ಮರಾಠಾ ಮೀಸಲಾತಿ ಮತ್ತು ಸರಕಾರದ ಆತ್ಮದ್ರೋಹ

Update: 2018-12-19 08:58 GMT

ಒಂದು ಸುಭದ್ರ ಮತ್ತು ಘನತೆಯುಳ್ಳ ಬದುಕಿಗಾಗಿ ನಿರಂತರ ಸಂಘರ್ಷ ಮಾಡಬೇಕಾದ ಪರಿಸ್ಥಿತಿಯನ್ನು ಮರಾಠಾ ಯುವಕರು ಮಾತ್ರವಲ್ಲ ದೇಶದ ಇಡೀ ಯುವಜನತೆ ಬಯಸುವುದಿಲ್ಲ. ಇದೇ ದೇಶದ ನಿರುದ್ಯೋಗಿ ಸುಶಿಕ್ಷಿತ ಯುವಜನತೆಯ ಸಂಘರ್ಷದ ಹಿಂದಿನ ಪ್ರೇರಣೆಯಾಗಿದೆ. ಈ ಸಂಘರ್ಷವು ಹೋರಾಟ ನಿರತ ಯುವಜನರ ಹೊಸಪಯಣವನ್ನು ಸೂಚಿಸುತ್ತದೆ. ಈ ಯುವಜನತೆಯ ಮೇಲೆ ಯಾವುದೇ ಸರಕಾರಗಳು ತಮ್ಮ ಭರವಸೆ ಅಥವಾ ಅರೆಬೆಂದ ನೀತಿಗಳ ಮೂಲಕ ಶಾಶ್ವತ ನಿಯಂತ್ರಣವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇದು ಇತಿಹಾಸದಲ್ಲಿ ಸಾಬೀತಾಗಿದ್ದರೂ ಮತ್ತೆ ಅದೇ ಕಸರತ್ತಿನಲ್ಲಿ ತೊಡಗಿರುವ ಸರಕಾರ ಆತ್ಮದ್ರೋಹ ಮಾಡಿಕೊಳ್ಳುತ್ತಿದೆ.

ಮಹಾರಾಷ್ಟ್ರ ಸರಕಾರವು ಶಿಕ್ಷಣ ಮತ್ತು ರಾಜ್ಯ ಸರಕಾರದ ಉದ್ಯೋಗಗಳಲ್ಲಿ ಮರಾಠಾ ಜಾತಿಯ ಜನರಿಗೆ ಶೇ.16ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ. ಈ ತೀರ್ಮಾನವು ಅದರ ಫಲಾನುಭವಿಗಳಿಂದ ಮತ್ತು ರಾಜ್ಯ ಸರಕಾರದಿಂದ ಗುಣಾತ್ಮಕವಾಗಿ ಎರಡು ಭಿನ್ನಭಿನ್ನವಾದ ಪ್ರತಿಸ್ಪಂದನೆಯನ್ನು ಹುಟ್ಟುಹಾಕಿದೆ. ಈ ತೀರ್ಮಾನವನ್ನು ನ್ಯಾಯಾಂಗದ ಅನುಮೋದನೆಗೆ ಒಳಪಡಿಸುವ ಪ್ರಯತ್ನಗಳ ಬಗ್ಗೆ ಉದ್ದೇಶಿತ ಫಲಾನುಭವಿಗಳು ತಮ್ಮ ಪ್ರತ್ಯಕ್ಷ ಹಾಗೂ ಪರೋಕ್ಷ ಅಸಮ್ಮತಿಯನ್ನು ಸೂಚಿಸುತ್ತಿದ್ದಾರೆ. ತಮ್ಮ ಪರವಾದ ಈ ತೀರ್ಮಾನವು ಕೂಡಲೇ ಅನುಷ್ಠಾನಕ್ಕೆ ಬರಬೇಕೆಂದು ಅವರು ತುದಿಗಾಲಮೇಲೆ ನಿಂತಿದ್ದಾರೆ. ಅವರ ಈ ಹತಾಷೆಯು ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದ್ದರೂ ಅದು ಹಿಂಸಾಚಾರ ಮತ್ತು ಕಾನೂನುಬಾಹಿರ ಕ್ರಮಗಳ ಸಮರ್ಥನೆಯಾಗಲಾರದು. ಮತ್ತೊಂದು ಕಡೆ ಈ ತೀರ್ಮಾನದ ಸಂಪೂರ್ಣ ಶ್ರೇಯಸ್ಸನ್ನು ತಾನೇ ಪಡೆದುಕೊಳ್ಳುವ ಅತ್ಯುತ್ಸಾಹದಲ್ಲಿದೆ. ಸರಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಈ ಅತ್ಯುತ್ಸಾಹವು ಎದ್ದುಕಾಣುತ್ತದೆ. ಅವುಗಳಲ್ಲಿ, ಆ ಮಸೂದೆಗೆ ರಾಜ್ಯಪಾಲರು ತುರ್ತಾಗಿ ಅನುಮೋದನೆ ನೀಡಿದ್ದು, ‘ಮಹಾಭಾರತಿ’ ಎಂಬ ಹೆಸರಿನಲ್ಲಿ ದೊಡ್ಡ ಮಟ್ಟದ ನೇಮಕಾತಿಯನ್ನು ಪ್ರಾರಂಭಿಸಿರುವುದು ಮತ್ತು ಮರಾಠಾ ಜಾತಿಯ ಸದಸ್ಯರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿರುವುದೂ ಒಳಗೊಂಡಿದೆ. ಮೀಸಲಾತಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕೆಂದು ಮರಾಠರು ತೋರುತ್ತಿರುವ ಆಗ್ರಹವನ್ನು ಈ ವಿಷಯದ ಬಗ್ಗೆ ಹಿಂದಿನ ಸರಕಾರಗಳು ನಡೆದುಕೊಂಡ ಸಂದರ್ಭದಲ್ಲಿಟ್ಟು ಅರ್ಥಮಾಡಿಕೊಳ್ಳಬೇಕು. ಇದರಲ್ಲಿ ಮರಾಠಾ ಮೀಸಲಾತಿ ವಿಷಯವನ್ನು ಗೊಂದಲಮಯವಾಗಿ ಮತ್ತು ಅನಿಶ್ಚಿತವಾಗಿ ನಿರ್ವಹಿಸಿದ ಈ ಹಿಂದಿನ ಬಿಜೆಪಿ-ಶಿವಸೇನಾ ಸರಕಾರವೂ ಒಳಗೊಂಡಿದೆ. ಕಳೆದ ಮೂರು ವರ್ಷದಿಂದ ಮರಾಠಾ ಯುವಕರು ರಾಜ್ಯಾದ್ಯಂತ ಸಂಘಟಿಸುತ್ತಿದ್ದ ಬೃಹತ್ ಗಾತ್ರದ ಸಮಾವೇಶಗಳು, ವಾಸ್ತವವಾಗಿ ಈ ಗೊಂದಲ ಮತ್ತು ಅನಿಶ್ಚತತೆಗಳನ್ನು ನಿವಾರಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದವು. ಈ ಬೃಹತ್ ಸಂಘಟನಾ ಪ್ರಕ್ರಿಯೆಯಲ್ಲಿ ಮರಾಠಾ ಯುವಕರು ಒಂದು ಸಾಮಾಜಿಕ ಬೆಲೆಯನ್ನು ತೆತ್ತಿದ್ದು, ಅವರ ಈ ಅಸಹನೆಗೆ ಒಂದು ನೈತಿಕ ಮಹತ್ವವಿದೆ. ತಮ್ಮ ಪ್ರಾಮಾಣಿಕ ಪ್ರಯತ್ನಗಳಿಂದಾಗಿಯೇ ಅವರು ತಮ್ಮ ಉದ್ದೇಶಿತ ಗುರಿಯನ್ನು ಮುಟ್ಟಲು ಸಾಧ್ಯವಾಯಿತೆಂದು ಕೆಲವರು ಭಾವಿಸಿಕೊಳ್ಳಲೂ ಬಹುದು. ಈ ತೀರ್ಮಾನಕ್ಕೆ ನ್ಯಾಯಾಂಗದ ಅನುಮೋದನೆಯ ಅಗತ್ಯವನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಮ್ಮತಿಸದವರು ಸರಕಾರದ ತೀರ್ಮಾನದ ಹಿಂದಿನ ಪ್ರಾಮಾಣಿಕತೆಗೆ ಹೆಚ್ಚಿನ ನೈತಿಕ ಒತ್ತು ಕೊಡುತ್ತಿದ್ದಾರೆ. ಈ ಉದಾರತೆಯನ್ನು ತೀವ್ರಗೊಳ್ಳುತ್ತಿರುವ ನಿರುದ್ಯೋಗ ಸಮಸ್ಯೆಯಿಂದ ಹೊರಬರುವ ದಾರಿಯ ಪ್ರಯತ್ನವೆಂದೂ ವಿವರಿಸಬಹುದು. ಸರಕಾರಗಳು ಯಥೇಚ್ಛವಾಗಿ ಪೊಳ್ಳು ಭರವಸೆಯನ್ನು ನೀಡುವ ಮೂಲಕ ಮಾತ್ರ ಈ ಸಮಸ್ಯೆಯನ್ನು ನಿಭಾಯಿಸಲು ಪ್ರಯತ್ನಿಸಿವೆ. ಆದರೆ ಸರಕಾರದ ಈ ಅತ್ಯುತ್ಸಾಹದ ಹಿಂದೆ ಪ್ರಾಮಾಣಿಕತೆಯ ನೈತಿಕ ಬಲವಿಲ್ಲ. ಏಕೆಂದರೆ ಈ ಮೀಸಲಾತಿಯ ತೀರ್ಮಾನದ ಸುತ್ತ ಆವರಿಸಿಕೊಂಡಿರುವ ಕಾನೂನಾತ್ಮಕ ಅತಂತ್ರತೆ ಮತ್ತು ಅನಿಶ್ಚಿತತೆಯ ಅಂಶಗಳನ್ನು ಈ ಸರಕಾರವೂ ಸಹ ಸಂಪೂರ್ಣವಾಗಿ ಹೋಗಲಾಡಿಸಿಲ್ಲ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರವು ಮೀಸಲಾತಿ ತೀರ್ಮಾನವನ್ನು ಮಾಡುವಾಗ ಸಾಕಷ್ಟು ಪೂರ್ವ ತಯಾರಿಯನ್ನು ಮಾಡಬೇಕಿದ್ದ ಬದ್ಧತೆಯನ್ನು ತೋರಿಸಿಲ್ಲ. ವಾಸ್ತವವಾಗಿ ಸರಕಾರದ ತಯಾರಿಯು ಏನೇನೂ ಸಾಲದಾಗಿತ್ತು. ಸರಕಾರಕ್ಕೆ ಈ ತೀರ್ಮಾನ ಮಾಡುವುದು ಎಷ್ಟೇ ಅಗತ್ಯವಾಗಿದ್ದರೂ ಅದಕ್ಕೆ ಬೇಕಿದ್ದ ಸಾಂವಿಧಾನಿಕ ನ್ಯಾಯದ ಬುನಾದಿಯನ್ನು ಒದಗಿಸಲು ಯಾವುದೇ ದೃಢವಾದ ಪ್ರಕ್ರಿಯೆಗಳನ್ನೂ ಸಹ ಸರಕಾರ ಅನುಸರಿಸಿಲ್ಲ. ಮುಂಬೈ ಹೈಕೋರ್ಟು ಈಗಾಗಲೇ ಸೂಚಿಸಿರುವಂತೆ ಈ ಇಡೀ ಮೀಸಲಾತಿ ವಿಷಯವನ್ನು ಅಧ್ಯಯನ ಮಾಡಿ ಶಿಫಾರಸನ್ನು ಮಾಡಲು ನೇಮಕ ಮಾಡಿದ್ದ ಸಮಿತಿಯ ವರದಿಯನ್ನು ಸರಕಾರ ಈವರೆಗೆ ಬಹಿರಂಗಗೊಳಿಸಿಲ್ಲ. ಹೀಗಾಗಿ ತನ್ನ ಈ ಮೀಸಲಾತಿ ತೀರ್ಮಾನವನ್ನು ಕಾನೂನಾತ್ಮಕ ಹೋರಾಟದ ಸಿಕ್ಕಿನಲ್ಲಿ ಸಿಲುಕದಂತಿರಲು ಬೇಕಾದ ತಳಹದಿಯನ್ನು ಸರಕಾರ ರೂಪಿಸಲು ಸಿದ್ಧವಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಈ ಕಾರಣದಿಂದಾಗಿಯೇ ಜಾತಿ ಶ್ರೇಣೀಕರಣದ ಯಾವ ನಿರ್ದಿಷ್ಟ ಅಂಶಗಳಿಂದಾಗಿ ಮರಾಠರನ್ನೂ ಒಳಗೊಂಡಂತೆ ಯಾವುದೇ ಜಾತಿಗಳಿಗೆ ವಿವಿಧ ವಲಯಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲೂ ಆಗುತ್ತಿಲ್ಲ. ಜಾತಿ ಶ್ರೇಣೀಕರಣದಲ್ಲಿ ಅಂತರ್ಗತವಾಗಿರುವ ದಮನ ಪ್ರವೃತ್ತಿಯ ಭಾಗವಾಗಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮರಾಠಾ ಜಾತಿಯ ಸದಸ್ಯರು ಸಾಮಾಜಿಕ ದಮನಕ್ಕೆ ಒಳಗಾಗುತ್ತಿದ್ದಾರೆಂಬುದನ್ನು ತೋರಿಸಬಹುದು. ಸಾಮಾಜಿಕವಾಗಿ ಹೇರಲ್ಪಟ್ಟ ದೌರ್ಬಲ್ಯಗಳು ವಿವಿಧ ಮಟ್ಟದಲ್ಲಿ ಮರಾಠರನ್ನು ಸಹ ಈ ದಮನದ ಪರಿಧಿಯೊಳಗೆ ತಂದಿದೆಯೆಂಬುದು ಈ ತೀರ್ಮಾನಕ್ಕೆ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಬುನಾದಿಯನ್ನು ಒದಗಿಸುತ್ತದೆ. ಆದರೆ ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ನ್ಯಾಯದ ಬಗೆಗಿನ ವಿಶಾಲ ತತ್ವವು ಮಹಾರಾಷ್ಟ್ರ ಸರಕಾರದ ತೀರ್ಮಾನಕ್ಕೆ ಬೆಂಬಲ ಒದಗಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯದ ತತ್ವವನ್ನು ರಾಜಕೀಯದ ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆಯೆಂಬುದು ಯಾರಿಗಾದರೂ ಸ್ಪಷ್ಟವಾಗುತ್ತದೆ. ಮರಾಠಾ ಮೀಸಲಾತಿಗೆ ಶಿಫಾರಸು ಮಾಡಿದ ಸಮಿತಿಯ ವರದಿಯು ಬಹಿರಂಗ ಮಾಡದ ಹಿನ್ನೆಲೆಯಲ್ಲಿ ಸರಕಾರವು ತನ್ನ ಈ ತೀರ್ಮಾನವನ್ನು ಅವಸರದಲ್ಲಿ ಮಾಡಿದೆಯೆಂಬ ತೀರ್ಮಾನಕ್ಕೆ ಬರದೆ ಗತ್ಯಂತರವಿಲ್ಲ. ಸರಕಾರವಂತೂ ಮರಾಠಾ ಯುವಕರು ತಮ್ಮ ಸರಕಾರದ ಬಗ್ಗೆ ಸಕಾರಾತ್ಮಕ ಧೋರಣೆಯಿಂದ ಇರುವಂತೆ ಮಾಡಲು ಬೇಕಾದ ಎಲ್ಲವನ್ನೂ ಮಾಡುತ್ತಿದೆ. ಈ ಧೋರಣೆಯು 2019ರ ಚುನಾವಣೆಯ ತನಕವೂ ಉಳಿದುಕೊಳ್ಳಬೇಕೆಂಬುದು ಸರಕಾರದ ನಿರೀಕ್ಷೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಮೀಸಲಾತಿ ಕೋಟಾದ ಸುತ್ತಲಿನ ವಾಸ್ತವವು ಅನಾವರಣಗೊಳ್ಳುತ್ತಿದ್ದಂತೆ 2019ರಲ್ಲಿ ಅಧಿಕಾರವನ್ನು ಹಿಡಿಯಬೇಕೆಂಬ ಬಿಜೆಪಿ-ಶಿವಸೇನಾ ಪಕ್ಷಗಳ ಹಂಬಲಕ್ಕೆ ಮಿತಿಗಳು ಸೃಷ್ಟಿಯಾಗುತ್ತಾ ಹೋಗುತ್ತವೆ. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿಯನ್ನು ವಿಸ್ತರಿಸಬೇಕೆಂಬ ಆಗ್ರಹದಲ್ಲಿ ಈಗಾಗಲೇ ಆ ಮಿತಿಯು ಸ್ಪಷ್ಟಗೊಳ್ಳುತ್ತಿದೆ. ಇದು ಸರಕಾರಿ ವಲಯದಲ್ಲಿ ಉದ್ಯೋಗವನ್ನು ಸೃಷ್ಟಿಸುವ ಸಾಮರ್ಥ್ಯವು ಸರಕಾರಕ್ಕಿಲ್ಲವೆಂಬುದನ್ನೇ ಹೇಳುತ್ತದೆ. ವಾಸ್ತವವಾಗಿ ಉದ್ಯೋಗ ಸೃಷ್ಟಿಗಾಗಿ ಹೆಚ್ಚುತ್ತಿರುವ ಆಗ್ರಹಗಳು ಬರಲಿರುವ ದಿನಗಳಲ್ಲಿ ಯಾವುದೇ ಸರಕಾರವು ಎದುರಿಸಬೇಕಿರುವ ನಿರಂತರ ಸಾಮಾಜಿಕ ಸವಾಲಾಗಿದೆ. ಒಂದು ಸುಭದ್ರ ಮತ್ತು ಘನತೆಯುಳ್ಳ ಬದುಕಿಗಾಗಿ ನಿರಂತರ ಸಂಘರ್ಷ ಮಾಡಬೇಕಾದ ಪರಿಸ್ಥಿತಿಯನ್ನು ಮರಾಠಾ ಯುವಕರು ಮಾತ್ರವಲ್ಲ ದೇಶದ ಇಡೀ ಯುವಜನತೆ ಬಯಸುವುದಿಲ್ಲ. ಇದೇ ದೇಶದ ನಿರುದ್ಯೋಗಿ ಸುಶಿಕ್ಷಿತ ಯುವಜನತೆಯ ಸಂಘರ್ಷದ ಹಿಂದಿನ ಪ್ರೇರಣೆಯಾಗಿದೆ. ಈ ಸಂಘರ್ಷವು ಹೋರಾಟ ನಿರತ ಯುವಜನರ ಹೊಸಪಯಣವನ್ನು ಸೂಚಿಸುತ್ತದೆ. ಈ ಯುವಜನತೆಯ ಮೇಲೆ ಯಾವುದೇ ಸರಕಾರಗಳು ತಮ್ಮ ಭರವಸೆ ಅಥವಾ ಅರೆಬೆಂದ ನೀತಿಗಳ ಮೂಲಕ ಶಾಶ್ವತ ನಿಯಂತ್ರಣವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇದು ಇತಿಹಾಸದಲ್ಲಿ ಸಾಬೀತಾಗಿದ್ದರೂ ಮತ್ತೆ ಅದೇ ಕಸರತ್ತಿನಲ್ಲಿ ತೊಡಗಿರುವ ಸರಕಾರ ಆತ್ಮದ್ರೋಹ ಮಾಡಿಕೊಳ್ಳುತ್ತಿದೆ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News