ಈ 3 ಬೇಡಿಕೆಗಳನ್ನು ಈಡೇರಿಸದಿದ್ದರೆ ನಿಮ್ಮೊಂದಿಗೆ ಮೈತ್ರಿಯಿಲ್ಲ: ಬಿಜೆಪಿಗೆ ಶಿವಸೇನೆ ಎಚ್ಚರಿಕೆ
ಹೊಸದಿಲ್ಲಿ, ಡಿ.24: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕಾದರೆ ಶಿವಸೇನೆಯು ಕೆಲ ಬೇಡಿಕೆಗಳನ್ನು ಬಿಜೆಪಿ ಮುಂದಿಟ್ಟಿದೆ. ಈ ಬೇಡಿಕೆಗಳನ್ನು ಈಡೇರಿಸಿದಲ್ಲಿ ಮಾತ್ರ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಅದು ತಿಳಿಸಿದೆ.
ಲೋಕಸಭಾ ಚುನಾವಣೆಗೆ ಮೊದಲು ರಾಮ ಮಂದಿರ ನಿರ್ಮಾಣ, ರೈತರ ಸಾಲಮನ್ನಾ ಹಾಗು ಬೆಳೆ ವಿಮೆ ಜಾರಿಯಾಗದಿದ್ದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಕನಸಿನ ಮಾತು ಎಂದು ಶಿವಸೇನೆ ಎಚ್ಚರಿಕೆ ನೀಡಿದೆ.
ಪಂಧರ್ ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವಸೇನೆ ನಾಯಕ ಉದ್ಧವ್ ಠಾಕ್ರೆ, “ರಾಮ ಮಂದಿರ, ರೈತರ ಸಾಲಮನ್ನಾ ಮತ್ತು ಬೆಳೆ ವಿಮೆ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಶಿವಸೇನೆ ಆಸಕ್ತಿ ಹೊಂದಿಲ್ಲ” ಎಂದು ಹೇಳಿದರು.
“ಪ್ರಕರಣ ಕೋರ್ಟ್ ನಲ್ಲಿದೆ ಎಂದು 30 ವರ್ಷಗಳಿಂದ ಹೇಳುತ್ತಿದ್ದೀರಿ. ಹಿಂದೂಗಳು ಅಮಾಯಕರೇ ಹೊರತು ಮೂರ್ಖರಲ್ಲ. ರಾಮ ಮಂದಿರದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯಲಿ” ಎಂದವರು ಹೇಳಿದರು.