ಇಂಡಿಯಾ ಟುಡೇ ಕಾರ್ಯನಿರ್ವಾಹಕ ಸಂಪಾದಕ ಗೌರವ್ ಸಾವಂತ್ ವಿರುದ್ಧ ‘ಮೀ ಟೂ’ ಆರೋಪ

Update: 2018-11-12 16:39 GMT

ಹೊಸದಿಲ್ಲಿ, ನ.12: ‘ಇಂಡಿಯಾ ಟುಡೇ’ಯ ಕಾರ್ಯನಿರ್ವಾಹಕ ಸಂಪಾದಕ ಗೌರವ್ ಸಾವಂತ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಪತ್ರಕರ್ತೆ ವಿದ್ಯಾ ಕೃಷ್ಣನ್ ಆರೋಪಿಸಿದ್ದಾರೆ. 2000ರಲ್ಲಿ ತಾನು ಸಾವಂತ್ ಅವರ ಸಹೋದ್ಯೋಗಿಯಾಗಿದ್ದೆ. 2003ರಲ್ಲಿ ಪಯೋನೀರ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪಂಜಾಬ್‌ನ ಬಿಯಾಸ್‌ಗೆ ಪತ್ರಿಕೆಯ ಕಾರ್ಯನಿಮಿತ್ತ ಪ್ರವಾಸ ಹೋಗಿದ್ದೆ. ಈ ಸಂದರ್ಭ ಸಾವಂತ್ ಸಹಿತ ಹಲವು ಹಿರಿಯ ಸಹೋದ್ಯೋಗಿಗಳು ಜತೆಗಿದ್ದರು. ಪ್ರವಾಸದ ಒಮ್ಮೆ ತನ್ನ ಹೆಗಲ ಮೇಲೆ ಸಾವಂತ್ ತಮ್ಮ ಕೈಇಟ್ಟಿದ್ದರು. ಬಳಿಕ ಕೈಯನ್ನು ನಿಧಾನವಾಗಿ ಕೆಳಗಿಳಿಸಿದಾಗ ತಾನು ಎದ್ದುಹೋಗಿದ್ದೆ. ಹಿರಿಯ ಸಹೋದ್ಯೋಗಿಯಾದ ಕಾರಣ ತನಗೆ ಪ್ರತಿಭಟಿಸಲು ಆಗಲಿಲ್ಲ. ಅದೇ ದಿನ ರಾತ್ರಿ ತನ್ನ ಮೊಬೈಲ್‌ಗೆ ಸಂದೇಶ ಕಳುಹಿಸಿದ ಸಾವಂತ್, ನಿನ್ನೊಂದಿಗೆ ಬಾತ್‌ಟಬ್‌ನಲ್ಲಿ ಕಳೆಯುವ ಆಸೆಯಿದೆ ಎಂದು ತಿಳಿಸಿದ್ದರು. ಆಗ ತಾನು ನಯವಾಗಿ ತಿರಸ್ಕರಿಸಿದ್ದೆ.

 ಇದಾದ ಕೆಲ ನಿಮಿಷಗಳಲ್ಲೇ ತನ್ನ ಕೋಣೆಯ ಬಾಗಿಲನ್ನು ಬಡಿಯುವ ಸದ್ದು ಕೇಳಿಸಿತು. ಬಾಗಿಲು ತೆಗೆದಾಗ ಗೌರವ್ ಸಾವಂತ್ ಕೋಣೆಯ ಒಳಗೆ ನುಗ್ಗಿದರು. ಕೆಲ ಹೊತ್ತು ತನ್ನೊಂದಿಗೆ ಮಾತನಾಡಿದ ಬಳಿಕ ಅವರು ಪ್ಯಾಂಟ್‌ನ ಜಿಪ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದರು. ಆಗ ಆಘಾತದಿಂದ ಜೋರಾಗಿ ಕಿರುಚಿದೆ. ಇದನ್ನು ಕಂಡು ಸಾವಂತ್ ತಕ್ಷಣ ಹೊರಗೋಡಿದರು ಎಂದು ವಿದ್ಯಾ ಕೃಷ್ಣನ್ ಹೇಳಿದ್ದಾರೆ. ಈ ಆರೋಪಕ್ಕೆ ಸಾವಂತ್ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News