ಮಧ್ಯಪ್ರದೇಶದ ಹಾಲಿ 78 ಶಾಸಕರಿಗೆ ಟಿಕೆಟ್ ನೀಡದಂತೆ ಬಿಜೆಪಿಗೆ ಆರೆಸ್ಸೆಸ್ ಸಲಹೆ
Update: 2018-10-18 07:19 GMT
ಭೋಪಾಲ್, ಅ.18: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಆರು ವಾರಗಳಷ್ಟೇ ಬಾಕಿ ಇರುವಾಗ ಆರೆಸ್ಸೆಸ್ ಸಂಗ್ರಹಿಸಿರುವ ಮಾಹಿತಿಯಿಂದ ಬಿಜೆಪಿ ಚಿಂತಿತವಾಗಿದೆ.
ಹಾಲಿ 78 ಶಾಸಕರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಸಲಹೆ ನೀಡಿರುವ ಆರೆಸ್ಸೆಸ್, ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಬುಧ್ನಿ ಬದಲಿಗೆ ಗೋವಿಂದಪುರ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಕಿವಿ ಮಾತು ಹೇಳಿದೆ.
ಕಳಪೆ ನಿರ್ವಹಣೆ ತೋರಿರುವ 78 ಶಾಸಕರಿಗೆ ಬಿಜೆಪಿಯ ಟಿಕೆಟ್ ನೀಡಬಾರದು ಎಂದು ಸಂಘ ಪರಿವಾರ ಮಧ್ಯಪ್ರದೇಶ ಆಡಳಿತಾರೂಢ ಪಕ್ಷಕ್ಕೆ ಮನವಿ ಮಾಡಿದೆ. ಈ ವಿಚಾರ ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯಲ್ಲಿ ಚರ್ಚೆಗೆ ಬಂದಿದೆ. ಕೇವಲ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ಪಕ್ಷದ ರಾಜ್ಯ ಘಟಕದ ಪ್ರಮುಖರು ಸಮ್ಮತಿಸಿದ್ದಾರೆ. ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವ ತನಕ ಅಭ್ಯರ್ಥಿ(ಪುರುಷ/ಮಹಿಳೆ)ಯನ್ನು ಕಳಂಕಿತ ಎಂದು ಕರೆಯಬಾರದು ಎಂದು ಪಕ್ಷದ ಹೈಕಮಾಂಡ್ ಆದೇಶಿಸಿದೆ ಎಂದು ವರದಿಯಾಗಿದೆ.