ಇಬ್ಬರು ಪೊಲೀಸರ ಗುಂಡಿಕ್ಕಿ ಹತ್ಯೆ

Update: 2018-10-07 14:54 GMT

ಜೈಪುರ, ಅ.7: ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ತಮ್ಮ ವಾಹನದಲ್ಲಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳನ್ನು ತಡೆಯಲು ಮುಂದಾದ ಇಬ್ಬರು ಪೊಲೀಸರು ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಬಲಿಯಾದ ಘಟನೆ ರಾಜಸ್ತಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಫತೇಪುರ್ ಸದರ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಮುಕೇಶ್ ಕನುಂಗೊ ಮತ್ತು ಕಾನ್‌ಸ್ಟೇಬಲ್ ರಾಮ್‌ಪ್ರಕಾಶ್ ಮೃತಪಟ್ಟವರು. ಬೇಸ್ವಾ ಗ್ರಾಮದಲ್ಲಿ ದೈನಂದಿನ ವಾಹನ ತಪಾಸಣೆ ಕಾರ್ಯ ನಡೆಸುತ್ತಿದ್ದಾಗ ಕುಖ್ಯಾತ ಕ್ರಿಮಿನಲ್ ಅಜಯ್ ಚೌಧರಿ ಹಾಗೂ ಆತನ ನಾಲ್ವರು ಸಹಚರರಿದ್ದ ಎಸ್‌ಯುವಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಮೊದಲು ವಾಹನದ ವೇಗ ನಿಧಾನಿಸಿದ ದುಷ್ಕರ್ಮಿಗಳು ಬಳಿಕ ಒಮ್ಮಿಂದೊಮ್ಮೆಗೇ ಬ್ಯಾರಿಕೇಡಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾರೆ. ಈ ಸಂದರ್ಭ ಪೊಲೀಸರು ಅವರನ್ನು ಬೆನ್ನಟ್ಟಿದ್ದಾರೆ. ಆಗ ವಾಹನದಲ್ಲಿದ್ದವರು ಪೊಲೀಸರತ್ತ ಹಾರಿಸಿದ ಗುಂಡಿಗೆ ಇಬ್ಬರು ಪೊಲೀಸರು ಬಲಿಯಾಗಿದ್ದಾರೆ . ದುಷ್ಕರ್ಮಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಸಿಕಾರ್ ಎಡಿಷನಲ್ ಎಸ್ಪಿ ತೇಜ್‌ಪಾಲ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News