ರಾಜಸ್ತಾನ: ಎಸ್‌ಬಿಐ ಸಿಬ್ಬಂದಿ ಮಾಡಿದ ಎಡವಟ್ಟು; ರೈತರಿಗೆ ಪಾವತಿಯಾಗದ ಬೆಳೆ ವಿಮಾ ಪರಿಹಾರ

Update: 2018-09-18 16:08 GMT

ಜೈಪುರ, ಸೆ.18: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಪ್ರೀಮಿಯಂ ಪಾವತಿಸದಿದ್ದ ಕಾರಣ ರಾಜಸ್ತಾನದ ಸುಮಾರು 3,052 ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(ಪಿಎಂಎಫ್‌ಬಿವೈ)ಯಡಿ ವಿಮೆ ಹಣದಿಂದ ವಂಚಿತರಾಗಿದ್ದಾರೆ ಎಂದು ವರದಿಯಾಗಿದೆ.

ರಾಜಸ್ತಾನದ ಹನುಮಾನ್‌ಗಢ ಜಿಲ್ಲೆಯ ರಾಮಗಢ ಉಜ್ಜಲ್ವಾಸ್, ಭುಕಾರ್ಕ ಮತ್ತು ಗೋರ್ಖಾನಾ ಗ್ರಾಮಗಳ ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಹೊಂದಿರುವ ರೈತರಿಗೆ 2017ರ ಮುಂಗಾರು ಬೆಳೆಯ ವಿಮಾ ಹಣ ಪಡೆಯಲು ಸಾಧ್ಯವಾಗಿಲ್ಲ. ರಾಮಗಢ ಉಜ್ಜಲ್ವಾಸ್‌ನ ಎಸ್‌ಬಿಐ ಶಾಖೆಯು ರೈತರ ವಿಮಾ ಕಂತಿನ ಹಣವನ್ನು ಬಜಾಜ್ ಅಲಯನ್ಸ್ ಜನರಲ್ ಇನ್ಷೂರೆನ್ಸ್ ಸಂಸ್ಥೆಯ ಬದಲು ಅಗ್ರಿಕಲ್ಚರ್ ಇನ್ಷೂರೆನ್ಸ್ ಕಂಪೆನಿ ಆಫ್ ಇಂಡಿಯಾದ ಬ್ಯಾಂಕ್ ಖಾತೆಗೆ ವರ್ಗಾಯಿಸಿದೆ. ಇದರಿಂದ ನಿಗದಿತ ಅವಧಿಯಲ್ಲಿ ವಿಮಾ ಮೊತ್ತದ ಕಂತನ್ನು ಪಾವತಿಸಲು ಸಾಧ್ಯವಾಗಿಲ್ಲ. ಭುಕಾರ್ಕ ಮತ್ತು ಗೋರ್ಖಾನಾ ಶಾಖೆಗಳು ವಿಮಾ ಕಂತನ್ನು ಪಾವತಿಸುವ ಗೋಜಿಗೇ ಹೋಗಿಲ್ಲ. ಕೆಲಸದ ಒತ್ತಡದ ಕಾರಣ ವಿಮೆಯ ಕಂತಿನ ಹಣ ತಪ್ಪಾಗಿ ಮತ್ತೊಂದು ಕಂಪೆನಿಯ ಖಾತೆಗೆ ವರ್ಗಾವಣೆಯಾಗಿದೆ.

 ತಪ್ಪಿನ ಅರಿವಾದೊಡನೆ ಹಣವನ್ನು ಬಜಾಜ್ ಇನ್ಷೂರೆನ್ಸ್ ಸಂಸ್ಥೆಯ ಖಾತೆಗೆ ವರ್ಗಾಯಿಸಲಾಗಿದೆ. ಆದರೆ ಅದಾಗಲೇ 10 ದಿನ ವಿಳಂಬವಾಗಿದ್ದ ಕಾರಣ ಅವರು ಇದನ್ನು ಸ್ವೀಕರಿಸಿಲ್ಲ ಎಂದು ರಾಮಗಢ ಉಜ್ಜಲ್ವಾಸ್‌ನ ಎಸ್‌ಬಿಐ ಶಾಖೆಯ ಮ್ಯಾನೇಜರ್ ಮುಕೇಶ್ ಕುಮಾರ್ ಹೇಳಿದ್ದಾರೆ. 2017ರ ಮುಂಗಾರಿನ ಬೆಳೆ ಕಟಾವು ಪ್ರಾಯೋಗಿಕ ಮಾಹಿತಿ(ಸಿಸಿಇ)ಯ ಪ್ರಕಾರ ರಾಮಗಢ ಜಿಲ್ಲೆಯಲ್ಲಿ ಬೆಳೆ ನಷ್ಟವಾಗಿದ್ದು ಪಿಎಂಎಫ್‌ಬಿವೈ ಯೋಜನೆಯಡಿ ವಿಮಾ ಪರಿಹಾರ ಪಡೆಯಲು ಅರ್ಹವಾಗಿದೆ. ಆದರೆ ಈ ಜಿಲ್ಲೆಯ ಬ್ಯಾಂಕ್ ಶಾಖೆಗಳು ರೈತರ ಖಾತೆಗೆ ‘ಕ್ಲೇಮ್ ಮೊತ್ತದ ಬದಲು ಈ ಹಿಂದೆ ಪಾವತಿಸಲಾದ ಪ್ರೀಮಿಯಂ ಮೊತ್ತವನ್ನು ವರ್ಗಾಯಿಸಿವೆ. 2016ರ ಮುಂಗಾರು ಅವಧಿಯಲ್ಲಿ 1.6 ಲಕ್ಷ ರೂ. ಕೆಸಿಸಿ ಸಾಲಕ್ಕೆ ತನಗೆ 18,000 ರೂ. ಕ್ಲೇಮ್ ದೊರಕಿತ್ತು. ಆದರೆ 2017ರಲ್ಲಿ ತಾನು 10.70 ಲಕ್ಷ ರೂ. ಕೆಸಿಸಿ ಸಾಲ ಪಡೆದಿದ್ದು ತನ್ನ ಖಾತೆಗೆ ಕೇವಲ 302.40 ರೂ. ಮೊತ್ತ ವರ್ಗಾಯಿಸಲಾಗಿದೆ. ಇದು ತಾನು ಪಾವತಿಸಿರುವ ಪ್ರೀಮಿಯಂ ಮೊತ್ತವಾಗಿದೆ. ಕ್ಲೇಮ್ ಮೊತ್ತವಲ್ಲ ಎಂದು ರಾಮಗಢದ ಕೆಸಿಸಿ ಕಾರ್ಡ್ ಹೊಂದಿರುವ ರೈತ ಖೇತಾರಾಮ್ ಎಂಬವರು ಅಳಲು ತೋಡಿಕೊಂಡಿದ್ದಾರೆ. ಬ್ಯಾಂಕ್ ನಡೆಸಿರುವ ಪ್ರಮಾದ ಬೆಳಕಿಗೆ ಬರುತ್ತಿದ್ದಂತೆಯೇ ಜಿಲ್ಲೆಯ ರೈತರು ಕಳೆದ ಜುಲೈಯಲ್ಲಿ 36 ದಿನ ಪ್ರತಿಭಟನೆ ನಡೆಸಿದ್ದರು. ಬಳಿಕ, ರೈತರಿಗೆ ಬರಬೇಕಿರುವ ಹಣವನ್ನು ಪಾವತಿಸುವುದಾಗಿ ಬ್ಯಾಂಕ್ ಆಗಸ್ಟ್ 20ರಂದು ಒಪ್ಪಿದ್ದು ಪಾವತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ರೈತರು ತಿಳಿಸಿದ್ದಾರೆ.

ಇದು ಬ್ಯಾಂಕಿನ ಸಿಬ್ಬಂದಿ ಎಸಗಿರುವ ಪ್ರಮಾದವಾಗಿದ್ದು ಇದರಲ್ಲಿ ನಮ್ಮ ಪಾತ್ರವೇನಿಲ್ಲ. ಆದರೆ ರೈತರಿಗೆ ಪರಿಹಾರ ನೀಡುವಂತೆ ಬ್ಯಾಂಕ್‌ಗೆ ಸೂಚಿಸಲಾಗಿದೆ ಎಂದು ಹನುಮಾನ್‌ಗಢದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಲ್ವೀರ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News