ಅಮೃತಸರ ರೈಲು ದುರಂತ: ದಸರಾ ಕಾರ್ಯಕ್ರಮ ಆಯೋಜಕರು ನಾಪತ್ತೆ
Update: 2018-10-21 14:39 GMT
ಅಮೃತಸರ, ಅ. 21: ದಸರಾ ಕಾರ್ಯಕ್ರಮದ ಪ್ರಮುಖ ಆಯೋಜಕರಾಗಿರುವ ನಗರಾಡಳಿತದ ಕೌನ್ಸಿಲರ್ ವಿಜಯ್ ಮದನ್ ಹಾಗೂ ಅವರ ಪುತ್ರ ಸೌರಭ್ ಮದನ್ ಮಿಥು ತಮ್ಮ ಕುಟುಂಬದ ಸದಸ್ಯರೊಂದಿಗೆ ನಾಪತ್ತೆಯಾಗಿದ್ದಾರೆ. ತಾವು ‘ಆಕ್ಷೇಪ ರಹಿತ ಪ್ರಮಾಣ ಪತ್ರ’ ನೀಡಿರುವುದಾಗಿ ಪೊಲೀಸರು ಒಪ್ಪಿಕೊಂಡಿದ್ದಾರೆ. ಆದರೆ, ನಗರಾಡಳಿತದ ಪರವಾನಿಗೆಯನ್ನು ಕೂಡ ತೆಗೆದುಕೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ.
ದುರಂತದಿಂದ ಆಕ್ರೋಶಿತರಾದ ಕೆಲವರು ವಿಜಯ್ ಮದನ್ ಅವರ ನಿವಾಸದ ಮೇಲೆ ಶನಿವಾರ ದಾಳಿ ಮಾಡಿದ್ದಾರೆ. ಅವರ ಮನೆಯ ಕಿಟಕಿ ಗಾಜು ಒಡಿದಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮದನ್ ಕುಟುಂಬದ ಸದಸ್ಯರು ಬಹಿರಂಗಪಡಿಸದ ಸ್ಥಳಕ್ಕೆ ತೆರಳಿದ್ದಾರೆ. ಮೊಬೈಲ್ ಫೋನ್ ಸ್ವಿಚ್ಆಫ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಹಳಿ ಸಮೀಪ ದಸರಾ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಆಯೋಜಕರಾಗಲಿ, ಸ್ಥಳೀಯಾಡಳಿತವಾಗಲಿ ನಮಗೆ ಮಾಹಿತಿ ನೀಡಿಲ್ಲ ಎಂದು ಭಾರತೀಯ ರೈಲ್ವೆ ಹೇಳಿದೆ.