ಒಳಚರಂಡಿ ಸ್ವಚ್ಛಗೊಳಿಸುವ ವೇಳೆ ವಿಷಾನಿಲ ಸೇವಿಸಿ ಕಾರ್ಮಿಕ ಮೃತ್ಯು

Update: 2018-10-22 17:44 GMT

ಹೊಸದಿಲ್ಲಿ, ಅ. 21: ವಾಯುವ್ಯ ದಿಲ್ಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ದಿಲ್ಲಿ ಜಲ ಮಂಡಳಿಯ ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ 32 ವರ್ಷದ ಕಾರ್ಮಿಕನೋರ್ವ ಮೃತಪಟ್ಟಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು ಬಿಹಾರದ ಕಥಿಹಾರ್‌ನ ನಿವಾಸಿ ದೂಮನ್ ರೇ ಎಂದು ಗುರುತಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಅಧೀಕ್ಷಕ (ವಾಯುವ್ಯ) ಎ.ಕೆ. ಲಾಲ್ ತಿಳಿಸಿದ್ದಾರೆ.

ಒಳಚರಂಡಿಯಲ್ಲಿ ವಿಷಾನಿಲ ಸೇವನೆಯಿಂದ ಅಸ್ವಸ್ಥಗೊಂಡ ರೇ ಅವರನ್ನು ಶಾಲಿಮಾರ್ ಬಾಗ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.

ಬೆಳಗ್ಗೆ 7.30ರ ಹೊತ್ತಿಗೆ ಪೊಲೀಸರಿಗೆ ಘಟನೆ ಬಗ್ಗೆ ತಿಳಿಯಿತು. ಜಹಾಂಗಿರ್‌ಪುರಿಯಲ್ಲಿರುವ ದಿಲ್ಲಿ ಜಲ ಮಂಡಳಿಯ ಪಂಪ್ ಹೌಸ್‌ನಿಂದ ರೇ ಅವರ ಮೃತದೇಹವನ್ನು ತರಲಾಗುವುದು ಎಂದು ತಿಳಿಸಲಾಗಿತ್ತು ಎಂದು ಲಾಲ್ ಹೇಳಿದ್ದಾರೆ.

ತನಿಖೆ ವೇಳೆ ರೇ ಅವರ ಇತರ ಮೂವರೊಂದಿಗೆ ಒಳಚರಂಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ದುುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂತು.

 ಜಹಾಂಗಿರ್‌ಪುರಿ ಒಳಚರಂಡಿಯ ಪುನರ್ ನವೀಕರಣ ಹಾಗೂ ದುರಸ್ಥಿಗೆ ಕೆಕೆ ಸ್ಪನ್ ಇಂಡಿಯಾ ಲಿಮಿಟೆಡ್‌ಗೆ ದಿಲ್ಲಿ ಜಲ ಮಂಡಳಿ (ಡಿಜೆಬಿ) ಗುತ್ತಿಗೆ ನೀಡಿತ್ತು. ಇಂದು ಬೆಳಗ್ಗೆ ರೇ ಅವರು ಒಳಚರರಂಡಿಯ ಕವಾಟ ತೆರೆದು ಒಳಗೆ ಇಳಿದಿದ್ದರು. ಚರಂಡಿ ಒಳಗೆ ವಿಷಾನಿಲ ಸೇವಿಸಿ ಮೃತಪಟ್ಟಿದ್ದರು ಎಂದು ಲಾಲ್ ತಿಳಿಸಿದ್ದಾರೆ.

  ಈ ಘಟನೆ ಬಗ್ಗೆ ಡಿಜೆಬಿ ಕ್ಷಮೆ ಕೋರುತ್ತದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದಿಲ್ಲಿ ಜಲ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News