ಮೋಹನ್ ಲಾಲ್ ರನ್ನು ಸೆಳೆಯಲು ಹೊರಟ ಬಿಜೆಪಿಗೆ ಅಭಿಮಾನಿ ಸಂಘಟನೆಗಳ ಎಚ್ಚರಿಕೆ ಏನು ಗೊತ್ತೇ?
ಕೊಚ್ಚಿ, ಫೆ.3: ರಾಜಕೀಯ ಪ್ರವೇಶ ಕುರಿತಂತೆ ಮಲಯಾಳಂ ಸಿನೆಮಾ ನಟ ಮೋಹನ್ ಲಾಲ್ ಇನ್ನೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ನಡುವೆ ಅವರು ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳು ಕೇಳಿಬರುತ್ತಿದೆ. ಆದರೆ ಮೋಹನ್ ಲಾಲ್ ಬಿಜೆಪಿಯಿಂದ ಸ್ಪರ್ಧಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮೋಹನ್ ಲಾಲ್ ರ ಅತೀ ದೊಡ್ಡ ಅಭಿಮಾನಿ ಬಳಗದ ನಾಯಕ ವಿಮಲ್ ಕುಮಾರ್ ನೀಡಿರುವ ಹೇಳಿಕೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
“ಮೋಹನ್ ಲಾಲ್ ತಮ್ಮ ಪಕ್ಷದಲ್ಲಿ ಸ್ಪರ್ಧಿಸುವಂತೆ ಮಾಡಲು ಬಿಜೆಪಿಗೆ ಬೇರೆ ಉದ್ದೇಶಗಳಿರಬಹುದು. ಇಂತಹ ನಟನನ್ನು ರಾಜಕೀಯಕ್ಕೆ ಕರೆತಂದು ಹಲವು ಆರೋಪಗಳಿಗೆ ಗುರಿಯಾಗಿಸುವುದು ಅವರ ಯೋಜನೆಯಾಗಿರಬಹುದು” ಎಂದು ಚಾನೆಲ್ ಒಂದರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಮಲ್ ಕುಮಾರ್ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸುವಂತೆ ಪಕ್ಷದ ನಾಯಕರು ಮೋಹನ್ ಲಾಲ್ ರನ್ನು ಭೇಟಿಯಾಗಿದ್ದೇವೆ ಎಂದು ಕೇರಳದ ಏಕೈಕ ಬಿಜೆಪಿ ಶಾಸಕ ಒ. ರಾಜಗೋಪಾಲ್ ಹೇಳಿಕೆ ನೀಡಿದ ಕೆಲ ದಿನಗಳ ನಂತರ ಅಭಿಮಾನಿಗಳ ಸಂಘಟನೆಯ ನಾಯಕನಿಂದ ಈ ಹೇಳಿಕೆ ಬಂದಿದೆ.