ಸರ್ಜಿಕಲ್ ಸ್ಟ್ರೈಕ್ ದಿನವನ್ನು ವಿಶ್ವಸಂಸ್ಥೆ ಕೂಡ ಆಚರಿಸ್ತಾ ಇದೆ ...!

Update: 2018-09-22 18:34 GMT

ದೇಶಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ‘ಸರ್ಜಿಕಲ್ ಸ್ಟ್ರೈಕ್ ದಿನ’ ಆಚರಿಸಲಾಗುವುದು ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ವಿಶ್ವವಿದ್ಯಾನಿಲಯದ ಕುಖ್ಯಾತ ಕುಲಪತಿಯೊಬ್ಬರನ್ನು ಭೇಟಿ ಮಾಡಿದ್ದೇ ಪ್ರಶ್ನೆಗೆ ಶುರು ಹಚ್ಚಿದ.

‘‘ಸಾರ್...ಈ ಸರ್ಜಿಕಲ್ ಸ್ಟ್ರೈಕ್ ಎಂದರೇನು? ಅದು ಯಾವಾಗ ನಡೆಯಿತು?’’ ಕಾಸಿ ಕೇಳಿದ. ಕು.ಪತಿಗಳು ಪ್ರಶ್ನೆಗೆ ಬೆಚ್ಚಿ ಬಿದ್ದಿದ್ದರು. ಕೇಂದ್ರದಿಂದ ಆದೇಶ ಬಂದಿತ್ತು. ಅಂತೆಯೇ ಆ ದಿನ, ವಿಶೇಷ ಧ್ವಜಾರೋಹಣ ನಡೆಸಿ, ಉಪ್ಪಿಟ್ಟು ಶೀರ ಕೊಟ್ಟು, ದೇಶ ಭಕ್ತಿಯ ಭಾಷಣ ಮಾಡಿ ಮುಗಿಸಿ ಬಿಡುವುದು ಎಂದು ಎಲ್ಲ ಉಪನ್ಯಾಸಕರಿಗೆ ಸೂಚನೆ ನೀಡಿದ್ದರು. ಇದೀಗ ಈ ಪತ್ರಕರ್ತ ಬಂದು ಹೊಸ ಪ್ರಶ್ನೆ ಕೇಳುತ್ತಿದ್ದಾನೆ. ಏನು ಹೇಳುವುದು. ಕು.ಪತಿಗಳು ಒಮ್ಮೆ ಸಣ್ಣಗೆ ಕೆಮ್ಮಿ ‘‘ನೋಡಿ....ನಾನು ತತ್ವಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದವನು. ಈ ಹಿಸ್ಟರಿ ಎಲ್ಲ ನನಗೆ ಗೊತ್ತಿಲ್ಲ....ಬಹುಶಃ ಸ್ವಾತಂತ್ರ ಹೋರಾಟದಲ್ಲಿ ಬಹುಮುಖ್ಯ ದಿನ. ಈ ಸ್ಟ್ರೈಕ್‌ಗೆ ಹೆದರಿಯೇ ಬ್ರಿಟಿಷರು ಓಡಿರಬೇಕು. ಕಾಂಗ್ರೆಸ್‌ನವರು ಇದನ್ನು ಈವರೆಗೆ ಮುಚ್ಚಿ ಹಾಕಿದ್ದರು. ಯಾಕೆಂದರೆ ಈ ಹೋರಾಟದಲ್ಲಿ ಕಾಂಗ್ರೆಸ್‌ನೋರ ಪಾತ್ರವೇ ಇದ್ದಿರಲಿಲ್ಲ....ಇದೀಗ ನಮ್ಮ ಮೋದೀಜಿಯವರು ಹಿಸ್ಟರಿಯನ್ನು ಜಾಲಾಡಿಸಿ ಈ ದಿನವನ್ನು ಹುಡುಕಿ ತೆಗೆದಿದ್ದಾರೆ....ಆದುದರಿಂದ ನಾವೆಲ್ಲರೂ ಈ ದಿನವನ್ನು ವಿಶ್ವವಿದ್ಯಾನಿಲಯಗಳಲ್ಲಿ ಆಚರಿಸುತ್ತಿದ್ದೇವೆ....’’ ವಿವರಿಸಿದರು.

ಕು. ಪತಿಯ ವಿವರಣೆ ಕೇಳಿ ಕಾಸಿಗೆ ತಲೆ ತಿರುಗಿದಂತಾಯಿತು. ‘‘ಸಾರ್...ಇದು ಪಾಕಿಸ್ತಾನದ ಗಡಿಯಲ್ಲಿ ನಡೆದಿರುವುದು....ಸ್ವಾತಂತ್ರಾ ನಂತರ ನಡೆದಿರುವುದಂತೆ...’’

ಕು.ಪತಿ ಬೆಚ್ಚಿ ಬಿದ್ದರು. ‘ಸರ್ಜಿಕಲ್ ಸ್ಟ್ರೈಕ್ ವಿರುದ್ಧ ಕುಲಪತಿಗಳಿಗೇ ಮಾಹಿತಿಯಿಲ್ಲ’’ ಎಂದು ಈತ ಬರೆದು ಬಿಟ್ಟರೆ ಏನು ಮಾಡುವುದು ....ಎಂದು ಬೆದರುತ್ತಾ ‘‘ಕಾಸಿಯವ್ರೇ...ಹೋಗುವಾಗ ಊಟ ಗೀಟ ಮಾಡಿ ಹೋಗಿ....ಜೊತೆಗೆ ಗಿಫ್ಟ್‌ಕೂಡ ಇದೆ. ತಗೊಂಡು ಹೋಗಿ....’’ ಎನ್ನುತ್ತಾ ಹಿಸ್ಟರಿ ಹೆಡ್ ಆಫ್ ದ ಡಿಪಾರ್ಟ್‌ಮೆಂಟ್ ಅವರನ್ನು ಕರೆದರು. ಹಿಸ್ಟರಿ ಹೆಡ್ಡರು ಬಂದವರೇ ಕು.ಪತಿ ಮುಂದೆ ವಿನೀತವಾಗಿ ನಿಂತರು.
‘‘ನೋಡ್ರೀ...ಕಾಸಿಯವರಿಗೆ ಈ ಸರ್ಜಿಕಲ್ ಸ್ಟ್ರೈಕ್ ಡೇಯ ಹಿನ್ನೆಲೆ, ಮಹತ್ವ ಸ್ವಲ್ಪ ವಿವರಿಸಿ....ಆ ಡೇಯನ್ನು ನಾವು ಯಾಕೆ ಆಚರಿಸುತ್ತೇವೆ ಎನ್ನುವುದನ್ನು ಸ್ವಲ್ಪ ಹೇಳಿ....’’ ಕು. ಪತಿಗಳು ಆದೇಶಿಸಿದರು.

ಹಿಸ್ಟರಿ ಹೆಡ್ಡರು ಕಕ್ಕಾ ಬಿಕ್ಕಿಯಾದರು. ಸರ್ಜಿಕಲ್ ಸ್ಟ್ರೈಕ್ ಯಾವಾಗ ನಡೆದಿರಬಹುದು? ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾದರೆ ಸಾಕು ಎಂದು ‘‘ಸಾರ್...ಅದೇ ಸಾರ್...ಅದೇ ಸ್ವಾತಂತ್ರ ಹೋರಾಟ...ಗಾಂಧೀಜಿ.....ಬ್ರಿಟಿಷರ ವಿರುದ್ಧ ಸ್ಟ್ರೈಕ್ ಮಾಡಿರುವುದು....’’ ಹೇಳದೆಯೂ ಹೇಳಿದಂತೆ ಮಾಡಿದರು.

ಕು.ಪತಿಗೆ ಸಮಾಧಾನವಾಯಿತು. ಕಾಸಿಯತ್ತ ನೋಡಿ ‘‘ಅದೇರಿ...ಅವರು ಹೇಳ್ತಾ ಇದ್ದಾರಲ್ಲ ಅದೇ....ಅದೇ ದಿನವನ್ನು ನಾವು ಆಚರಿಸ್ತಾ ಇದ್ದೇವೆ....’’
ಕಾಸಿಗೆ ಗೊಂದಲವಾಯಿತು....‘‘ಸಾರ್...ಅದೇ ಎಂದರೆ ಯಾವುದು ಸಾರ್....ಗೊತ್ತಾಗಲಿಲ್ಲ. ಭಕ್ತರೆಲ್ಲ ಮೋದಿ ಸಾಧನೆ ಎಂದು ಹೇಳ್ತಾ ಇದ್ದಾರೆ....’’
ಹಿಸ್ಟರಿ ಹೆಡ್ಡರು ಒಮ್ಮೆಲೆ ಮಧ್ಯೆ ಬಾಯಿ ಹಾಕಿದರು ‘‘ಸಾರ್...ಈಗ ಗೊತ್ತಾಯಿತು ಸಾರ್. ಇದು ನನ್ನ ಡಿಪಾರ್ಟ್‌ಮೆಂಟ್ ಅಲ್ಲ. ಇಕಾನಮಿಕ್ಸ್ ಡಿಪಾರ್ಟ್‌ಮೆಂಟ್...ನೋಟು ನಿಷೇಧದ ಸಂದರ್ಭದಲ್ಲಿ ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿದ ನೆನಪು. ಅದರ ದಿನವನ್ನು ಆಚರಿಸಲು ಕರೆ ಕೊಟ್ಟಿದ್ದಾರೆ....’’

ಕು.ಪತಿಗಳು ‘‘ಹಾಗಾದರೆ ಇಕಾನಮಿಕ್ಸ್ ಹೆಡ್ಡರನ್ನು ಕರೆಸ್ರಿ....’’ ಎಂದು ಆದೇಶ ನೀಡಿದರು.

ಹಿಸ್ಟರಿ ಹೆಡ್ಡರು ಬದುಕಿದೆಯಾ ಬಡಜೀವ ಎಂದು ಇ. ಹೆಡ್ಡರನ್ನು ಕರೆಯಲು ಓಡಿದರು. ಇ. ಹೆಡ್ಡರು ವಿನೀತರಾಗಿ ಕು. ಪತಿಗಳ ಮುಂದೆ ನಿಂತರು.
‘‘ಅದೇರಿ...ಈ ಸರ್ಜಿಕಲ್ ಸ್ಟ್ರೈಕ್ ದಿನದ ಬಗ್ಗೆ ಇವರಿಗೆ ಸ್ವಲ್ಪ ವಿವರಿಸಿ....’’ ಕು. ಪತಿಗಳು ಆದೇಶಿಸಿದರು.
‘‘ಸಾರ್...ಕೇಂದ್ರದ ಸರ್ಕ್ಯುಲರ್‌ನಲ್ಲಿ ಏನಿದೆ ಎಂದು ನೋಡಿ ವಿವರಿಸಲಾ...’’ ಇಕಾನಮಿಕ್ಸ್ ಹೆಡ್ಡರು ಕೇಳಿದರು.

‘‘ಏನ್ರೀ...ಅದು. ಅಷ್ಟು ದೊಡ್ಡ ದಿನದ ಬಗ್ಗೆ ನಿಮಗೆ ಗೊತ್ತಿಲ್ಲ ಎಂದರೆ ಹೇಗೆ...ಸರ್ಜಿಕಲ್ ಸ್ಟ್ರೈಕ್ ದಿನವನ್ನ್ನು ವಿಶ್ವಸಂಸ್ಥೆ ಕೂಡ ಆಚರಿಸ್ತಾ ಇದೆ ಎಂದು ಕೇಳಿದ್ದೇನೆ. ನಿಮಗೆ ಅದರ ಬಗ್ಗೆ ಗೊತ್ತಿಲ್ಲ ಅಂದರೆ?’’ ಕು. ಪತಿಗಳು ಜೋರು ದನಿಯಲ್ಲಿ ಪ್ರಶ್ನಿಸಿದರು.

‘‘ಓಹ್ ಅದೇ ಸಾರ್...ನೋಟು ನಿಷೇಧ...ದೇಶ ಕಪ್ಪು ಹಣ ಮುಕ್ತವಾದ ದಿನ ಸಾರ್....ಇಡೀ ವಿಶ್ವವೇ ಮೋದಿ ಸಾಧನೆಯನ್ನು ಮೆಚ್ಚಿಕೊಂಡ ದಿನ. ಕಪ್ಪು ಹಣ ಹೊಂದಿದವರ ವಿರುದ್ಧ ಮೋದಿಯವರು ನೋಟು ನಿಷೇಧ ಮಾಡಿದರಲ್ಲ....ಅದನ್ನೇ ಸರ್ಜಿಕಲ್ ಸ್ಟ್ರೈಕ್ ಅಂತ ಕರೀತಿರಬೇಕು. ಈ ಸಂದರ್ಭದಲ್ಲಿ ನೂರಾರು ಜನರು ಮೋದಿಗಾಗಿ ಬ್ಯಾಂಕ್ ಮುಂದೆ ಹುತಾತ್ಮರಾದರು....ಅವರನ್ನು ನೆನಪಿಸುವ ಉದ್ದೇಶಕ್ಕಾಗಿ ಈ ದಿನವನ್ನು ಆಚರಿಸುತ್ತಾರೆ ಎಂದು ಕಾಣುತ್ತದೆ....’’ ಇ. ಹೆಡ್ಡರು ವಿವರಿಸಿದರು. ‘‘...ಎಂದು ಕಾಣುತ್ತದೆ....ಎಂದರೆ? ನಿಮಗೆ ಸ್ಪಷ್ಟವಿಲ್ಲವೆ?’’ ಕು. ಪತಿಗಳು ಅಬ್ಬರಿಸಿದರು.
‘‘ಹಾಗಲ್ಲ ಸಾರ್...ಇದು ಸರ್ಜಿಕಲ್ ಮತ್ತು ಸ್ಟ್ರೈಕ್ ಎರಡೂ ಇರುವುದರಿಂದ...ತುಸು ಗೊಂದಲ ಇದೆ. ಯಾವುದಕ್ಕೂ ಪೊಲಿಟಿಕಲ್ ಹೆಡ್ ಅವರನ್ನೊಮ್ಮೆ ಕರೆಸಿ ಸಾರ್...ಅವರು ಮೋದಿಯವರ ವಿಷಯದಲ್ಲಿ ತುಂಬಾ ಗೊತ್ತಿರುವವರು....’’ ಇ. ಹೆಡ್ಡರು ತಡವರಿಸುತ್ತಾ ಹೇಳಿದರು.
‘‘ಹಾಗಾದರೆ ಆ ಹೆಡ್ಡರನ್ನೂ ಕರೆಸಿ ಬಿಡಿ....ಏನು ಎಂದು ನೋಡಿಯೇ ಬಿಡುವ....’’ ಆದೇಶಿಸಿದರು.

ಕು.ಪತಿಗಳ ಕರೆ ಕೇಳಿದ್ದೇ ಪೊ. ಹೆಡ್ಡರು ಓಡೋಡಿ ಬಂದರು. ‘‘ಅದೇರಿ...ಸರ್ಜಿಕಲ್ ಸ್ಟೈಕ್ ಡೇ ಮಾಡ್ತಾ ಇದ್ದೇವಲ್ಲ...ಅದು ಏನು ಎನ್ನುವುದರ ಬಗ್ಗೆ ಪತ್ರಕರ್ತರಿಗೆ ಮಾಹಿತಿ ಬೇಕಂತೆ....’’ ಕು. ಪತಿ ಹೇಳಿದರು.

ಪೊ. ಹೆಡ್ಡರು ನಿರಾಳರಾದರು. ‘‘ಸಾರ್....ತುಂಬಾ ಈಸಿ ಸಾರ್. ಮೋದಿಯವರ ಕಾಲದಲ್ಲಾದ ಅತಿ ದೊಡ್ಡ ಸಾಧನೆ ಸಾರ್....’’ ವಿವರಿಸತೊಡಗಿದರು.
‘‘ಅದೇರಿ...ಸಾಧನೆ ಏನು ಎನ್ನುವುದನ್ನು ಹೇಳಿ....’’ ಕು. ಪತಿ ಒತ್ತಡ ಹಾಕಿದರು.

‘‘ಅದೇ ಸಾರ್....ಸ್ಟ್ರೈಕ್ ಅಂತ ಇದೆಯಲ್ಲ ಸಾರ್...ಅದೇ..’’ ಪೊ. ಹೆಡ್ಡರು ವಿವರಿಸಲು ಪ್ರಯತ್ನಿಸಿದರು.
‘‘ನೋಡ್ರೀ...ನೀವೀಗ ವಿವರ ತಿಳಿಸದೇ ಇದ್ದರೆ ಎಲ್ಲ ಡಿಪಾರ್ಟ್‌ಮೆಂಟ್‌ಗಳ ಮೇಲೆ ನಾನು ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗುತ್ತದೆ. ಬೇಗ ಬೊಗಳಿ....’’ ಕು. ಪತಿ ಕೆಂಡವಾಗಿ ಅಬ್ಬರಿಸಿದರು.

‘‘ಸಾರ್....ಜೆಎನ್‌ಯುವಿನಲ್ಲಿ ಕೆಲವು ದೇಶದ್ರೋಹಿ ವಿದ್ಯಾರ್ಥಿಗಳು ಸ್ಟ್ರೈಕ್ ಮಾಡಿದ್ರಲ್ಲಾ ಸಾರ್....ಆಗ ಅವರನ್ನೆಲ್ಲ ಹಿಡಿದು ಜೈಲಿಗೆ ತಳ್ಳಿ ಸ್ಟೈಕ್‌ನ್ನು ಮೋದಿ ಸರಕಾರ ವಿಫಲಗೊಳಿಸಿ ಒಂದು ದೊಡ್ಡ ವಿಪತ್ತನ್ನು ತಪ್ಪಿಸಿತು. ವಿಶ್ವವಿದ್ಯಾನಿಲಯದಲ್ಲಿ ಈ ಘಟನೆ ನಡೆದಿರುವುದರಿಂದ ಅದರ ಸ್ಮರಣಾರ್ಥ ಸರ್ಜಿಕಲ್ ಸ್ಟೈಕ್ ದಿನ ಆಚರಿಸಲು ಸರಕಾರ ಕರೆಕೊಟ್ಟಿದೆ ಸಾರ್....’’ ಪೊ. ಹೆಡ್ಡರು ಮೋದಿಗಿಂತಲೂ ಸರಾಗವಾಗಿ ರೈಲು ಬಿಟ್ಟರು.
‘‘ಅರ್ಥವಾಯಿತೇನ್ರೀ....’’ ಎನ್ನುತ್ತಾ ಕು. ಪತಿಗಳು ಪತ್ರಕರ್ತ ಕಾಸಿಯನ್ನು ದುರುಗುಟ್ಟಿ ನೋಡಿದರು.
‘‘ಆಯಿತು ಸಾರ್’’ ಎಂದವನೇ ಅಲ್ಲಿಂದ ಮೆಲ್ಲಗೆ ಜಾಗ ಖಾಲಿ ಮಾಡಿದ.

Writer - ಚೇಳಯ್ಯ chelayya@gmail.com

contributor

Editor - ಚೇಳಯ್ಯ chelayya@gmail.com

contributor

Similar News