ಇಬ್ಬರು ಸಹೋದ್ಯೋಗಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಯೋಧ

Update: 2018-09-17 16:24 GMT

ಧರ್ಮಶಾಲಾ, ಸೆ. 17: ಹಿಮಾಚಲಪ್ರದೇಶದ ಧರ್ಮಶಾಲಾ ಕಂಟೋನ್ಮೆಂಟ್‌ನಲ್ಲಿ ಯೋಧನೋರ್ವ ತನ್ನ ಸೇವಾ ಬಂದೂಕಿನಿಂದ ಇಬ್ಬರು ಸಹೋದ್ಯೋಗಿಗಳನ್ನು ಹತ್ಯೆಗೈದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಸಿಕ್ಖ್ ರೆಜಿಮೆಂಟ್‌ನ ಯೋಧ ಜಸ್ಬೀರ್ ಸಿಂಗ್ ಇಂದು ಮುಂಜಾನೆ ತನ್ನ ಐಎನ್‌ಎಸ್‌ಎಎಸ್ ರೈಫಲ್‌ನಿಂದ ಸಹೋದ್ಯೋಗಿಗಳಾದ ಹವಾಲ್ದಾರ್ ಹರ್ದೀಪ್ ಸಿಂಗ್ ಹಾಗೂ ನಾಯಕ್ ಹರ್ಪಾಲ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಅನಂತರ ತಾನು ಕೂಡಾ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕಂಟೋನ್ಮೆಂಟ್‌ನ ಒಳಗೆ ಮುಂಜಾನೆ 2.15ಕ್ಕೆ ನಡೆದಿದೆ ಎಂದು ಕಂಗ್ರಾ ಪೊಲೀಸರು ತಿಳಿಸಿದ್ದಾರೆ. 

ಕರ್ತವ್ಯ ನಿರತರಾಗಿದ್ದ ಸಂದರ್ಭ ಜಸ್ಪೀರ್ ಸಿಂಗ್ ಹಾಗೂ ಹವಾಲ್ದಾರ್ ಹರ್ದೀಪ್ ಸಿಂಗ್, ನಾಯಕ್ ಹರ್ಪಾಲ್ ಸಿಂಗ್ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿ ವಾಗ್ವಾದ ಉಂಟಾಗಿತ್ತು. ಈ ಸಂದರ್ಭ ಆಕ್ರೋಶಿತರಾದ ಜಸ್ಬೀರ್ ಸಿಂಗ್ ಇಬ್ಬರು ಸೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಅನಂತರ ತಾನು ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕಾಂಗ್ರಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಜಸ್ಬೀರ್ ಸಿಂಗ್ ಅವರು ಒಂದೂವರೆ ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಹರ್ದೀಪ್ ಸಿಂಗ್ ಹಾಗೂ ಹರ್ಪಾಲ್ ಸಿಂಗ್ ಸೇನೆಯಲ್ಲಿ ಕ್ರಮವಾಗಿ 23 ಹಾಗೂ 18 ವರ್ಷ ಸೇವೆ ಸಲ್ಲಿಸಿದ್ದಾರೆ.

ಧರ್ಮಶಾಲಾದ ಪ್ರಾದೇಶಿಕ ವಿಧಿವಿಜ್ಞಾನ ಲ್ಯಾಬೊರೇಟರಿ (ಆರ್‌ಎಫ್‌ಎಸ್‌ಎಲ್)ಯ ವಿಧಿವಿಜ್ಞಾನ ತಂಡ ಘಟನಾ ಸ್ಥಳಕ್ಕೆ ಧಾವಿಸಿದೆ ಹಾಗೂ ಪುರಾವೆಗಳನ್ನು ಸಂಗ್ರಹಿಸಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಬದ್ರಿ ಸಿಂಗ್ ತಿಳಿಸಿದ್ದಾರೆ. ಸೇನಾ ಬೇಹುಗಾರಿಕಾ ಅಧಿಕಾರಿಗಳು ಹಾಗೂ ಕಾಂಗ್ರಾ ಪೊಲೀಸರು ಕೂಡ ಘಟನಾ ಸ್ಥಳಕ್ಕೆ ತಲುಪಿದ್ದು, ತನಿಖೆ ನಡೆಸಿದ್ದಾರೆ. ಯೋಧರ ಮೃತದೇಹಗಳನ್ನು ಕಾಂಗ್ರಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News