ್ಧವಾಗಿರುವ ಭಾಜಪ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತೆ ಕಾಣುತ್ತಿದೆ. ಇದೀಗ ಅದು ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಗಳ ಜೊತೆಗೆ ದೇಶದ ಇತರ ಹನ್ನೊಂದು ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಸುವ ಶಿಫಾರಸೊಂದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸುವ ಬಗ್ಗೆ ಚಿಂತಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಭಾಜಪದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಇನ್ನು ಕೇಂದ್ರ ಸರಕಾರ ಅಧಿಕೃತವಾಗಿ ಈ ಬಗ್ಗೆ ಚುನಾವಣಾ ಅಯೋಗಕ್ಕೆ ಶಿಫಾರಸು ಮಾಡುವ ಸಾಧ್ಯತೆ ಹೆಚ್ಚಿದೆ.

 ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಬೇಕಿರುವ ಮಧ್ಯಪ್ರದೇಶ, ರಾಜಾಸ್ಥಾನ, ಛತ್ತೀಸ್‌ಗಡ, ಮಿಜೋರಾಂ ರಾಜ್ಯಗಳಲ್ಲಿ ಮುಂದಿನ ಮೇ ತಿಂಗಳವರೆಗೂ ರಾಜ್ಯಪಾಲರ ಆಡಳಿತವನ್ನು ಹೇರುವುದು. 2019ರ ಅಂತ್ಯಕ್ಕೆ ಅವಧಿ ಮುಗಿಯಲಿರುವ ತಮ್ಮದೇ ಆಡಳಿತ ಇರುವ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ರಾಜ್ಯಗಳ ಸರಕಾರಗಳನ್ನು ಅವಧಿಗೆ ಮುಂಚಿತವಾಗಿಯೇ ವಿಧಾನಸಭೆ ವಿಸರ್ಜಿಸಿ ಲೋಕಸಭಾ ಚುನಾವಣೆಯ ಜೊತೆಗೆ ಸದರಿ ರಾಜ್ಯಗಳಿಗೂ ಚುನಾವಣೆ ನಡೆಸುವಂತೆ ಆಯೋಗವನ್ನು ಕೋರುವ ನಿರ್ಣಯವನ್ನು ಅಂಗೀಕರಿಸುವಂತೆ ಮಾಡುವುದು. 2020ಕ್ಕೆ ಚುನಾವಣೆಗೆ ಹೋಗಬೇಕಿರುವ ಬಿಹಾರದಲ್ಲಿ ತಮ್ಮ ಮೈತ್ರಿ ಸರಕಾರದ ನೇತೃತ್ವ ವಹಿಸಿರುವ ಸಂಯುಕ್ತ ಜನತಾದಳದ ನಿತೀಶ್ ಕುಮಾರ್ ಅವರ ಮನವೊಲಿಸಿ ಬಿಹಾರದ ವಿಧಾನಸಭೆಯನ್ನೂ ಅವಧಿಗೆ ಮುನ್ನವೇ ವಿಸರ್ಜಿಸಿ ಲೋಕಸಭೆಯ ಜೊತೆಗೇನೆ ಚುನಾವಣೆಗೆ ಹೋಗುವಂತೆ ಮಾಡುವುದು. ಅಲ್ಲಿಗೆ ತಮ್ಮ ಹಿಡಿತದಲ್ಲಿರುವ ಎಂಟು ರಾಜ್ಯಗಳನ್ನು ಚುನಾವಣೆಗೆ ಸಿದ್ಧಪಡಿಸಿದಂತಾಗುತ್ತದೆ. ಇದರ ಜೊತೆಗೆ ಹೇಗಿದ್ದರೂ ಮುಂದಿನ ಮೇ ತಿಂಗಳ ಹೊತ್ತಿಗೆ ಸಹಜವಾಗಿಯೆ ಚುನಾವಣೆ ನಡೆಯಬೇಕಿರುವ ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯಗಳೂ ಸೇರಿಕೊಂಡರೆ ದೇಶದ 30 ರಾಜ್ಯಗಳ ಪೈಕಿ ಸುಮಾರು ಹನ್ನೊಂದು ರಾಜ್ಯಗಳು ಲೋಕಸಭೆಯ ಜೊತೆಗೆಯೇ ಚುನಾವಣೆ ಎದುರಿಸುವಂತಾಗುತ್ತದೆ. ಇದು ಸದ್ಯದಲ್ಲಿ ಭಾಜಪ ಮಾಡಲಿರುವ ಶಿಫಾರಸಿನ ಹಿಂದಿರುವ ಚಾಣಾಕ್ಷ ನಡೆಯಾಗಿದೆ.

ಇದರ ಜೊತೆಗೆ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಮೈತ್ರಿ ಸರಕಾರವಿರುವ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಯನ್ನುಂಟು ಮಾಡಿ ವಿಧಾನಸಭೆ ವಿಸರ್ಜನೆಯಾಗುವಂತೆ ನೋಡಿಕೊಳ್ಳಬಹುದಾಗಿದೆ. ಇನ್ನು ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ಎಐಎಡಿಎಂಕೆ ಪಕ್ಷ ಒಡೆದ ಮನೆಯಾಗಿದ್ದು ಅದರ ಲಾಭ ಪಡೆದು ಆ ಸರಕಾರವನ್ನೂ ಬೀಳಿಸುವ ತಂತ್ರವೊಂದು ಸಹ ಅದರ ಮುಂದಿರುವಂತೆ ಕಾಣುತ್ತಿದೆ. ಇತ್ತೀಚೆಗೆ ನಿಧನ ಹೊಂದಿದ ಎಂ. ಕೆ. ಕರುಣಾನಿಧಿಯವರ ಅನುಪಸ್ಥಿತಿ ಕೂಡ ಈ ನಡೆಗೆ ಪೂರಕವಾಗಬಲ್ಲದು. ಇದೇನಾದರೂ ಸಾಧ್ಯವಾಗಿ ಬಿಟ್ಟರೆ ದೇಶದ ಒಟ್ಟು 30 ರಾಜ್ಯಗಳ ಪೈಕಿ ಹೆಚ್ಚೂ ಕಡಿಮೆ ಅರ್ಧದಷ್ಟು ರಾಜ್ಯಗಳಲ್ಲಿ ಲೋಕಸಭೆಯ ಜತೆಗೆ ಒಂದೇ ವೇಳಾಪಟ್ಟಿಯಲ್ಲಿ ಚುನಾವಣೆ ನಡೆಸಿದಂತಾಗುತ್ತದೆ. ಭಾಜಪದ ಈ ಲೆಕ್ಕಾಚಾರದ ಹಿಂದಿರುವ ಕಾರಣಗಳನ್ನು ಸ್ವಲ್ಪ ನೋಡೋಣ:

ಭಾಜಪ ಅಧಿಕಾರದಲ್ಲಿರುವ ರಾಜಾಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ ರಾಜ್ಯಗಳಿಗೆ ಈ ವರ್ಷಾಂತ್ಯಕ್ಕೆ ಚುನಾವಣೆಗಳು ನಡೆಯಬೇಕಿವೆ. ಈ ಮೂರೂ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆಯೊಂದು ಬಲವಾಗಿ ಬೀಸುತ್ತಿದ್ದು ಕಾಂಗ್ರೆಸ್ ಇದರ ಲಾಭ ಪಡೆಯಬಹುದೆಂದು ಹೇಳಲಾಗುತ್ತಿದೆ. ಇತ್ತೀಚೆಗಿನ ಸಮೀಕ್ಷೆಗಳು ಈ ಮೂರೂ ರಾಜ್ಯಗಳಲ್ಲಿ ಭಾಜಪ ಅಧಿಕಾರ ಕಳೆದುಕೊಳ್ಳಬಹುದೆಂದು ಹೇಳಿವೆ. ಈ ಮೂರು ರಾಜ್ಯಗಳನ್ನು ಕಳೆದುಕೊಂಡರೆ ಲೋಕಸಭಾ ಚುನಾವಣೆಯಲ್ಲಿ ಭಾಜಪಕ್ಕೆ ಭಾರೀ ಹಿನ್ನಡೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಈ ರಾಜ್ಯಗಳಲ್ಲಿ 65 ಲೋಕಸಭಾ ಸ್ಥಾನಗಳಿದ್ದು ಕಳೆದ ಬಾರಿ ಅಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಭಾಜಪ 56 ಸ್ಥಾನಗಳನ್ನು ಗೆದ್ದಿತ್ತು. 2019ರ ಚುನಾವಣೆಯಲ್ಲಿ ಮತ್ತೆ ಭಾಜಪ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಅಷ್ಟೇ ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಈ ಮೂರು ರಾಜ್ಯಗಳಲ್ಲಿ ಹೇಗಾದರೂ ಮಾಡಿ ಗೆಲ್ಲುವುದು ಭಾಜಪದ ನಿಜ ಉದ್ದೇಶವಾಗಿದೆ.

ಲೋಕಸಭಾ ಚುನಾವಣೆಗಳ ಮಟ್ಟಿಗೆ ಸದ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕ ಇಲ್ಲವೆಂಬ ಒಂದು ಅಭಿಪ್ರಾಯ ಸಾಮಾನ್ಯ ಮತದಾರರಲ್ಲಿ ಇದ್ದು ಇದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಮುಂದಿನ ಲೋಕಸಭಾ ಚುನಾವಣೆಗಳನ್ನು ಗೆಲ್ಲಬಹುದೆಂಬುದು ಭಾಜಪದ ಲೆಕ್ಕಾಚಾರವಾಗಿದೆ. ಮೋದಿಯ ಪರವಿರುವ ಈ ಒಲವನ್ನು ರಾಜ್ಯಗಳ ಚುನಾವಣೆಯಲ್ಲಿಯೂ ಬಳಸಿಕೊಂಡರೆ ಮಾತ್ರ ಆ ರಾಜ್ಯಗಳ ಚುನಾವಣೆಗಳನ್ನು ಗೆಲ್ಲಬಹುದೆಂಬುದು ಭಾಜಪಕ್ಕೆ ಅರ್ಥವಾಗಿದೆ. ಇತ್ತೀಚೆಗೆ ರಾಜಾಸ್ಥಾನದಲ್ಲಿ ನಡೆದ ಮೂರು ಉಪಚುನಾವಣೆಗಳಲ್ಲಿ ಭಾಜಪ ಸೋತು ಕಾಂಗ್ರೆಸ್ ಗೆದ್ದಿತ್ತು. ಅಲ್ಲಿನ ಮುಖ್ಯಮಂತ್ರಿ ವಸುಂದರಾ ರಾಜೆಯವರ ವಿರುದ್ಧ ಜನಾಭಿಪ್ರಾಯ ಸ್ಪಷ್ಟವಾಗಿ ರೂಪುಗೊಳ್ಳುತ್ತಿದ್ದು, ಮೋದಿಯವರ ಹೆಸರು ಮಾತ್ರ ಅಲ್ಲಿ ಭಾಜಪದ ಪಾಲಿಗೆ ನೆರವಾಗುವ ಸನ್ನಿವೇಶವೊಂದು ಸೃಷ್ಟಿಯಾಗಿದೆ. ಹೀಗಾಗಿ ಹೇಗಾರೂ ಮಾಡಿ ಏಕಕಾಲಕ್ಕೆ ಚುನಾವಣೆ ನಡೆಸಿ ಮೋದಿ ಪರವಾದ ಕೃತಕವಾದ ಅಲೆಯೊಂದನ್ನು ಸೃಷ್ಟಿಸಿ ಗೆಲ್ಲುವ ತಂತ್ರಗಾರಿಕೆಯನ್ನು ಭಾಜಪ ಮಾಡುತ್ತಿದೆ.

  ಆದರಿದು ಆ ರಾಜ್ಯಗಳ ಮತದಾರರಿಗೆ ಮಾಡುವ ಅನ್ಯಾಯವಾಗುತ್ತದೆ. ಯಾಕೆಂದರೆ ಏಕಕಾಲಕ್ಕೆ ಚುನಾವಣೆ ನಡೆದರೆ ಸ್ಥಳೀಯ ವಿಷಯಗಳ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ಲೋಕಸಭಾ ಚುನಾವಣೆಗಳಲ್ಲಿ ಪ್ರಸ್ತಾಪವಾಗುವ ರಾಷ್ಟ್ರೀಯ ವಿಷಯಗಳ ಸುತ್ತಲೇ ಇಡೀ ಚುನಾವಣಾ ಪ್ರಚಾರ ಗಿರಕಿ ಹೊಡೆಯುತ್ತ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಯಾವ ರಾಜಕೀಯ ಪಕ್ಷಗಳೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದ ರಾಜ್ಯಗಳ ಮತದಾರನಿಗೆ ತನ್ನ ಮೂಲಭೂತ ಅವಶ್ಯಕತೆಗಳ ಮತ್ತು ಅವುಗಳ ಕೊರತೆಯ ಬಗ್ಗೆ ರಾಜಕೀಯ ಪಕ್ಷಗಳ ನಿಲುವುಗಳನ್ನು ತಿಳಿದುಕೊಂಡು ಮತ ಚಲಾಯಿಸುವ ಅವಕಾಶವನ್ನೇ ನಿರಾಕರಿಸಿದಂತಾಗುತ್ತದೆ.

ಒಟ್ಟಿನಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಹುನ್ನಾರದ ಹಿಂದಿರುವುದು ಭಾಜಪದ ಗೆಲುವಿನ ಮಹತ್ವಾಕಾಂಕ್ಷೆಯೇ ಹೊರತು ಬೇರೇನಲ್ಲ. ಇದನ್ನು ಮರೆ ಮಾಡಲು ಖರ್ಚಾಗುವ ಹಣ, ವ್ಯಯವಾಗುವ ಸಮಯ, ಚುನಾವಣಾ ಶಿಸ್ತಿನ ನೆಪಗಳನ್ನು ಹೇಳಲಾಗುತ್ತಿದೆ. ಯಾವುದೇ ಗಂಭೀರವಾದ ವಿಷಯಗಳ ಬಗ್ಗೆಯೂ ಒಂದಾಗಿ ಸರಕಾರದ ವಿರುದ್ಧ ಹೋರಾಡಲು ಇದುವರೆಗೂ ವಿಫಲವಾಗಿರುವ ವಿರೋಧ ಪಕ್ಷಗಳು ಇದೀಗ ಏನು ಮಾಡುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News