ಬಿಹಾರ: ಆರ್‌ಜೆಡಿ ಮುಖಂಡನ ಹತ್ಯೆ

Update: 2019-01-24 15:16 GMT

ಪಾಟ್ನ, ಜ.24: ರಾಷ್ಟ್ರೀಯ ಜನತಾದಳದ ಮುಖಂಡ ರಘುವರ್ ರಾಯ್‌ರನ್ನು ಅವರ ಮನೆಯ ಬಳಿಯೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಬಿಹಾರದ ಸಮಷ್ಟಿಪುರ ಜಿಲ್ಲೆಯ ಕಲ್ಯಾಣಪುರ ಎಂಬಲ್ಲಿ ಘಟನೆ ನಡೆದಿದೆ. ಬೆಳಿಗ್ಗೆ ಸುಮಾರು 7 ಗಂಟೆಗೆ ತನ್ನ ಮನೆಯಿಂದ ವಾಯುಸಂಚಾರಕ್ಕೆ ಹೊರಟಿದ್ದ ರಾಯ್‌ರನ್ನು ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗುಂಡೇಟಿನಿಂದ ರಾಯ್ ಕುಸಿದುಬಿದ್ದಾಗ ಜನ ಅತ್ತ ಧಾವಿಸಿದ್ದಾರೆ. ಇದನ್ನು ಕಂಡು ದುಷ್ಕರ್ಮಿಗಳು ಪಲಾಯನ ಮಾಡಿದ್ದಾರೆ. ತಕ್ಷಣ ರಾಯ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ರಾಯ್ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯರಾಗಿದ್ದಾರೆ. ಘಟನೆಯ ಬಳಿಕ ಆಕ್ರೋಶಿತ ಆರ್‌ಜೆಡಿ ಕಾರ್ಯಕರ್ತರ ಗುಂಪು ಸಮಷ್ಟಿಪುರ- ದರ್ಬಾಂಗಾ ರಸ್ತೆಯಲ್ಲಿ ಟಯರ್‌ಗಳನ್ನು ಸುಟ್ಟು ಸಂಚಾರಕ್ಕೆ ಅಡ್ಡಿ ತಂದರಲ್ಲದೆ , ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News