ಸರಕಾರಿ ಅಧಿಕಾರಿಗಳನ್ನು ತೆಗಳಿದ ಅದಾನಿ: ಆರೋಪ; ದೂರು ದಾಖಲು
ಡೆಹ್ರಾಡೂನ್, ಅ.14: ಮುಖ್ಯಮಂತ್ರಿಗಳ ಎದುರು ಸರಕಾರಿ ಅಧಿಕಾರಿಗಳನ್ನು ತೆಗಳಿದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಉತ್ತರಾಖಂಡ ರಾಜ್ಯ ಮಾಹಿತಿ ಇಲಾಖೆ ದೂರು ದಾಖಲಿಸಿಕೊಂಡಿದೆ.
ಸೆ.26ರಂದು ಉತ್ತರಾಖಂಡದ ಮುಖ್ಯಮಂತ್ರಿ ಟಿ.ಎಸ್.ರಾವತ್ ಅವರ ನಿವಾಸಕ್ಕೆ ಆಗಮಿಸಿದ್ದ ಉದ್ಯಮಿ ಗೌತಮ್ ಅದಾನಿ, ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಅವಕಾಶಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಚರ್ಚೆಯ ಸಂದರ್ಭ ಅದಾನಿ, ಸರಕಾರಿ ಅಧಿಕಾರಿಗಳನ್ನು ತೆಗಳಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಮೂಲಭೂತ ಸೌಕರ್ಯ ಕಳಪೆಯಾಗಿದ್ದು ಇದರಿಂದ ಹೂಡಿಕೆದಾರರು ಹಿಂಜರಿಯುತ್ತಿದ್ದಾರೆ. ಸರಕಾರಿ ಅಧಿಕಾರಿಗಳ ಕಾರ್ಯನಿರ್ವಹಣೆ ಸುಧಾರಿಸಬೇಕು ಎಂದು ಅದಾನಿ ಮುಖ್ಯಮಂತ್ರಿಗಳಿಗೆ ಹೇಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಇಲಾಖೆ ದೂರು ದಾಖಲಿಸಿದ್ದು ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.