ಕಿನಾರೆ: ಪ್ರೇಮದ ಕಿನಾರೆಯಲ್ಲಿ ದ್ವೇಷದ ಅಲೆ

Update: 2018-09-30 08:17 GMT
Editor : ಶಶಿ

ಕಿನಾರೆ

ಕಾಸರಗೋಡಿನ ಎಂಡೋಸಲ್ಫಾನ್ ಬಾಧಿತರ ಕುರಿತಾದ ಚಿತ್ರ ಎಂದು ಸುದ್ದಿಯಾಗಿದ್ದ ಸಿನೆಮಾ ಕಿನಾರೆ. ಆದರೆ ಸಿನೆಮಾ ನೋಡಿದಾಗ ಇದು ಅದೇ ರೀತಿಯ ಮತ್ತೊಂದು ಘಟನೆಯಿಂದ ಬಾಧಿತಗೊಂಡವರ ಕತೆ ಎನ್ನುವುದು ಅರಿವಾಗುತ್ತದೆ. ಆದರೆ ಚಿತ್ರದಲ್ಲಿ ಅದರ ಪರಿಹಾರದ ಬಗ್ಗೆ ಚಿತ್ರಿಸಲಾಗಿದೆಯಾ ಎಂದರೆ ಇಲ್ಲವೆಂದೇ ಹೇಳಬೇಕು.
ವಿಕಲಚೇತನ ಜೋಡಿಗಳ ಪ್ರೇಮ ಕತೆಗೆ ಒತ್ತು ನೀಡಿರುವ ಚಿತ್ರ ಇದು. ಹಾಗಂತ ಅವರ ಪ್ರೀತಿಯಲ್ಲಿನ ವಿಭಿನ್ನತೆಯನ್ನೋ ವಿಶಿಷ್ಟತೆಯನ್ನೋ ಇಲ್ಲಿ ಮನ ಮುಟ್ಟುವಂತೆ ತೋರಿಸಲಾಗಿಲ್ಲ. ಹಾಗಾಗಿಯೇ ಇದೊಂದು ಮನಮುಟ್ಟದ ಪ್ರೇಮಕತೆಯಾಗಿಯೇ ಉಳಿಯುತ್ತದೆ.
ಚಿತ್ರದಲ್ಲಿ ಕರಾವಳಿಯ ಒಂದು ಊರಿನ ಚಿತ್ರಣವಿದೆ. ಅಲ್ಲಿರುವ ಬಹುತೇಕ ಯುವ ಸಮುದಾಯಕ್ಕೆ ಬುದ್ಧಿ ಬೆಳೆದಿರುವುದಿಲ್ಲ. ಅದಕ್ಕೆ ಎರಡು ದಶಕಗಳ ಹಿಂದೆ ಗರ್ಭಿಣಿಯರಿಗೆ ನೀಡಲಾದ ಔಷಧ ಎನ್ನುವುದು ವೈಜ್ಞಾನಿಕ ಕಾರಣವಾಗಿರುತ್ತದೆ. ಅದೇ ಸಮಯ ಊರಿನ ಪುರೋಹಿತ ಅದಕ್ಕೆ ದೇವಿಯ ಶಾಪವೇ ಕಾರಣ ಎಂದು ಹೇಳುತ್ತಿರುತ್ತಾನೆ. ಆ ಹಳ್ಳಿಯ ಮಂದಿ ಪುರೋಹಿತನ ಮಾತನ್ನು ನಂಬಿಕೊಂಡಿರುತ್ತಾರೆ. ಆದರೆ ಇದೀಗ ಹಳ್ಳಿಗೆ ಬರುವ ವೈದ್ಯರೊಬ್ಬರು ಈ ಬುದ್ಧಿ ಬೆಳೆಯದ ಮಕ್ಕಳನ್ನು ಸಾಮಾನ್ಯರಂತೆ ಬದಲಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಂದಷ್ಟು ವಿರೋಧಗಳ ನಡುವೆಯೂ ಅಂಥ ಯುವ ಸಮುದಾಯವನ್ನು ಒಂದಾಗಿ ಸೇರಿಸಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಯುತ್ತದೆ. ಹಾಗೆ ಚಿಕಿತ್ಸೆಗೆಂದು ಸೇರಿಕೊಂಡವರಲ್ಲಿ ರಂಗ ಎಂಬ ಯುವಕ ಮತ್ತು ಮೀರಾ ಎಂಬ ಯುವತಿ ಪರಸ್ಪರ ಆತ್ಮೀಯರಾಗುತ್ತಾರೆ. ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಅಂಶ.
ವೈದ್ಯರ ವಿಶೇಷ ಚಿಕಿತ್ಸೆಯ ಬಗ್ಗೆ ಹೇಳಲಾಗಿದ್ದರೂ ಅದನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ನಿರ್ದೇಶಕ ದೇವರಾಜ ಪೂಜಾರಿ ಎಡವಿದ್ದಾರೆ. ರಂಗನಾಗಿ ನವನಟ ಸತೀಶ್ ರಾಜ್ ಆಕರ್ಷಕ ನಟನೆ ನೀಡಿದ್ದಾರೆ. ಅವರ ಪೆದ್ದುತನದ ವ್ಯಕ್ತಪಡಿಸುವಿಕೆಯಲ್ಲಿ ಕಣ್ಣುಗಳು ಕೂಡ ನಿಷ್ಕಲ್ಮಶ ಭಾವ ಸೂಸುತ್ತವೆ. ಮೀರಾ ಪಾತ್ರದಲ್ಲಿ ನವನಟಿ ಗೌತಮಿ ಕೂಡ ಸರಳ ಸುಂದರಿಯಾಗಿ ಗಮನ ಸೆಳೆಯುತ್ತಾರೆ. ರಂಗನ ತಾಯಿಯ ಪಾತ್ರದಲ್ಲಿ ವೀಣಾ ಸುಂದರ್ ಎಂದಿನಂತೆ ಆತ್ಮೀಯರಾಗುತ್ತಾರೆ. ವೈದ್ಯರಾಗಿ ಸಿಹಿಕಹಿ ಚಂದ್ರು ಅಪರೂಪದಲ್ಲಿ ಗಂಭೀರ ಪಾತ್ರಕ್ಕೆ ಜೀವ ನೀಡಿದ್ದಾರೆ. ಪುರೋಹಿತನ ಖಳ ಛಾಯೆಗೆ ಹಿರಿಯ ನಟ ದತ್ತಣ್ಣ ಅದ್ಭುತ ಭಾವ ವಿನಿಮಯ ನಡೆಸಿದ್ದಾರೆ. ಜಾನಿ ಎಂಬ ಯುವಕನ ಪಾತ್ರದಲ್ಲಿ ಶಮಂತ್ ಶೆಟ್ಟಿ ಎಂಬ ಯುವ ಪ್ರತಿಭೆ ಭರವಸೆ ಮೂಡಿಸುವ ನಟನೆ ನೀಡಿದ್ದಾರೆ. ದಿನೇಶ್ ಮಂಗಳೂರು ಅವರ ಪಾತ್ರಕ್ಕೆ ಸರಿಯಾದ ಚೌಕಟ್ಟುಗಳಿಲ್ಲ. ಒಟ್ಟು ಚಿತ್ರ ಕೂಡ ಒಂದು ತಾರ್ಕಿಕ ಅಂತ್ಯ ಕಾಣುವಲ್ಲಿ ಸೋಲುತ್ತದೆ. ಹಾಗಾಗಿ ಚಿತ್ರದ ಆಶಯ ಏನು ಎನ್ನುವುದು ಕೊನೆಗೂ ವ್ಯಕ್ತವಾಗುವುದೇ ಇಲ್ಲ. ಆದರೆ ಹೊಸತನದ ಪ್ರಾಮಾಣಿಕ ಪ್ರಯತ್ನ ನಡೆದಿರುವುದನ್ನು ಮಾತ್ರ ಒಪ್ಪಿಕೊಳ್ಳಲೇಬೇಕು. ಸಾಮಾನ್ಯವಾಗಿ ಶ್ರೇಷ್ಠ ನಿರ್ದೇಶಕರು ಎನಿಸಿಕೊಂಡವರೇ ವಿಕಲಚೇತನ ಪಾತ್ರಗಳನ್ನು ಹಾಸ್ಯಕ್ಕೆ ಸೀಮಿತಗೊಳಿಸುವಾಗ ಅವರನ್ನೇ ಪ್ರಧಾನ ಪಾತ್ರಗಳಾಗಿ ಆರಿಸಿಕೊಂಡ ನಿರ್ದೇಶಕರ ಸಾಹಸ ಶ್ಲಾಘನೀಯ.
ಚಿತ್ರವನ್ನು ಆರಂಭದಿಂದ ಕೊನೆಯತನಕ ನಯನ ಮನೋ ಹರಗೊಳಿಸುವಲ್ಲಿ ಛಾಯಾ ಗ್ರಾಹಕ ಅಭಿಷೇಕ್ ಕಾಸರಗೋಡು ಅವರ ಪಾತ್ರ ಪ್ರಮುಖವಾಗಿದೆ. ಆದರೆ ಕೆಲವೊಮ್ಮೆ ಏರಿಯಲ್ ಶಾಟ್ ಮತ್ತು ಹಿಂಬದಿಯ ಚಿತ್ರೀಕರಣ ಕೂಡ ಆ ದೃಶ್ಯಗಳಲ್ಲಿ ಅನಗತ್ಯವೇನೋ ಎಂದು ಅನಿಸದಿರದು. ಒಟ್ಟಿನಲ್ಲಿ ಕಿನಾರೆಯ ಮಂದಿ ಹೊಸ ಪ್ರಯೋಗಕ್ಕೆ ಹೊರಟಿದ್ದಾರೆ ಎನ್ನುವುದನ್ನು ಚಿತ್ರ ಸಾಬೀತುಗೊಳಿಸಿದೆ.

ತಾರಾಗಣ: ಸತೀಶ್ ರಾಜ್, ಗೌತಮಿ, ಸಿಹಿಕಹಿಚಂದ್ರು, ವೀಣಾ ಸುಂದರ್
ನಿರ್ದೇಶನ: ದೇವರಾಜ್ ಪೂಜಾರಿ
ನಿರ್ಮಾಣ: ರೆಡ್ ಆ್ಯಪಲ್ ಮೂವೀಸ್

Writer - ಶಶಿ

contributor

Editor - ಶಶಿ

contributor

Similar News