ಅಮ್ರೋಹ್ ಎನ್ಕೌಂಟರ್: ಉ.ಪ್ರ. ಸರಕಾರದಿಂದ ಮೃತ ಕಾನ್ಸ್ಟೆಬಲ್ ಪತ್ನಿಗೆ 50 ಲಕ್ಷ ರೂ. ಪರಿಹಾರ ಘೋಷಣೆ
ಲಕ್ನೋ, ಜ. 28: ಅಮ್ರೋಹದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆಯಾದ ಉತ್ತರಪ್ರದೇಶದ ಪೊಲೀಸ್ ಕಾನ್ಸ್ಟೆಬಲ್ ಹರ್ಷ್ ಚೌಧರಿ ಅವರ ಪತ್ನಿಗೆ 40 ಲಕ್ಷ ರೂ. ಹಾಗೂ ತಂದೆ-ತಾಯಿಗೆ 10 ಲಕ್ಷ ರೂ. ಪರಿಹಾರ ಧನವನ್ನು ಮುಖ್ಯಮಂತ್ರಿ ಆದಿತ್ಯನಾಥ್ ರವಿವಾರ ಘೋಷಿಸಿದ್ದಾರೆ.
ಇದಲ್ಲದೆ, ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ಕೆಲಸವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಮೃತಪಟ್ಟ ಕಾನ್ಸ್ಟೆಬಲ್ ಹರ್ಷ್ ಚೌಧರಿ ಅವರು ಹತ್ರಾಸ್ ಜಿಲ್ಲೆಯವರು. ಅವರ ಅಂತ್ಯಸಂಸ್ಕಾರವನ್ನು ರಾಜ್ಯ ಸರಕಾರವೇ ನೆರವೇರಿಸಿತ್ತು. ಅಮ್ರೋಹ ಜಿಲ್ಲೆಯ ಬಛ್ರೋನ್ನಲ್ಲಿ ರೌಡಿ ಶೀಟರ್ ಶಿವಾವತರ್ನ ಶೋಧ ಕಾರ್ಯಾಚರಣೆಗೆ ಪೊಲೀಸರು ತೆರಳಿದ್ದ ಸಂದರ್ಭ ಎನ್ಕೌಂಟರ್ ನಡೆಯಿತು. ಪೊಲೀಸರು ಶಿವಾವತಾರ್ಗೆ ಶರಣಾಗುವಂತೆ ನಿರ್ದೇಶಿಸಿದರು. ಆದರೆ, ಆತ ಗುಂಡು ಹಾರಿಸಿದ. ಇದರಿಂದ ಹರ್ಷ್ ಕುಮಾರ್ ಅವರು ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಮೊರದಾಬಾದ್ನಲ್ಲಿರುವ ಟಿಎಂಯು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ವೇಳೆ ಮೃತರಾಗಿದ್ದರು ಎಂದು ಕಾನೂನು ಹಾಗೂ ಸುವ್ಯವಸ್ಥೆಯ ಹೆಚ್ಚುವರಿ ಪ್ರಧಾನ ನಿರ್ದೇಶಕ ಆನಂದ್ ಕುಮಾರ್ ಹೇಳಿದ್ದಾರೆ.
ಈ ಸಂದರ್ಭ ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ಗುಂಡು ತಗುಲಿ ರೌಡಿ ಶಿವಾವತಾರ್ ಕೂಡ ಗಾಯಗೊಂಡಿದ್ದ. ಅನಂತರ ಆತ ಅದೇ ಆಸ್ಪತ್ರೆಯಲ್ಲಿ ಮತಪಟ್ಟಿದ್ದ.