ಒಂದಲ್ಲ ಎರಡಲ್ಲ ನಿರ್ದೇಶಕರಿಗೆ ಸಮಾಧಾನವಿಲ್ಲ

Update: 2018-08-31 13:02 GMT

ಸದ್ಯ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನೆಮಾ ಒಂದಲ್ಲ ಎರಡಲ್ಲ ಎಲ್ಲರ ಪ್ರಶಂಸೆಗೆ ಪಾತ್ರವಾಗಿರಬಹುದು. ಆದರೆ ಚಿತ್ರದ ನಿರ್ದೇಶಕ ಸತ್ಯಪ್ರಕಾಶ್ ಮಾತ್ರ, ತಾಂತ್ರಿಕ ಸಮಸ್ಯೆಯಿಂದ ಈ ಚಿತ್ರದ ಪ್ರಥಮ ದಿನದ ಪ್ರಥಮ ಶೋ ವೇಳೆ ತೊಂದರೆಯಾದ ಕಾರಣದಿಂದ ಅಸಮಾಧಾನ ಹೊಂದಿದ್ದಾರೆ. ಆಗಸ್ಟ್ 24ರಂದು ಕರ್ನಾಟಕದ 20 ಕೇಂದ್ರಗಳಲ್ಲಿ ಈ ಸಿನೆಮಾದ ಶೋಗಳನ್ನು ಸ್ಥಗಿತಗೊಳಿಸಿದ ಪರಿಣಾಮ ಚಿತ್ರ ವೀಕ್ಷಿಸಲು ಬಹುದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರೇಕ್ಷಕರು ನಿರಾಶರಾಗಿ ವಾಪಸ್ ಹೋಗಿದ್ದರು. ಚಿತ್ರದ ಪ್ರಮೋಶನ್‌ಗಾಗಿ ನಗರದ ವಿವಿಧ ಚಿತ್ರಮಂದಿರಗಳಿಗೆ ತೆರಳುವ ಯೋಜನೆ ಹಾಕಿದ್ದ ಚಿತ್ರತಂಡ ಏಕಾಏಕಿ ತನ್ನ ಯೋಜನೆಯನ್ನು ಬದಲಿಸಿ ತಾವೇ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದರು. ಸತ್ಯಪ್ರಕಾಶ್ ಅವರ ನಿರ್ದೇಶನದ ಮೊದಲ ಸಿನೆಮಾ ‘ರಾಮಾ ರಾಮಾರೇ’ ವೀಕ್ಷಿಸಿದ್ದವರು, ‘ಒಂದಲ್ಲ ಎರಡಲ್ಲ’ ಚಿತ್ರದ ಮೊದಲ ದಿನದ ಮೊದಲ ಶೋ ವೀಕ್ಷಿಸಲು ಆಗಮಿಸಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ ಪ್ರದರ್ಶನ ರದ್ದಾದ ಕಾರಣ ಅವರು ಬೇಸರದಿಂದ ಮರಳಬೇಕಾಗಿ ಬಂದಿತ್ತು. ಇದೀಗ ‘ಒಂದಲ್ಲ ಎರಡಲ್ಲ’ 70 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News