ವಿಲನ್ ರಾಜ್‌ಶೆಟ್ಟಿ

Update: 2018-10-06 15:14 GMT

‘ಒಂದು ಮೊಟ್ಟೆಯ ಕಥೆ’ಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮನೆಮಾತಾದ ನಟ-ನಿರ್ದೇಶಕ ರಾಜ್‌ಶೆಟ್ಟಿ ಇದೀಗ ವಿಲನ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹೌದು. ಚಂಪಾ ಪಿ. ಶೆಟ್ಟಿ ನಿರ್ದೇಶನದ ‘‘ಅಮ್ಮಾಚಿ ಎಂಬ ನೆನಪು’’ ಚಿತ್ರದಲ್ಲಿ ಅವರು ವೆಂಕಪ್ಪಯ್ಯ ಎಂಬ ಅನಕ್ಷರಸ್ಥ ಡಾನ್ ಪಾತ್ರದಲ್ಲಿ ನಟಿಸಿದ್ದಾರೆ.

ಕನ್ನಡದ ಖ್ಯಾತ ಬರಹಗಾರ್ತಿ ವೈದೇಹಿ ಅವರ ಮೂರು ಕಥೆಗಳನ್ನು ಸಂಯೋಜಿಸಿ ಹೆಣೆಯಲಾದ ಅಕ್ಕು ನಾಟಕವನ್ನು ಆಧರಿಸಿ ‘‘ಅಮ್ಮಾಚಿ ಎಂಬ ನೆನಪು’’ ತಯಾರಾಗುತ್ತಿದೆ.

ರಂಗ ಕಲಾವಿದೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತೆಯಾಗಿರುವ ಚಂಪಾ ಪಿ.ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಕರಾವಳಿ ಕರ್ನಾಟಕದ ಪ್ರತಿಭಾವಂತ ಉದಯೋನ್ಮುಖ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಅಮ್ಮಾಚಿ ಎಂಬ ನೆನಪು ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ತಾನು ಕುಂದಾಪುರ ಹಾಗೂ ಮಂಗಳೂರು ಕನ್ನಡದ ಸವಿಯನ್ನು ಉಣಬಡಿಸುವುದಾಗಿ ನಿರ್ದೇಶಕಿ ಚಂಪಾ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ವೈಜಯಂತಿ ಅಡಿಗ, ಕಥಾನಾಯಕಿ ಅಮ್ಮಾಚಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಪ್ರಕಾಶ್ ಪಿ.ಶೆಟ್ಟಿ, ಗೀತಾ ಸುರತ್ಕಲ್, ವಂದನಾ ಆಹಗೂ ಇನಾಂದಾರ್ ಚಿತ್ರದ ನಿರ್ಮಾಪಕರು. ನವೀನ್ ಕುಮಾರ್ ಕ್ಯಾಮರಾ ಹಿಡಿದಿದ್ದು, ಕಾಶಿನಾಥ್ ಪಟ್ಟಾರ್ ಸಂಗೀತ ಸಂಯೋಜಿಸಿದ್ದಾರೆ.

ವಿಭಿನ್ನ ಶೈಲಿಯ ಕಥಾವಸ್ತುವನ್ನು ಹೊಂದಿರುವ ಅಮ್ಮಾಚಿ ಎಂಬ ನೆನಪು ಈಗಾಗಲೇ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರವು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News