ರೊಹಿಂಗ್ಯಾಗಳ ವಾಪಸಾತಿ ಅಂತರ್ರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ವಿಶ್ವಸಂಸ್ಥೆ
ಹೊಸದಿಲ್ಲಿ,ಅ.3: ರೊಹಿಂಗ್ಯಾಗಳನ್ನು ಮ್ಯಾನ್ಮಾರ್ಗೆ ಮರಳಿ ಕಳುಹಿಸುವುದು ಅಂತರ್ರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ವಿಶ್ವಸಂಸ್ಥೆಯ ತಜ್ಞರು ಬುಧವಾರ ಅಭಿಪ್ರಾಯಿಸಿದ್ದಾರೆ.
ಭಾರತ ಸರಕಾರ ಏಳು ರೊಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್ಗೆ ವಾಪಸ್ ಕಳುಹಿಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಈ ಹೇಳಿಕೆ ನೀಡಿದೆ. ರೊಹಿಂಗ್ಯಾಗಳ ಭದ್ರತಾ ಅಗತ್ಯತೆಗಳನ್ನು ಪರಿಶೀಲಿಸಲು ಮತ್ತು ಅವರ ಹಕ್ಕಿನ ಕುರಿತು ಸರಿಯಾದ ಮಾಹಿತಿಯನ್ನು ನೀಡಲು ತಮ್ಮಲ್ಲಿರುವ ರೊಹಿಂಗ್ಯಾ ಮುಸ್ಲಿಮರ ಬಗ್ಗೆ ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಗೆ ಸೂಚಿಸುವ ಕುರಿತು ಭಾರತ ಭಾದ್ಯತೆಯನ್ನು ಹೊಂದಿದೆ ಎಂದು ತಜ್ಞರು ತಿಳಿಸಿದ್ದಾರೆ.
ಬುಧವಾರದಂದು ಏಳು ರೊಹಿಂಗ್ಯಾ ಮುಸ್ಲಿಮರನ್ನು ಜೈಲಿನಿಂದ ಮಣಿಪುರದ ಮೊರೆಹ್ ಪಟ್ಟಣಕ್ಕೆ ಬಸ್ನಲ್ಲಿ ಕರೆದೊಯ್ಯಲಾಗಿತ್ತು. ಪೊಲೀಸರ ಪ್ರಕಾರ, ಇವರನ್ನು ಅಕ್ರಮವಾಗಿ ಭಾರತ ಪ್ರವೇಶಿಸಿದ ಆರೋಪದಲ್ಲಿ 2012ರಲ್ಲಿ ಬಂಧಿಸಿ ಅಸ್ಸಾಂನ ಜೈಲಿನಲ್ಲಿಡಲಾಗಿತ್ತು. ಗುರುವಾರದಂದು ಇವರನ್ನು ಮ್ಯಾನ್ಮಾರ್ ಗಡಿಭದ್ರತಾ ಪಡೆಗೆ ಒಪ್ಪಿಸಲಾಗುವುದು. ಇವರ ಪ್ರಯಾಣಕ್ಕಾಗಿ ಭಾರತವು ಮಣಿಪುರ ಸರಕಾರದಿಂದ ಅನುಮತಿಯನ್ನು ಪಡೆದುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.