ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮೂಗನ್ನು ತಿಂದ ಇಲಿ

Update: 2018-12-13 08:13 GMT

ಚೆನ್ನೈ, ಡಿ.13: ಚಿದಂಬರಂ ನಗರದ ಕಾಮರಾಜ್ ಸರಕಾರಿ ಆಸ್ಪತ್ರೆಯ ಶವಾಗಾರದ ಹಾನಿಗೀಡಾದ ಶೈತ್ಯಾಗಾರದಲ್ಲಿರಿಸಲಾಗಿದ್ದ ಮೃತದೇಹವೊಂದರ ಮೂಗನ್ನು ಇಲಿಯೊಂದು ಕಚ್ಚಿ ತಿಂದ ಘಟನೆ ವರದಿಯಾಗಿದೆ.

ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಚಿದಂಬರಂ ಸಮೀಪದ ತಂಡೇಶ್ವರನಲ್ಲೂರು ಗ್ರಾಮದ 22 ವರ್ಷದ ವೈಥೀಶ್ವರನ್ ಎಂಬ ಯುವಕನ ಮೃತದೇಹವನ್ನು ಪೋಸ್ಟ್ ಮಾರ್ಟಂ ನಂತರ ರಾತ್ರಿ ಶವಾಗಾರದಲ್ಲಿರಿಸಿಲಾಗಿತ್ತು. ಬುಧವಾರ ಬೆಳಗ್ಗೆ ಆತನ ಸ್ನೇಹಿತರು ಆತನ ಕಳೇಬರದಲ್ಲಿ ಮೂಗು ನಾಪತ್ತೆಯಾಗಿರುವುದನ್ನು ಕಂಡು ದಂಗಾಗಿದ್ದರು.

ಈ ಬಗ್ಗೆ ಪತ್ರಿಕೆಯೊಂದು ಆಸ್ಪತ್ರೆಯ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಮೊದಲು ನಿರಾಕರಿಸಿದರೂ ನಂತರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ತಮಿಳರಸನ್ ಪ್ರತಿಕ್ರಿಯಿಸಿ, ‘‘ಮೃತದೇಹ ಇರಿಸಲಾಗಿದ್ದ ಶೈತ್ಯಾಗಾರದಲ್ಲಿ ಒಂದು ಸಣ್ಣ ತೂತು ಇದ್ದುದರಿಂದ ಅದರೊಳಗೆ ಇಲಿ ಪ್ರವೇಶಿಸಿರಬಹುದು’’ ಎಂದರು. ‘‘ಮುಂದೆ ಇಂತಹ ಘಟನೆಗಳು ನಡೆಯದಂತೆ ಅದನ್ನು ದುರಸ್ತಿಗೊಳಿಸಲು ಗುತ್ತಿಗೆದಾರರ ಬಳಿ ಹೇಳಲಾಗಿದೆ’’ ಎಂದೂ ಅವರು ಹೇಳಿದರು.

ಆಸ್ಪತ್ರೆಯ ನಿರ್ವಹಣೆ ಸರಿಯಾಗಿಲ್ಲವೇಕೆ ಎಂಬ ಪ್ರಶ್ನೆಗೆ, ಇಂತಹ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಆಸ್ಪತ್ರೆಯನ್ನು ಇದಕ್ಕಿಂತ ಹೆಚ್ಚು ನಿರ್ವಹಣೆ ಮಾಡಲು ಸಾಧ್ಯವಿಲ್ಲ' ಎಂದು ಅವರು ಪ್ರತಿಕ್ರಿಯಿಸಿದರು.

ನವೆಂಬರ್ ತಿಂಗಳಲ್ಲಿ ಕೊಯಂಬತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಆಸ್ಪತ್ರೆಯ ನೆಲದಲ್ಲಿ ಮಲಗಿದ್ದ ಮಹಿಳೆಯೊಬ್ಬಳ ಕಾಲಿನ ಗಾಯವನ್ನು ಬೆಕ್ಕೊಂದು ನೆಕ್ಕುತ್ತಿರುವ ಚಿತ್ರ ಅಂತರ್ಜಾಲದಲ್ಲಿ ಹರಿದಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News