ಅರ್ಜುನ್ ರೆಡ್ಡಿಯಾಗಲಿರುವ ಶಾಹಿದ್ ಕಪೂರ್

Update: 2018-08-25 11:09 GMT

ಅರ್ಜುನ್ ರೆಡ್ಡಿ ತೆಲುಗಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಸಿನೆಮಾ. ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದ ಟಾಲಿವುಡ್ ಸಿನೆಮಾಗಳಿಂದ ಅರ್ಜುನ್ ರೆಡ್ಡಿ ಸಾಕಷ್ಟು ವಿಷಯಗಳಲ್ಲಿ ವಿಭಿನ್ನವಾಗಿದೆ. ಮಾಮೂಲಿ ಕತೆಯ ಹೊರತಾಗಿಯೂ ಅದನ್ನು ವಿನೂತನ ಶೈಲಿಯಲ್ಲಿ ಹೇಳಿರುವ ಕಾರಣ ಅರ್ಜುನ್ ರೆಡ್ಡಿ ಗಲ್ಲಾ ಪೆಟ್ಟಿಗೆಯಲ್ಲಿ ಹಣ ದೋಚುವಲ್ಲಿ ಯಶಸ್ವಿಯಾಗಿತ್ತು. ನಟ ವಿಜಯ್ ದೇವರಕೊಂಡಗೆ ಈ ಚಿತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.

ಇದೀಗ ಈ ಚಿತ್ರದ ಹಿಂದಿ ಅವತರಣಿಕೆಯಲ್ಲಿ ಶಾಹಿದ್ ಕಪೂರ್ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಈ ಚಿತ್ರವನ್ನು ನಿರ್ದೇಶಿಸಿರುವ ಸಂದೀಪ್ ರೆಡ್ಡಿ ವಂಗ ಹಿಂದಿಯಲ್ಲೂ ಅರ್ಜುನ್ ರೆಡ್ಡಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದ ಬಗ್ಗೆ ಸಂತೋಷ ಹಾಗೂ ಆಶ್ಚರ್ಯ ವ್ಯಕ್ತಪಡಿಸಿರುವ ಶಾಹಿದ್, ಅರ್ಜುನ್ ರೆಡ್ಡಿ ಚಿತ್ರ ವೀಕ್ಷಿಸಿದಾಗ ನನಗೆ ಆಶ್ಚರ್ಯವಾಯಿತು. ಯಾಕೆಂದರೆ ಅದು ನಾವು ಸಾಮಾನ್ಯವಾಗಿ ನೋಡುವ ಸಿನೆಮಾ ಥರ ಇಲ್ಲವೇ ಇಲ್ಲ. ಅದರ ಮೇಕಿಂಗ್ ಶೈಲಿ ಬಹಳ ವಿಭಿನ್ನವಾಗಿದೆ. ಮುಖ್ಯವಾಗಿ ಚಿತ್ರದಲ್ಲಿರುವ ಭಾವನಾತ್ಮಕ ಆಯಾಮ ನನಗೆ ಬಹಳ ಖುಷಿ ನೀಡಿತು. ಅದನ್ನು ವಿಜಯ್ ದೇವರಕೊಂಡ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಚಿತ್ರಕ್ಕಾಗಿ ಶಾಹಿದ್ ಸದ್ಯ ಗಡ್ಡ ಬೆಳೆಸುತ್ತಿದ್ದು ಸೆಪ್ಟಂಬರ್ ಕೊನೆಯಲ್ಲಿ ಚಿತ್ರೀಕರಣ ಆರಂಭಿಸುವ ನಿರೀಕ್ಷೆಯಿದೆ. ಈ ಸಿನೆಮಾವನ್ನು ಟಿ-ಸಿರೀಸ್ ಸಂಸ್ಥೆ ನಿರ್ಮಿಸುತ್ತಿದ್ದು ಮುಂದಿನ ವರ್ಷ ಜೂನ್ 21ಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸದ್ಯ ಶಾಹಿದ್ ತನ್ನ ಬತ್ತಿ ಗುಲ್ ಮೀಟರ್ ಚಾಲೂ ಸಿನೆಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಶಾಹಿದ್ ಜೊತೆ ಶ್ರದ್ಧಾ ಕಪೂರ್ ಮತ್ತು ಯಾಮಿ ಗೌತಮ್ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News