ಅತ್ಯಾಚಾರ ಪ್ರಕರಣ: ಕ್ಷಮಾದಾನಕ್ಕೆ ಆಸಾರಾಮ್ ಮನವಿ
ಜೋಧಪುರ, ಸೆ. 11: ಬಾಲಕಿಯ ಅತ್ಯಾಚಾರ ಪ್ರಕರಣದ ದೋಷಿ ಸ್ವಘೋಷಿತ ದೇವ ಮಾನವ ಆಸಾರಾಮ್ ನ್ಯಾಯಾಲಯ ತನಗೆ ನೀಡಿದ ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸುವಂತೆ ಕೋರಿ ರಾಜಸ್ಥಾನದ ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ರವಾನಿಸಿದ್ದಾರೆ.
ಐದು ವರ್ಷಗಳ ಹಿಂದೆ ಬಾಲಕಿಯನ್ನು ಅತ್ಯಾಚಾರ ಎಸಗಿರುವುದು ಸಾಬೀತಾದ ಬಳಿಕ ಜೋಧಪುರ ನ್ಯಾಯಾಲಯ ಎಪ್ರಿಲ್ 25ರಂದು ಆಸಾರಾಮ್ಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಆಸಾರಾಮ್ ಜುಲೈ 2ರಂದು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಮನವಿಯ ವಿಚಾರಣೆಗೆ ಉಚ್ಚ ನ್ಯಾಯಾಲಯ ಇನ್ನಷ್ಟೆ ಪರಿಗಣಿಸಬೇಕಿದೆ.
ಅಸಾರಾಮ್ ಸಲ್ಲಿಸಿದ ಮನವಿಯನ್ನು ರಾಜ್ಯಪಾಲ ಕಲ್ಯಾಣ್ ಸಿಂಗ್ ಇತ್ತೀಚೆಗೆ ಸ್ವೀಕರಿಸಿದ್ದರು. ಮನವಿ ಬಗ್ಗೆ ವಿವರವಾದ ವರದಿ ಕೋರಿ ಅವರು ಮನವಿಯನ್ನು ಗೃಹ ಇಲಾಖೆಗೆ ರವಾನಿಸಿದ್ದಾರೆ. ತನಗೆ ವಿಧಿಸಿರುವ ಜೀವಾವಧಿ ಕಾರಾಗೃಹ ಶಿಕ್ಷೆ ಕಷ್ಟಕರ ಎಂದು ಕ್ಷಮಾದಾನ ಅರ್ಜಿಯಲ್ಲಿ ಮನವಿ ಮಾಡಿರುವ ಅಸಾರಾಮ್ ತನ್ನ ಪ್ರಾಯವನ್ನು ಕೂಡ ಉಲ್ಲೇಖಿಸಿದ್ದಾರೆ. ಗೃಹ ಇಲಾಖೆ ಮನವಿಯನ್ನು ಜೋಧಪುರ ಕೇಂದ್ರ ಕಾರಾಗೃಹದ ಆಡಳಿತಕ್ಕೆ ಕಳುಹಿಸಿಕೊಟ್ಟಿದೆ ಹಾಗೂ ಜಿಲ್ಲಾಡಳಿತ ಹಾಗೂ ಪೊಲೀಸರಿರಿಂದ ವರದಿ ಕೋರಿದೆ.