ತಾಯಿಯ ಮಡಿಲಲ್ಲಿದ್ದ ಮಗುವನ್ನು ಹೊತ್ತೊಯ್ದ ಚಿರತೆ

Update: 2019-01-16 16:55 GMT

ಸಿಲಿಗುರಿ, ಜ. 16: ಪಶ್ಚಿಮಬಂಗಾಳದ ಅಲಿಪುರ್ದುವಾರ್ ಜಿಲ್ಲೆಯಲ್ಲಿರುವ ಚಹಾ ತೋಟವೊಂದರಲ್ಲಿ ಚಿರತೆಯೊಂದು ತಾಯಿಯ ಮಡಿಲಿನಲ್ಲಿದ್ದ ಮೂರು ವರ್ಷದ ಹೆಣ್ಣು ಮಗುವನ್ನು ಹೊತ್ತೊಯ್ದು ಕೊಂದು ಹಾಕಿದೆ. ಡಿಸೆಂಬರ್ 12ರಿಂದ ಚಿರತೆಯಿಂದ ಹತ್ಯೆಯಾಗುತ್ತಿರುವ ಮೂರನೆ ಮಗು ಇದಾಗಿದೆ.

ಗಾರ್ಗಂದ ಚಹಾ ತೋಟದ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ತಾಯಿ ಪೂಜಾ ಚಹಾ ತೋಟದಲ್ಲಿರುವ ತನ್ನ ಮನೆಯ ಹೊರಗೆ ಅಡುಗೆ ಮಾಡುತ್ತಿದ್ದ ಸಂದರ್ಭ ಮಡಿಲಿನಲ್ಲಿದ್ದ ಪುತ್ರಿ ಪ್ರಣೀತಾ ಓರಾನ್‌ಳನ್ನು ಚಿರತೆ ಹೊತ್ತೊಯ್ದು ಕೊಂದು ಹಾಕಿದೆ.

ಅಲಿಪುರ್ದುವಾರ್‌ನ ಬಿರ್ಪಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೂಜಾ ಅವರ ನಿವಾಸದಿಂದ ಮೂರು ಕಿ.ಮೀ. ದೂರದಲ್ಲಿರುವ ಪ್ರದೇಶದಲ್ಲಿ ಪ್ರಣೀತಾಳ ಮೃತದೇಹ ಬುಧವಾರ ಪತ್ತೆಯಾಗಿದೆ. ‘‘ಮನೆಯ ಎದುರು ಪೂಜಾ ಅವರು ಅಡುಗೆ ಮಾಡುತ್ತಿದ್ದರು. ಅವರೊಂದಿಗೆ ಮಗು ಕೂಡ ಇತ್ತು. ಚಿರತೆ ಮಗುವನ್ನು ಹೊತ್ತೊಯ್ದಾಗ ತಾಯಿ ಕೂಡ ಚಿರತೆ ಹಿಂದೆ ಬೊಬ್ಬೆ ಹಾಕುತ್ತಾ ಓಡಿದರು’’ ಎಂದು ಸ್ಥಳೀಯ ಶಾಲಾ ಅಧ್ಯಾಪಕ ಶಿಬು ಛೇತ್ರಿ ತಿಳಿಸಿದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News