ಬಯಲು ಬಹಿರ್ದೆಸೆ ಬಹಿಷ್ಕರಿಸಿ

Update: 2018-11-18 18:39 GMT

ಇತ್ತೀಚೆಗೆ ನಮ್ಮಳಗೆ ನಾವೇ ಒಂದು ಪ್ರಶ್ನೆಯನ್ನು ಕೇಳಿಕೊಂಡು ಅದಕ್ಕೆ ಉತ್ತರ ಸಿಕ್ಕಿದಾಗ ನಮ್ಮ ಬದುಕು ನಮಗೆ ಅರಿವಿಲ್ಲದಂತೆ ‘ಹೇಯಕರ’ ಎನಿಸಿತು. ಅದು ನಮ್ಮನ್ನು ಅದೆಂತಹ ವಾತಾವರಣದಲ್ಲಿ ಕಟ್ಟಿಹಾಕಿಬಿಟ್ಟಿದೆಯೆಂದರೆ ಅಂತಹದೊಂದು ಪದವನ್ನು ಮುಜುಗರ ಬಿಟ್ಟು ಸಾರ್ವಜನಿಕವಾಗಿ ಬಳಸಲು ನಮಗೆ ‘ಹೇಸಿಗೆ ‘ಎನಿಸುತ್ತದೆ. ಆದರೂ ನಮ್ಮ ಮುಂದಿನ ಪೀಳಿಗೆಯ ‘ಭವ್ಯ ಭವಿಷ್ಯಕ್ಕಾಗಿ, ಪ್ರತಿಯೊಂದು ಕುಟುಂಬದ ಹೆಣ್ಣು ಮಗಳ ‘ಆತ್ಮಗೌರವಕ್ಕಾಗಿ ಆ ಮುಜುಗರವನ್ನು ತೊರೆದು ನಾವೆಲ್ಲರೂ ಈ ಬಗ್ಗೆ ಬಹಿರಂಗವಾಗಿ ಮಾತನಾಡಬೇಕಿದೆ.

ಆ ಪ್ರಶ್ನೆ ಎಂದರೆ ತನ್ನ ‘ಮಲವನ್ನು ತಾನೇ ತಿಂದು ಬದುಕುವ ಜಗತ್ತಿನ ಏಕೈಕ ಪ್ರಾಣಿ ಯಾವುದು ಎಂದು ಕೇಳಿದರೆ , ನೀವು ನಾಯಿ,ಹಂದಿ ,ಇತ್ಯಾದಿ ಎಂದು ಉತ್ತರಿಸಬಹುದು ಆದರೆ ಅದಕ್ಕೆ ನಿಖರವಾದ ಉತ್ತರ ‘ಮಾನವ’. ಆಶ್ಚರ್ಯವಾಗುತ್ತಿದೆಯೇ? ಹಂದಿ ಮತ್ತು ನಾಯಿ ‘ಮನುಷ್ಯನ’ ಮಲವನ್ನು ತಿನ್ನುತ್ತದೆಯೇ ಹೊರತು ತನ್ನ ಮಲವನ್ನು ತಿನ್ನುವುದಿಲ್ಲ. ಆದರೆ ಮಾನವ ಬಯಲಿನಲ್ಲಿ ಮಲ ವಿಸರ್ಜನೆ ಮಾಡುವ ಪರಿಣಾಮ. ಗಾಳಿ, ನೀರು, ಮಣ್ಣು ಮತ್ತು ಆಹಾರದ ಮೂಲಕ ದಿನವೊಂದಕ್ಕೆ ಒಂದರಿಂದ ಒಂದೂವರೆ ಚಮಚ ಮಲವನ್ನು ತನ್ನ ಅರಿವಿಗೆ ಬಾರದಂತೆ ತಾನೇ ತಿನ್ನುತ್ತಿದ್ದಾನೆ. ಒಂದು ನೊಣ ಒಮ್ಮೆ ಮಲದ ಮೇಲೆ ಕುಳಿತರೆ ಆರು ಮಿಲಿಯಷ್ಟು ಮಲವನ್ನು ನಮ್ಮ ಮನೆಗೆ ರವಾನೆ ಮಾಡುತ್ತದೆ (ಸಿ.ಎಲ್.ಟಿ.ಎಸ್ ಸಮೀಕ್ಷೆ ಪ್ರಕಾರ). ಅದು ನಮ್ಮ ದೇಹವನ್ನು ಸೇರುವ ಎಲ್ಲಾ ವಸ್ತುಗಳ ಮೇಲೂ ಪಾದಾರ್ಪಣೆ ಮಾಡುತ್ತದೆ. ಐಗ ನೆನಪಿಸಿಕೊಳ್ಳಿ; ನೊಣವಿಲ್ಲದ ಮನೆ ಯಾವುದಾದರೂ ಇದೆಯಾ?

ಹಾಗೆ ವಿಶ್ವ ಮಕ್ಕಳ ಸಂರಕ್ಷಣಾ ಸಂಸ್ಥೆಯು ಇನ್ನೊಂದು ಪ್ರಶ್ನೆಯನ್ನು ಕೇಳುತ್ತದೆ. ಅದೆಂದರೆ ಜಗತ್ತಿನಲ್ಲಿ ಅತಿದೊಡ್ಡ ಭಯೋತ್ಪಾದನೆ ಯಾವುದು? ನೀವು ದೊಡ್ಡ, ದೊಡ್ಡ ಉಗ್ರಗಾಮಿ ಸಂಘಟನೆಗಳನ್ನು ಹೆಸರಿಸಲು ಪ್ರಯತ್ನಿಸಬಹುದು. ಅದರೆ ಜಗತ್ತಿನ, ಅದರಲ್ಲೂ ಭಾರತದ ಬಹುದೊಡ್ಡ ಭಯೋತ್ಪಾದನೆ ‘ಬಯಲು ಬಹಿರ್ದೆಸೆ. ಭಯೋತ್ಪಾದಕರ ಉಗ್ರ ಚಟುವಟಿಕೆಯಿಂದ ನಿರ್ದಿಷ್ಟ ಜನರು ಅಥವಾ ವೈರಿ ಗುಂಪು ತೊಂದರೆಗೆ ಒಳಗಾಗುತ್ತದೆ. ಆದರೆ ‘ಬಯಲು ಬಹಿರ್ದೆಸೆಯಿಂದ ಒಂದು ದಿನಕ್ಕೆ ಹತ್ತು ಸಾವಿರಕ್ಕಿಂತ ಹೆಚ್ಚು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಸುಮಾರು ಎಂಟು ನೂರು ಮಹಿಳೆಯರ ಗರ್ಭಪಾತ ಪ್ರಕರಣ ಸಂಭವಿಸುತ್ತಿದೆ. ಸುಮಾರು 430 ಮಂದಿ ಬಾಣಂತಿಯರ ಮಾರಣಹೋಮ ನಡೆಯುತ್ತಿದೆ. ಈ ಬೃಹತ್ ಪ್ರಮಾಣದ ಸಾವು ನೋವು ಬಯಲು ಬಹಿರ್ದೆಸೆಯಿಂದ ಸಂಭವಿಸುತ್ತಿದೆ. ಇದು ಅತ್ಯಂತ ಆಘಾತಕಾರಿ ಅಂಶ. ಇದು ಯಾವ ಭಯೋತ್ಪಾದನಾ ಸಂಘಟನೆಯೂ ತೆಗೆದುಕೊಳ್ಳಲಾರದಷ್ಟು ಬಲಿಯನ್ನು ತೆಗೆದುಕೊಳ್ಳುತ್ತಿದೆ.

ಬಯಲು ಬಹಿರ್ದೆಸೆ ವಿಚಾರದಲ್ಲಿ ಬೆಕ್ಕನ್ನು ನಮ್ಮ ಜನಪದರು ಅತ್ಯಂತ ಪ್ರಜ್ಞೆಯುಳ್ಳ ಪ್ರಾಣಿ ಎಂದು ಗುರುತಿಸಿದ್ದಾರೆ. ಇದು ಇಂದಿನ ವೈಜ್ಞಾನಿಕ ಯುಗದಲ್ಲಿ ಬದುಕುತ್ತಿರುವ ಮಾನವ ಬೆಕ್ಕಿಗಿಂತ ಪ್ರಜ್ಞಾಹೀನನಾಗಿದ್ದಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ‘ಬೆಕ್ಕು ಕಕ್ಕಸು ಮಾಡಿ ತನ್ನ ಕಕ್ಕಸ್ಸಿನ ಮೇಲೆ ತಾನೇ ಮಣ್ಣು ಮುಚ್ಚುತ್ತದೆ. ಮತ್ತೆ ಅದನ್ನು ‘ಮೂಸಿ’ ನೋಡುತ್ತದೆ. ಎಲ್ಲಿಯವರಗೆ ವಾಸನೆ ಕೊನೆಗೊಳ್ಳುತ್ತದೊ ಅಲ್ಲಿಯವರೆಗೂ ಮಣ್ಣನ್ನು ಮುಚ್ಚುತ್ತದೆ. ಅದರ ಅರ್ಥ ತನ್ನ ಕಕ್ಕಸಿನಿಂದ ಉಂಟಾಗುವ ಪ್ರಾಕೃತಿಕ ಹಾನಿಯನ್ನು ತಡೆಯುವುದೆ ಆಗಿದೆ. ಇಲ್ಲಿ ನಮಗೆ ಬೆಕ್ಕಿನ ಪ್ರಜ್ಞೆ ಮೂಡಬೇಕಿದೆ. ಒಬ್ಬ ಮನುಷ್ಯ ಒಂದು ವೇಳೆಗೆ ಕನಿಷ್ಠ 250 ಗ್ರಾಂ. ಮಲ ವಿಸರ್ಜನೆ ಮಾಡಿದರೆ ಅವನ ಜೀವಿತದ ಅವಧಿಯಲ್ಲಿ (60 ವರ್ಷಕ್ಕೆ) 7 ಸಾವಿರ ಕೆ.ಜಿ. ಎರಡು ಸಾವಿರ ಜನಸಂಖ್ಯೆ ವಾಸಿಸುವ ಒಂದು ಗ್ರಾಮದಲ್ಲಿ ಒಂದು ದಿನಕ್ಕೆ 500 ಕೆ.ಜಿ ಮಲ ಪ್ರಕೃತಿಯಲ್ಲಿ ಸೇರುವುದರಿಂದ ಉಂಟಾಗುವ ಹಾನಿಯನ್ನು ಊಹಿಸಲೂ ಸಾಧ್ಯವಿಲ್ಲ. (ಸಿ.ಎಲ್.ಟಿ.ಎಸ್ ಸಂಸ್ಥೆ ವರದಿಯಂತೆ) ಒಬ್ಬ ಮನುಷ್ಯ ಸತ್ತರೆ ಅವನ ಹೆಣಕ್ಕೊಂದು ಸಂಸ್ಕಾರವಿದೆ. ಅದು ಸುಡುವುದರ ಮೂಲಕವೋ ಇಲ್ಲ ಹೂಳುವುದರ ಮೂಲಕವೋ ನಡೆಯತ್ತದೆ. ಹಾಗೆಯೇ ಮಾನವನ ಮಲಕ್ಕೂ ಒಂದು ಸಂಸ್ಕಾರ ಇರಬೇಕಾಗಿದೆ. ಆ ನಿಟ್ಟಿನಲ್ಲಿ ಇನ್ನೂ ನಾವು ಚಿಂತಿಸುತ್ತಿಲ್ಲ. ಮನುಷ್ಯನ ‘ಅಸ್ಥಿ’ಗೆ ಒಂದು ಗೌರವ ವಿಸರ್ಜನೆಯಿದೆ ಹಾಗೆ ನಾವೂ ಕೂಡ ಮಲವನ್ನು ಗೌರವದಿಂದ ವಿಸರ್ಜಿಸಬೇಕಿದೆ. ಇಲ್ಲಿ ಗೌರವ ಇರಬೇಕಿರುವುದು ಮಲಕ್ಕಲ್ಲದಿದ್ದರೂ ಅದನ್ನು ವಿಸರ್ಜಿಸುವ ಸ್ಥಳಕ್ಕೆ.

ಪ್ರತಿ ಊರಿನ ಹೆಬ್ಬಾಗಿಲುಗಳು, ನಮ್ಮ ಊರಿನ ರಸ್ತೆಯ ಬದುಗಳು, ಕೆರೆಕಟ್ಟೆಯ ಮೈದಾನಗಳು, ಹಿತ್ತಿಲು ಮತ್ತು ಇಕ್ಕೆಲಗಳು, ಮನೆಯ ಅಕ್ಕಪಕ್ಕದ ಖಾಲಿ ನಿವೇಶನಗಳು, ಬೇಲಿ, ಗುತ್ತಿ, ಗಿಡಗಂಟಿಯ ಪೊದೆಗಳು ಗೌರವ ಮಲವಿಸರ್ಜನೆಗೆ ಪೂರಕ ಸ್ಥಳಗಳಲ್ಲ. ಇವು ಮಾನಹಾನಿಯ ಮೂಲಗಳು. ಅನಾದಿಕಾಲದಿಂದಲೂ ಬಯಲು ಬಹಿರ್ದೆಸೆ ನಮ್ಮ ಬದುಕಿನ ಸಂಸ್ಕೃತಿಯ ಒಂದು ಭಾಗವಾಗಿದೆ. ಯಾಕೆಂದರೆ, ಅದನ್ನು ನಾವು ಒಪ್ಪಿಕೊಂಡಿದ್ದೇವೆ.

 ನಾವು ಯಾವುದನ್ನು ಒಪ್ಪಿಕೊಳ್ಳುತ್ತೆವೋ ಅದು ನಮ್ಮ ಸಂಸ್ಕೃತಿಯಾಗಿ ಬಿಡುತ್ತದೆ. ಆದರೆ ಇಂದು ನಾವಿದನ್ನು ಕೆಟ್ಟ ಸಂಸ್ಕೃತಿ ಎಂದು ಪರಿಗಣಿಸಿ ಬಯಲು ಬಹಿರ್ದೆಸೆಯನ್ನು ಒಪ್ಪಿಕೊಳ್ಳದೆ ನಿಲ್ಲಿಸಿದರೆ ಆ ಸಂಸ್ಕೃತಿ ನಾಶವಾಗುತ್ತದೆ. ಆ ಮೂಲಕ ಈ ಸಂಸ್ಕೃತಿಯನ್ನು ಬಹಿಷ್ಕರಿ ಸಬೇಕಿದೆ. ಯಾಕೆಂದರೆ ಈ ಬಹಿಷ್ಕರಣದ ಹಿಂದೆ ಒಂದು ಹೆಣ್ಣಿನ ಸಹಿಸಲು ಆಸಾಧ್ಯವಾದ ನೋವುಗಳಿವೆ. ಮುಕ್ತವಾಗಿ ಹೇಳಿಕೊಳ್ಳಲಾಗದ ಆಕೆಯ ವೇದನೆಗಳಿವೆ. ನಮ್ಮ ಮನೆಯ ವಯಸ್ಸಿಗೆ ಬಂದ ಹೆಣ್ಣು ಮಗುವಿನ ಗೌರವ ಅಡಗಿದೆ, ನನ್ನ ತಾಯಿ, ತಂಗಿ, ಅಕ್ಕನ, ಅತ್ತಿಗೆಯ ಮಾನದ ಸಂರಕ್ಷಣೆಯೂ ಅಡಗಿದೆ. ಮುಂಜಾನೆಯ ಸೂರ್ಯ ಕಣ್ಣು ತೆರೆಯುವ ಮೊದಲು ಮುಸ್ಸಂಜೆ ಸೂರ್ಯ ಕಣ್ಣು ಮುಚ್ಚಿದ ನಂತರದ ಘಳಿಗೆಗಾಗಿ ಕಾದು ಕೂರುವ ಹೆಣ್ಣು ಮಕ್ಕಳ ರೋದನೆ ಅಡಗಿದೆ. ನಮ್ಮ ಮಕ್ಕಳ ಬದುಕು, ಆರೋಗ್ಯ ಅಡಗಿದೆ. ನಾವು ಬದಲಾಗಬೇಕಿದೆ ನಮ್ಮ ಮನೆಯ ಪ್ರತಿಯೊಬ್ಬ ಹೆಣ್ಣು ಮಗಳ ಗೌರವಕ್ಕಾಗಿ ಬದಲಾಗಬೇಕಿದೆ. ಆ ಮೂಲಕ ನಮ್ಮ ಊರಿನ, ನಮ್ಮ ದೇಶದ ಗೌರವಕ್ಕಾಗಿ ಬದಲಾಗಬೇಕಿದೆ. ಮುಂದಿನ ಪೀಳಿಗೆಗೆ ತಾಜಾ ಪ್ರಕೃತಿಯನ್ನು ಸಂರಕ್ಷಿಸಲು ನಾವು ಬದಲಾಗಬೇಕಿದೆ.

ಶೌಚಾಲಯ ನಿರ್ಮಾಣದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಚರ್ಚಿಸಿದಾಗ ಕೆಲವರು ಹಣದ ಸಮಸ್ಯೆ, ಜಾಗದ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ, ಹಣದ ಸಮಸ್ಯೆ ಎಂದವರಿಗೆ ನಾನು ಕೆಲವು ಪ್ರಶ್ನೆ ಕೇಳಿದೆ. ನಿಮ್ಮ ಮನೆಯಲ್ಲಿ ಎಷ್ಟು ಮೊಬೈಲ್‌ಗಳಿವೆ? ಎಂದು ಕೆಲವರು ಮೂರ್ನಾಲ್ಕು ಎಂದರು. ಟಿ.ವಿ, ಬೈಕ್, ಚಿನ್ನಾಭರಣ ಇದೆ. ಹಾಗಾದರೆ ಶೌಚಾಲಯ ಯಾಕಿಲ್ಲ ಅಂದರೆ ಮುಗುಳುನಗೆ ಬೀರುತ್ತಾರೆ. ಶೌಚಾಲಯ ನಮಗೆ ಅತ್ಯಂತ ಮೂಲಭೂತ ಅತ್ಯವಶ್ಯಕ ಅನ್ನೊ ಅರಿವು ಅವರಿಗಿಲ್ಲ. ಜಾಗದ ಸಮಸ್ಯೆ ಇದ್ದವರನ್ನು ಮನೆ ಇದಿಯಾ? ಕೊಟ್ಟಗೆ ಇದಿಯಾ? ಇದೆ ಹಾಗಾದರೆ ಶೌಚಾಲಯ ಯಾಕಿಲ್ಲ ಅಂದು ಪ್ರಶ್ನಿಸಿದರೆ ನಗುತ್ತಾರೆ. ಅಂದರೆ ಇಲ್ಲಿ ಶೌಚಾಲಯ ಕಟ್ಟೊಕೆ ಬೇಕಿರೋದು ಜಾಗವಲ್ಲ’ ‘ಮನಸ್ಸು’ ಸರಕಾರ ಸಹಾಯ ಧನವನ್ನು ನೀಡುತ್ತದೆ. ಆದರೆ ಸರಕಾರದ ಸಹಾಯಧನಕ್ಕಾಗಿಯೇ ಮುಷ್ಕರ ಹೂಡಿ ಕಾದು ಕೂರುವುದು ಎಷ್ಟು ಸರಿ? ನಮ್ಮ ಮನೆಯ ಗೌರವವನ್ನು ಸರಕಾರ ನೀಡುವ ಸಬ್ಸಿಡಿಗಾಗಿ ಕಾಯ್ದಿದಿರಿಸುವುದು ಎಷ್ಡು ಸರಿ? ಹಾಗೆ ನೋಡಿದರೆ ನಿಮ್ಮ ಟಿ.ವಿ, ಸ್ಕೂಟರ್ ಮೊಬೈಲ್‌ಗಳಿಗಾಗಿ ಸರಕಾರ ಸಬ್ಸಿಡಿ ನೀಡುತ್ತದೆ? ಇಲ್ಲಿ ನಮ್ಮ ಅರಿವಿಗೆ ಬರಬೇಕಾಗಿದ್ದು ನಮಗೆ ಅವಶ್ಯಕವಿರುವ ಇಲೆಕ್ಟ್ರಾನಿಕ್ ವಸ್ತುಗಳಿಗಿಂತ ಒಂದು ಶೌಚಾಲಯ ನಮ್ಮ ಗೌರವವನ್ನು ಹೆಚ್ಚಿಸುತ್ತದೆ ಎಂಬುದು.

ಹಾಗೆ ನೋಡಿದರೆ ಸಬ್ಸಿಡಿಯಿಂದ ಕಟ್ಟಿದ ಎಷ್ಟೊ ಶೌಚಾಲಯಗಳು ಇಂದು ಕೋಳಿ ಗೂಡಾಗಿವೆ. ಸಾಮಗ್ರಿಗಳ ದಾಸ್ತಾನುಗಳಾಗಿದೆ. ಸೌದೆ ತುಂಬುವ ಪಾತ್ರೆ ಪಗಡಗಳನ್ನಿಡುವ ಸ್ಥಳಗಳಾಗಿವೆ. ಇದನ್ನು ಸರಿಪಡಿಸುವ ಬಹುದೊಡ್ಡ ಜವಾಬ್ದಾರಿ ಅಧಿಕಾರಿ ವರ್ಗದ ಹೆಗಲ ಮೇಲಿದೆ. ಅದಕ್ಕೊಂದು ಬಹುದೊಡ್ಡ ಜಾಗೃತಿಯ ಅಭಿಯಾನವೇ ನಡೆಯಬೇಕಿದೆ. ಅದು ಚಳವಳಿಯ ರೂಪದಲ್ಲಿರಬೇಕು. ಶೌಚಾಲಯವನ್ನು ನಿರ್ಮಿಸುವುದು ಮಾತ್ರ ಚಳವಳಿಯ ಗುರಿಯಾಗಬಾರದು. ಬಯಲು ಬಹಿರ್ದೆಸೆಯನ್ನು ಬಹಿಷ್ಕರಿಸುವುದು ಮತ್ತು ಅದನ್ನು ಬಹಿಷ್ಕರಿಸುವಂತೆ ಮನವೊಲಿಸುವುದು ಸರ್ವೋತ್ಕೃಷ್ಟ ಧ್ಯೇಯವಾಗಬೇಕು. ಮನೆಯ ಮಗುವಿನಿಂದ ಮುದುಕನವರೆಗೆ ಬಯಲು ಮಲದ ಕಾರಣ ಪರಿಣಾಮಗಳ ಗ್ರಹಿಕೆ ಮೂಡಬೇಕು. ನನ್ನ ತಾಯಿಯನ್ನು ನಾನು ಶೃಂಗರಿಸಿದಂತೆ ಈ ನೆಲದ ಮಣ್ಣನ್ನು ಶೃಂಗರಿಸಬೇಕು ಎನ್ನುವ ಮನೋಭಾವ ಮೂಡಿಸಬೇಕು. ಕಲ್ಲಿನ ದೇವತೆಗೆ ಸೀರೆಯನ್ನು ತೊಡಿಸಿ ಪೂಜಿಸುವ ನಾವು, ನಮ್ಮ ಮನೆಯ ನಿಜ ದೇವತೆಯನ್ನು ಬಯಲು ಬಹಿರ್ದೆಸೆಗೆ ದೂಡಿ ಅಗೌರವಿಸಬಾರದು. ಇದನ್ನು ಒಪ್ಪಿಕೊಳ್ಳುವುದು ಮತ್ತು ಸಹಿಸಿಕೊಂಡು ಬದುಕುವುದು ಇನ್ನೆಷ್ಟು ದೂರ. ನಿಮ್ಮ ಬಯಲು ಬಹಿರ್ದೆಸೆ ಇನ್ನೆಷ್ಟು ದೂರ? ಒಂದು ನೆನಪಿರಲಿ ಹಣಕ್ಕಾಗಿ ಶೌಚಾಲಯವಲ್ಲ ಮಾನಕ್ಕಾಗಿ ಶೌಚಾಲಯ ಎಂಬ ಅರಿವು ಬರಬೇಕಿದೆ.

Writer - ಮಲ್ಕುಂಡಿ ಮಹದೇವಸ್ವಾಮಿ

contributor

Editor - ಮಲ್ಕುಂಡಿ ಮಹದೇವಸ್ವಾಮಿ

contributor

Similar News