ಓತಿಕ್ಯಾತನ ಆತ್ಮಹತ್ಯಾ ಪ್ರಸಂಗ..!!

Update: 2019-01-20 11:14 GMT

ಮೈಸೂರಿನ ‘ಶ್ರೀರಾಮಪುರ’ ಸ್ಟಾಪಿನಲ್ಲಿ ಬಸ್ಸಿಗೆ ಕಾಯ್ತಿದ್ದೆ.

ಚ್ಚೂಚ್ಚೂ..ಅಂತ ಯಾರೋ ಕರೆದಹಾಗಾಯ್ತು. ನೋಡಿದ್ರೆ ಈ ಓತೀಕೇತರಾಯ..!!
 ‘‘ಓಯ್..ಎಂತ ಮಾರ್ರೇ?’’ ಕೇಳಿದೆ.
ರಾಯ ಗಂಭೀರವಾಗಿ ‘‘ನಾನು ಸೂಸೈಡ್ ಮಾಡ್ಕೊಳ್ಳೋಕೆ ಬಾವಿಗೆ ಹಾರ್ತಿದೀನಿ’’ ಅಂತು..!!
‘‘ಓ ಮೈಗಾಡ್..ಈಗೇನು ಮೀಡಿಯಾದವ್ರನ್ ಕರೀಬೇಕಾ..?’’
‘‘ಅದೇನೂ ಬೇಡ’’
‘‘ಹೌದೂ..ಸೂಸೈಡ್ ಯಾಕೆ?’’
‘‘ರಿಲೀಜಸ್ ಕಾಸ್‌ಗೆ’’
‘‘ನಿಂಗೆ ಕಾಸ್ ಯಾರು ಕೊಡಬೇಕು?’’
cause‘‘ಆ ಕಾಸಲ್ಲ ಮಾರಾಯಾ. ಇಂಗ್ಲಿಷ್‌ನ ..!!’’
‘‘ಓ..ಹುತಾತ್ಮನಾಗೋದು..!
ಯಾವ ಕಾಸ್ ನಿಂದು?’’
‘‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿಲ್ವಲ್ಲ ಇನ್ನೂ..ಅದ್ಕೇ..!’’
‘‘ಆದ್ರೆ ನಿಂಗೂ ಅದಕ್ಕೂ ಏನು ಸಂಬಂಧ?’’
 ‘‘ನಾವು ಓತಿಕ್ಯಾತರೆಲ್ಲ ಈಗ ಅಪ್ರತಿಮ ರಾಮಭಕ್ತರು..’’
‘‘ಹೌದಾ..ಅಳಿಲುಗಳಿಗಲ್ವಾ ರಾಮಭಕ್ತ ಪದವಿ ಕೊಟ್ಟಿದ್ದು? ಲಂಕೆಗೆ ಬ್ರಿಡ್ಜ್ ಕಟ್ಟಲು ಸಹಾಯ ಮಾಡಿದ್ದಕ್ಕೆ ಬ್ರಿಡ್ಜ್ ಭೂಷಣ ಪ್ರಶಸ್ತಿ ಅವರಿಗಲ್ವಾ ಕೊಟ್ಟದ್ದು?’’
‘‘ಅದೆಲ್ಲ ರಾಮಾಯಣ ಕಾಲದಲ್ಲಿ.. ಈಗ ನಾವೇ ರಾಮಭಕ್ತರು..!!’’
‘‘ಹೌದಾ.. ಯಾವಾಗಿಂದ ಇದು?’’
‘‘ಅಯೋಧ್ಯೆಯಲ್ಲಿ ಮಸೀದಿ ಉರುಳಿಸಿ ರಾಮಮಂದಿರ ಕಟ್ಟಲು ಹೊರಟ್ರಲ್ಲ.. ಆವಾಗಿಂದ..!!’’
‘‘ಓ..ಸರಿ ಸರಿ..ಆದ್ರೆ ಅದಾಗಿ ಕಾಲು ಶತಮಾನವೇ ದಾಟಿತಲ್ಲ..ಈಗ್ಯಾಕೆ ಸೂಸೈಡ್?’’
‘‘ನಾನು ನಿಜ ರಾಮ ಭಕ್ತ.. ರಾಮ ಮಂದಿರ ಈಗಲ್ಲದಿದ್ದರೆ ಇನ್ಯಾವಾಗ?’’
‘‘ಆದ್ರೆ..ಸುಪ್ರೀಂ ಕೋರ್ಟು ತೀರ್ಪು ಬರೋವರೆಗಾದ್ರೂ ಕಾಯಬಹುದಲ್ವಾ’’
‘‘ನೋ..ನೋ..No way..’’
‘‘ಅಲ್ಲೀ ತನಕ ಕಾಯೋಕಾಗಲ್ಲ. ನಾನು ಬಾವಿಗೆ ಹಾರಿ ಸೂಸೈಡ್ ಮಾಡ್ಕೊಳ್ಳೋದೇಯ.. ಅನ್ನುತ್ತ ದಬಕ್ಕನೆ ಬಾವಿಗೆ ಹಾರಿಯೇ ಬಿಡ್ತು...’’
ಹಾರಿದ ಬಾವಿಯನ್ನು ಬಗ್ಗಿ ನೋಡಿದೆ..
‘‘ಆಹಾ..ಆಹಾ..ನಿಜವಾಗಿಯೂ ನೀನು ಓತಿಕ್ಯಾತನೇ ಸೈ..!! ಕಾರ್ಪೋರೇಷನ್ನಿನವರು ಬೇಲಿಗೆ ಗೂಟ ಹಾಕಲು ತೋಡಿದ ಕಾಂಕ್ರೀಟ್ ತೂತನ್ನೇ ಬಾವಿ ಅಂತ ನನ್ನನ್ನೇ ಯಾಮಾರಿಸ್ತಿಯಲ್ಲ..ನಿನ್ನ ಎಲೆಕ್ಷನ್ ಗಿಮಿಕ್ಕು ನಂಬೋಕೆ
ನಾನೇನು ನಿನ್ ಹಾಗೆ ಭಕ್ತ ಅಂದ್ಕೊಂಡ್ಯಾ?’’ ಅಂತ ನಾನಂದಿದ್ದೇ ತಡ..
ಛಂಗನೇ ಬಾವಿಯಿಂದ ಮೇಲಕ್ಕೆ ನೆಗೆದು ಕೂತಿತು..
ನಿಜಭಕ್ತನ ಬರವಿಗೆ ಕಾಯುತ್ತಾ..!!

Writer - - ಗಿರಿಧರ ಕಾರ್ಕಳ

contributor

Editor - - ಗಿರಿಧರ ಕಾರ್ಕಳ

contributor

Similar News